ಹೋಂವರ್ಕ್ ಮಾಡ್ಕೊಂಡು ಬಾರದ ವಿದ್ಯಾರ್ಥಿಗಳಿಗೆ ಬಳೆ ತೊಡಿಸಿದ ಟೀಚರ್

Public TV
1 Min Read

ಗಾಂಧೀನಗರ: ಹೋಂ ವರ್ಕ್ ಮಾಡಿಕೊಂಡು ಬಾರದ ಮೂವರು ವಿದ್ಯಾರ್ಥಿಗಳಿಗೆ ಶಿಕ್ಷೆಯಾಗಿ ಟೀಚರ್ ಬಳೆ ತೊಡಿಸಿದ ಘಟನೆ ಗುಜರಾತ್ ನ ಮೆಹ್ಶಾನ ಜಿಲ್ಲೆಯ ಖೆರಲು ತಾಲೂಕಿನಲ್ಲಿ ನಡೆದಿದೆ.

ಸರ್ಕಾರಿ ಪ್ರಾಥಮಿಕ ಶಾಲೆಯ ಟೀಚರ್ ಮನಭಾಯ್ ಪ್ರಜಾಪತಿ ಮೇಲೆ ಈ ಆರೋಪ ಕೇಳಿಬಂದಿದೆ. 6 ನೇ ತರಗತಿಯ ಮೂವರು ವಿದ್ಯಾರ್ಥಿಗಳು ಟೀಚರ್ ಕೊಟ್ಟ ಮನೆ ಕೆಲಸವನ್ನು ಸಂಪೂರ್ಣ ಮಾಡದೇ ಶಾಲೆಗೆ ಬಂದಿದ್ದಾರೆ.

ತರಗತಿಗೆ ಬಂದ ಟೀಚರ್ ಎಲ್ಲರ ಹೋಂ ವರ್ಕ್ ಗಮನಿಸಿದ್ದಾರೆ. ಈ ವೇಳೆ ಮೂವರು ಟೀಚರ್ ಕೊಟ್ಟ ಕೆಲಸವನ್ನು ಸಂಪೂರ್ಣ ಮಾಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಟೀಚರ್, ಬಳೆ ಹಾಕಿಕೊಂಡಿದ್ದ ವಿದ್ಯಾರ್ಥಿನಿಯನ್ನು ಕರೆದು ಕೈಯಲಿದ್ದ ಬಳೆಯನ್ನು ಬಿಚ್ಚಿಕೊಡುವಂತೆ ಕೇಳಿದ್ದಾರೆ. ಹಾಗೆಯೇ ವಿದ್ಯಾರ್ಥಿನಿ ಕೂಡ ಬಳೆ ಬಿಚ್ಚಿ ಕೊಟ್ಟಿದ್ದಾಳೆ. ನಂತರ ಟೀಚರ್ ಮೂವರೂ ವಿದ್ಯಾರ್ಥಿಗಳ ಕೈಗೆ ಬಳೆಗಳನ್ನು ತೊಡಿಸಿದ್ದಾರೆ.

ಬಳೆ ತೊಡಿಸಿದ್ದ ಪರಿಣಾಮ ವಿದ್ಯಾರ್ಥಿಗಳು ನಾಚಿಕೆಯಿಂದ ಶುಕ್ರವಾರ ಹಾಗೂ ಶನಿವಾರ ಶಾಲೆಗೆ ಗೈರಾಗಿದ್ದಾರೆ. ಹೀಗಾಗಿ ಇದರಿಂದ ಗಾಬರಿಯಾದ ಮೂವರ ಪೋಷಕರು ಶನಿವಾರ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಸದ್ಯ ಘಟನೆ ಸಂಬಂಧ ಟೀಚರ್ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇಂದು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನೂ ಶಾಲೆಗೆ ಕರೆಸಿರುವುದಾಗಿ ಶಿಕ್ಷಣಾಧಿಕಾರಿ ಸ್ಮಿತಾ ಪಟೇಲ್ ತಿಳಿಸಿದ್ದಾರೆ.

ಘಟನೆ ಸಂಬಂಧ ತನಿಖೆ ನಡೆಯುತ್ತಿರುವುದರಿಂದ ಶಿಕ್ಷಕಿಯನ್ನು ರಜೆಯ ಮೇಲೆ ಕಳುಹಿಸಲಾಗಿದೆ. ಇಂದಿನಿಂದ ಮೂವರು ವಿದ್ಯಾರ್ಥಿಗಳು ಕೂಡ ಶಾಲೆಗೆ ಬಂದಿದ್ದಾರೆ ಎಂದು ತಾಲೂಕು ಶಿಕ್ಷಣಾಧಿಕಾರಿ ಕಲ್ಪನಾ ಚೌಧರಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *