Manipur | ಬಿರೇನ್‌ ಸಿಂಗ್‌ ರಾಜೀನಾಮೆ ಬೆನ್ನಲ್ಲೇ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ

Public TV
2 Min Read

ನವದೆಹಲಿ:‌ ಮುಖ್ಯಮಂತ್ರಿ ಸ್ಥಾನಕ್ಕೆ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಹಿಂಸಾಚಾರ ಪೀಡಿತ ಮಣಿಪುರದಲ್ಲಿ (Manipur) ರಾಷ್ಟ್ರಪತಿ ಆಳ್ವಿಕೆ (President’s Rule) ಹೇರಲಾಗಿದೆ. ರಾಜ್ಯದಲ್ಲಿ 1951ರಿಂದ ಇದು 11ನೇ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ.

ಇದೇ ಫೆ.9ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಬಿರೇನ್‌ ಸಿಂಗ್‌ (CM N Biren Singh) ದಿಢೀರ್‌ ರಾಜೀನಾಮೆ ಘೋಷಿಸಿದ್ದರು. ಆ ಬಳಿಕ ಉತ್ತರಾಧಿಕಾರಿ ಆಯ್ಕೆಯಲ್ಲಿ ಒಮ್ಮತವಿಲ್ಲದೇ ಸಿಎಂ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ವಿಫಲವಾದ ಹಿನ್ನೆಲೆ ಹಾಗೂ ವಿಧಾನಸಭೆ ಅಧಿವೇಶನ ಕೆರಯದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ.

ರಾಜ್ಯಪಾಲರ ವರದಿ ಸ್ವೀಕರಿಸಿದ ಬಳಿಕ, ನನಗೆ ಬಂದ ವರದಿ ಮತ್ತು ಇತರ ಮಾಹಿತಿಯನ್ನಾಧರಿಸಿ ಭಾರತ ಸಂವಿಧಾನದ ನಿಬಂಧನೆಗಳ ಅನ್ವಯ ರಾಷ್ಟ್ರಪತಿ ಆಳ್ವಿಕೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಈ ನಿರ್ಧಾರದ ಬಗ್ಗೆ ನನಗೆ ತೃಪ್ತಿ ಇದೆ ಎಂದು ರಾಷ್ಟ್ರಪತಿಗಳು ತಿಳಿಸಿರುವುದಾಗಿ ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಮೆಟ್ರೋ ದರ 100% ಏರಿಕೆಯಾದ ಕಡೆ 30% ದರ ಇಳಿಕೆ – ಮೂಗಿಗೆ ತುಪ್ಪ ಸವರಿದ BMRCL

ಮೋದಿ ಪ್ರವಾಸದಲ್ಲಿದ್ದಾಲೇ ಬೆಳವಣಿಗೆ:
ಬಿಜೆಪಿ ಈಶಾನ್ಯ ಉಸ್ತುವಾರಿ ಸಂಬಿತ್‌ ಪಾತ್ರ ಅವರು ಇಂಫಾಲದಲ್ಲಿ ಪಕ್ಷದ ಶಾಸಕರೊಂದಿಗೆ ಚರ್ಚಿಸುತ್ತಿದ್ದರು. ಆದಾಗ್ಯೂ ಮಂಗಳವಾರ ಒಮ್ಮತ ನಿರ್ಧರ ಕೈಗೂಡಲಿಲ್ಲ. ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸ ಮುಗಿಸಿ ವಾಪಸ್‌ ಆದ ಬಳಿಕ ಮುಖ್ಯಮಂತ್ರಿ ಆಯ್ಕೆ ಮಾಡುವ ನಿರೀಕ್ಷೆಯಲ್ಲಿ ಬಿಜೆಪಿ ಇತ್ತು. ಈ ಮಧ್ಯೆ ವಿಧಾನಸಭೆ ಅಧಿವೇಶನ ಕರೆಯಲು ಸಮಯ ನಿಗದಿಗೊಳಿಸಲಾಗಿತ್ತು. ಸಂವಿಧಾನದ 174(1) ನೇ ವಿಧಿಯ ಪ್ರಕಾರ, ರಾಜ್ಯ ವಿಧಾನಸಭೆಗಳು ತಮ್ಮ ಕೊನೆಯ ಅಧಿವೇಶನದ ಆರು ತಿಂಗಳೊಳಗೆ ಸಭೆ ಸೇರಬೇಕು. ಆದಾಗ್ಯೂ, ಕೊನೆಯ ವಿಧಾನಸಭೆ ಅಧಿವೇಶನವು ಆಗಸ್ಟ್ 12, 2024 ರಂದು ನಡೆದಿದ್ದು, ಇಂದು ಮುಂದಿನ ಅಧಿವೇಶನಕ್ಕೆ ಗಡುವು ವಿಧಿಸಲಾಗಿದೆ.

