ಭಾರತದ ರೈತರು ಕೊಟ್ಟ ಏಟಿಗೆ ಪಾಕ್ ಕಂಗಾಲು – ಟೊಮೆಟೊ ಬೆನ್ನಲ್ಲೇ ಮೆಣಸಿನಕಾಯಿ ಬೆಲೆ ಭಾರೀ ಏರಿಕೆ

Public TV
2 Min Read

ನವದೆಹಲಿ: ಟೊಮೆಟೊ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಮೆಣಸಿಕಾಯಿ ಘಾಟು ಶುರುವಾಗಿದೆ. ಗ್ರಾಹಕರು ಟೊಮೆಟೊ ಮತ್ತು ಹಸಿರು ಮೆಣಸಿನಕಾಯಿ ಸಿಗದೇ ಪರದಾಡುವಂತಾಗಿದ್ದು ಬೆಲೆ ನೋಡಿಯೋ ಹೌಹಾರಿದ್ದಾರೆ ಎಂದು ವರದಿಯಾಗಿದೆ.

ಪುಲ್ವಾಮಾದಲ್ಲಿ ಫೆ. 14ರಂದು ಉಗ್ರರ ದಾಳಿ ನಡೆದ ಭಾರತದ ರೈತರು ಪಾಕಿಸ್ತಾನಕ್ಕೆ ನಾವು ತರಕಾರಿಗಳನ್ನು ರಫ್ತು ಮಾಡುವುದಿಲ್ಲ ಎಂದು ಹೇಳಿದ್ದರು. ಇದರ ಪರಿಣಾಮ ದಿನೇ ದಿನೇ ಏರಿಕೆಯಾಗುತ್ತಿದ್ದ ಟೊಮೆಟೊ ದರ ಈಗ ಭಾರೀ ಏರಿಕೆಯಾಗಿದೆ. ಟೊಮೆಟೊದ ಜೊತೆಗೆ ಮೆಣಸಿನಕಾಯಿಯ ದರವು ಏರಿಕೆಯಾಗಿದೆ. ಇದನ್ನು ಓದಿ: ಭಾರತದ ರೈತರು ಕೊಟ್ಟ ಶಾಕಿಗೆ ಪಾಕಿನಲ್ಲಿ ಗಗನಕ್ಕೇರಿತು ಟೊಮೆಟೊ ದರ!

ಕಳೆದ ವರ್ಷ ಈ ಸಮಯದಲ್ಲಿ ಪ್ರತಿ ಕೆಜೆ ಟೊಮೆಟೊ ದರ 24 ಪಾಕಿಸ್ತಾನ ರೂ. ಇದ್ದರೆ ಈಗ ಬೆಲೆ 200 ರೂ. ದಾಟಿದೆ. 2018ರಲ್ಲಿ 1 ಕೆಜಿ ಹಸಿರು ಮೆಣಸಿನಕಾಯಿ 100 ರೂ. ಗಿಂತ ಕಡಿಮೆ ದರ ಇತ್ತು. ಆದರೆ ಈಗ ಒಂದೇ ತಿಂಗಳಿನಲ್ಲಿ ಬೆಲೆ 400 ರೂ. ದಾಟಿದೆ. ಇದನ್ನು ಓದಿ: ನೆರೆವೈರಿ ಪಾಕಿಗೆ ಟೊಮೆಟೊ ರಫ್ತು ಮಾಡದಿರಲು ಕೋಲಾರ ರೈತರು ನಿರ್ಧಾರ

ದುಬಾರಿ ಬೆಲೆ ನೋಡಿ ವ್ಯಾಪಾರಿಗಳು ಕಂಗೆಟ್ಟು ಹೋಗಿದ್ದಾರೆ. ಟೊಮೆಟೊ, ಹಸಿರು ತರಕಾರಿಯನ್ನು ದುಬಾರಿ ಬೆಲೆ ನೀಡಿ ಖರೀದಿಸಲು ಸಾಧ್ಯವಾಗದ ವ್ಯಾಪಾರಿಗಳು ಅಂಗಡಿಯನ್ನೇ ಮುಚ್ಚಿದ್ದಾರೆ ಎಂದು ವರದಿಯಾಗಿದೆ.

