ದೇವಸ್ಥಾನದಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್‌ ಭಾವಚಿತ್ರಕ್ಕೆ ಪೂಜೆ – ಅರ್ಚಕ ಅಮಾನತು

Public TV
1 Min Read

ಬಳ್ಳಾರಿ: ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿರುವ ಐತಿಹಾಸಿಕ ದೊಡ್ಡಬಸವೇಶ್ವರ ಮೂರ್ತಿ ಜೊತೆಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಭಾವಚಿತ್ರಕ್ಕೂ ಪೂಜೆ ಮಾಡಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆಕ್ರೋಶ ಭುಗಿಲೆದ್ದಿದೆ. ಭಾನುವಾರ ಅಮಾವಾಸ್ಯೆ ದಿನದಂದು ನಟ ದರ್ಶನ್ ಪೋಟೋಗಳಿಗೆ ಪೂಜೆ ಮಾಡಲಾಗಿದೆ.

ವಿಶೇಷ ಧಾರ್ಮಿಕ ಪೂಜೆಯ ಮೂಲಕ ಮೂರ್ತಿ ಕೆಳಗೆ ದರ್ಶನ್ ಪೋಟೊ ಇಟ್ಟು ಪೂಜೆ ಸಲ್ಲಿಕೆ ಮಾಡಲಾಗಿದೆ. ಅರ್ಚಕರೇ ದರ್ಶನ್ ಅವರ ಪೋಟೊ ಇಟ್ಟು ಪೂಜೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಟ ದರ್ಶನ್ ಅವರ ಐದಾರು ಭಾವಚಿತ್ರಗಳನ್ನ ಬಸವೇಶ್ವರರ ಮೂರ್ತಿಯ ಅಕ್ಕಪಕ್ಕ ಇಟ್ಟು ಪೂಜೆ ಮಾಡಲಾಗಿದೆ. ಇದನ್ನೂ ಓದಿ: ಉಜಿರೆಯ ಸುರ್ಯ ದೇವಸ್ಥಾನಕ್ಕೆ ರಾಧಿಕಾ ಜೊತೆಗೂಡಿ ಆಗಮಿಸಿ ಹರಕೆ ತೀರಿಸಿದ ಯಶ್‌

ಸದ್ಯ ಪೂಜೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮೂರ್ತಿ ಕೆಳಗೆ ನಟನ ಭಾವಚಿತ್ರ ಹಾಕಿದ ಹಿನ್ನೆಲೆ ಪರ-ವಿರೋಧದ ಚರ್ಚೆ ಶುರುವಾಗಿದೆ.

ಅರ್ಚಕ ಅಮಾನತು
ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ನಟ ದರ್ಶನ್ ಪೋಟೊ ಇಟ್ಟು ಪೂಜೆ ಮಾಡಿ, ಮಂಗಳಾರತಿ ಮಾಡಿದ ಅರ್ಚಕ ಮಲ್ಲಿ ಎಂಬವರನ್ನು ಅಮಾನತು ಮಾಡಲಾಗಿದೆ. ದೇವಸ್ಥಾನದ ರೂಢಿ ಸಂಪ್ರದಾಯಕ್ಕೆ ಧಕ್ಕೆ ಹಾಗೂ ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆ ಧಾರ್ಮಿಕ ದತ್ತಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಅಮಾನತು ಮಾಡಿ, ವಿಚಾರಣೆ ಮುಗಿಯೋವರೆಗೂ ದೇವಸ್ಥಾನಕ್ಕೆ ಬಾರದಂತೆ ನಿಷೇಧ ಹೇರಿದ್ದಾರೆ. ಇದನ್ನೂ ಓದಿ: ‘ಸ್ವಾತಿಮುತ್ತೇ ಸಿಕ್ಕಂಗೈತೆ’ ಎಂದು ಜ್ಯೂ.ಎನ್‌ಟಿಆರ್ ಜೊತೆ ಹೆಜ್ಜೆ ಹಾಕಿದ ಜಾನ್ವಿ ಕಪೂರ್

Share This Article