ಮಣಿಪುರದಲ್ಲಿ 2023ರ ಮೇ ತಿಂಗಳಿಂದಲೂ ಜನಾಂಗೀಯ ಹಿಂಸಾಚಾರ ಮುಂದುವರೆದಿದೆ. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಈ ಸಂಘರ್ಷದಲ್ಲಿ ಈವರೆಗೆ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಹಿಂಸಾಚಾರ ನಿಯಂತ್ರಿಸಲು ವಿಫಲವಾದ್ದಕ್ಕಾಗಿ ವಿರೋಧ ಪಕ್ಷಗಳು ನಿರಂತರವಾಗಿ ಎನ್. ಬೀರೇನ್ ಸಿಂಗ್ ಸರ್ಕಾರವನ್ನು ಟೀಕಿಸುತ್ತಿದ್ದವು. ಇದನ್ನೂ ಓದಿ: ಹಾಕುಂಭಮೇಳದಲ್ಲಿ ಭಾಗಿಯಾಗಿ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ವಿಜಯೇಂದ್ರ

ಇತ್ತೀಚೆಗೆ ಹಿಂಸಾಚಾರ ಮತ್ತೆ ಭುಗಿಲೆದ್ದಾಗ ಮುಖ್ಯಮಂತ್ರಿಗಳ ಮೇಲೆ ರಾಜೀನಾಮೆ ನೀಡುವ ಒತ್ತಡ ಹೆಚ್ಚಾಯಿತು. ಅವರ ವಿರುದ್ಧ ಜನರ ಆಕ್ರೋಶ ಹೆಚ್ಚುತ್ತಿರುವುದಲ್ಲದೆ, ಅವರದೇ ಪಕ್ಷದ ಶಾಸಕರು ಸಹ ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದರು. ರಾಜ್ಯವನ್ನು ನಿಭಾಯಿಸುವಲ್ಲಿ ವಿಫಲರಾದ ಕಾರಣ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಚರ್ಚೆಗಳು ನಡೆಯುತ್ತಿದ್ದವು. ಅಲ್ಲದೇ ಪ್ರತಿಪಕ್ಷ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ ಮಂಡಿಸಲೂ ಮುಂದಾಗಿತ್ತು. ಹಾಗಾಗಿ ಫೆ.9ರಂದು ಬಿರೇನ್‌ ಸಿಂಗ್‌ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದರು.

ಎನ್. ಬೀರೇನ್ ಸಿಂಗ್ ರಾಜೀನಾಮೆ ನಂತರ ಕೇಂದ್ರ ಗೃಹ ಸಚಿವಾಲಯವು ರಾಜ್ಯದಲ್ಲಿ ಭದ್ರತೆ ಹೆಚ್ಚಿಸಲು ಭದ್ರತಾ ಸಂಸ್ಥೆಗಳಿಗೆ ಹೈಅಲರ್ಟ್ ಘೋಷಿಸಿದೆ. ರಾಜ್ಯದಲ್ಲಿ ಈಗಾಗಲೇ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.

Share This Article