ತರಕಾರಿ ಬೆಲೆ ದುಬಾರಿ ಜೊತೆ ಇಮ್ರಾನ್ ಖಾನ್ ನೇತೃತ್ವದ ಪಾಕ್ ಸರ್ಕಾರ ಟೊಮೆಟೊ ಮತ್ತು ಮೆಣಸಿನ ಕಾಯಿಯನ್ನು ಮಾರಾಟ ಮಾಡದ ವ್ಯಾಪಾರಿಗಳ ಮೇಲೆ ದಂಡ ಹಾಕಿದೆ. ಬಲವಂತವಾಗಿ ತರಕಾರಿಗಳನ್ನು ಖರೀದಿಸುವಂತೆ ಆದೇಶಿಸಿದೆ. ಕೆಜಿಗೆ 100 ರೂ. ಖರೀದಿ ಮಾಡಿ ಅದನ್ನು 80 ರೂ.ಗೆ ಮಾರಾಟ ಮಾಡಿದರೆ ಅಂಗಡಿ ಬಾಡಿಗೆ, ವಿದ್ಯುತ್ ಬಿಲ್, ಕೆಲಸಗಾರರ ಸಂಬಳವನ್ನು ಯಾರು ಕೊಡುತ್ತಾರೆ ಎಂದು ಪ್ರಶ್ನಿಸಿ ಪಾಕ್ ಸರ್ಕಾರದ ವಿರುದ್ಧ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಾಕಿಸ್ತಾನಕ್ಕೆ ಭಾರತದಿಂದ ಹೆಚ್ಚು ಪ್ರಮಾಣದಲ್ಲಿ ತರಕಾರಿಗಳು ರಫ್ತು ಆದರೆ ನಂತರ ಸಿಂಧ್ ಮತ್ತು ಬಲೂಚಿಸ್ತಾನದಿಂದ ರಫ್ತಾಗುತಿತ್ತು. ಆದರೆ ಕಳೆದ ನಾಲ್ಕು ವಾರಗಳಿಂದ ಭಾರೀ ಮಳೆ ಸುರಿದ ಪರಿಣಾಮ ಬೆಳೆಗಳು ಹಾಳಾಗಿ ಹೋಗಿದೆ. ಹೀಗಾಗಿ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ತರಕಾರಿ ಪೂರೈಕೆ ಆಗದ ಕಾರಣ ಬೆಲೆ ಭಾರೀ ಏರಿಕೆಯಾಗಿದೆ.

ಸಾಧಾರಣವಾಗಿ ಪಾಕಿಸ್ತಾನದಲ್ಲಿ ಈ ರೀತಿ ತರಕಾರಿಗಳ ಬೆಲೆ ಏರಿಕೆಯಾಗುವುದಿಲ್ಲ. ಆದರೆ ಪುಲ್ವಾಮಾ ದಾಳಿ ಬಳಿಕ ಭಾರತದಿಂದ ತರಕಾರಿಗಳು ರಫ್ತು ಆಗುತ್ತಿಲ್ಲ. ಹೀಗಾಗಿ ಬೆಲೆ ಜಾಸ್ತಿಯಾಗಿದೆ ಎಂದು ತರಕಾರಿ ವ್ಯಾಪಾರಿ ಯಾಸಿನ್ ಹೇಳಿದ್ದಾರೆ ಎಂದು ಪಾಕಿಸ್ತಾನದ ಡಾನ್ ವರದಿ ಮಾಡಿದೆ.

ದೆಹಲಿಯ ಅಜಾದ್‍ಪುರ ಮಂಡಿಯಿಂದ ಪಾಕಿಸ್ತಾನಕ್ಕೆ ಬಹುತೇಕ ತರಕಾರಿಗಳು ಇಲ್ಲಿಯವರೆಗೆ ರಫ್ತಾಗುತಿತ್ತು. ಪ್ರತಿದಿನ 750- 800 ಟ್ರಕ್ ಗಳಲ್ಲಿ ಪಾಕಿಸ್ತಾನಕ್ಕೆ ತರಕಾರಿಗಳು ರಫ್ತಾಗುತಿತ್ತು. ಈಗ ಅಲ್ಲಿಂದ ಸಹ ತರಕಾರಿ ರಫ್ತಾಗುತ್ತಿಲ್ಲ. ಎಲ್ಲ ಕಡೆ ರಫ್ತು ನಿಂತ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ತರಕಾರಿಗಳ ಬೆಲೆ ಏರಿಕೆಯಾಗಿದೆ.

ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರದ ಸ್ಥಾನವನ್ನು ಭಾರತ ಹಿಂಪಡೆಯಲಾಗಿದ್ದು, ಇದರೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ರಫ್ತು ಆಗುವ ಎಲ್ಲಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇ.200 ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ಪಾಕಿಸ್ತಾನ ಆರ್ಥಿಕತೆಗೆ ಭಾರತ ಪೆಟ್ಟು ನೀಡಿದೆ. ಅಕ್ಕಿ, ತರಕಾರಿ, ಪೀಠೋಪಕರಣಗಳು, ಸಿಮೆಂಟ್, ಚರ್ಮದ ಸರಕು, ಜವಳಿ ಬಟ್ಟೆ, ವಿದ್ಯುತ್ ವಸ್ತುಗಳು, ಶಸ್ತ್ರಚಿಕಿತ್ಸೆ ವಸ್ತುಗಳು ಸೇರಿ ಹಲವು ವಸ್ತುಗಳನ್ನು ಪಾಕಿಸ್ತಾನದಿಂದ ಭಾರತ ಆಮದು ಮಾಡಿಕೊಳ್ಳುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *