ರಾಷ್ಟ್ರಪತಿ ಸ್ಥಾನಕ್ಕೆ ಪೈಪೋಟಿ – ಮೊದಲ ದಿನವೇ 11 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Public TV
1 Min Read

ನವದೆಹಲಿ: ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣಾ ಕಣ ರಂಗೇರಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಸಂಖ್ಯಾಬಲದ ಜಟಾಪಟಿ ನಡೆಯುತ್ತಿದೆ. ಈವೆರೆಗೆ ರಾಷ್ಟ್ರಪತಿ ಚುನಾವಣೆಗೆ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅವರಲ್ಲಿ ದಾಖಲೆಗಳ ಕೊರತೆಯಿಂದಾಗಿ ಓರ್ವ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಲಾಗಿದೆ.

ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ ರಾಷ್ಟ್ರಪತಿಯಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಮುಗಿಯಲಿದ್ದು, ಆ ಸ್ಥಾನಕ್ಕೆ ಚುನಾವಣೆಗಾಗಿ ಚುನಾವಣಾ ಅಧಿಸೂಚನೆ ಹೊರಡಿಸಲಾಗಿದೆ. ನಾಮನಿರ್ದೇಶನ ಪ್ರಕ್ರಿಯೆಯೂ ಪ್ರಾರಂಭವಾಗಿದೆ. ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜೂನ್ 29ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಚುನಾವಣೆಯ ಭದ್ರತಾ ಠೇವಣಿ 15 ಸಾವಿರ ರೂ. ಇದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಶರದ್ ಪವಾರ್

ಅಭ್ಯರ್ಥಿಯು ಮತದಾರರಾಗಿ ನೋಂದಾಯಿಸಿಕೊಂಡಿರುವ ಪಟ್ಟಿಯಲ್ಲಿ ತನ್ನ ಹೆಸರನ್ನು ತೋರಿಸುವ ನಮೂನೆಯ ಪ್ರಮಾಣೀಕೃತ ಪ್ರತಿಯನ್ನು ಲಗತ್ತಿಸದ ಕಾರಣ ಒಬ್ಬ ಅಭ್ಯರ್ಥಿಯ ನಾಮನಿರ್ದೇಶನವನ್ನು ತಿರಸ್ಕರಿಸಲಾಗಿದೆ. ಇದನ್ನೂ ಓದಿ: 4 ದಿನ, 80 ಅಡಿ ಕೊಳವೆ ಬಾವಿಯಲ್ಲೇ ಸಿಲುಕಿದ್ದ ಹುಡುಗ – 104 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ

ತಮಿಳುನಾಡಿನ ಕೆ.ಪದ್ಮರಾಜನ್ ಮೊದಲು ನಾಮಪತ್ರ ಸಲ್ಲಿಸಿದ್ದಾರೆ. ಆ ನಂತರ ಎ.ಮಣಿಥನ್, ದೆಹಲಿಯಿಂದ ಜೀವನ್ ಕುಮಾರ್ ಮಿತ್ತಲ್, ದಯಾ ಶಂಕರ್ ಅಗರ್ವಾಲ್, ಓಂಪ್ರಕಾಶ್ ಖರಬಂದ, ಮಹಾರಾಷ್ಟ್ರದ ಮೊಹಮ್ಮದ್ ಎ.ಹಮಿದ್ ಪಟೇಲ್, ನಾಮಕ್ಕಲ್‌ನಿಂದ ಟಿ. ರಮೇಶ್, ಬಿಹಾರದಿಂದ ಶ್ಯಾಮ್ ನಂದನ್ ಪ್ರಸಾದ್, ಲಾಲೂ ಪ್ರಸಾದ್ ಯಾದವ್ ಹಾಗೂ ಆಂಧ್ರಪ್ರದೇಶದಿಂದ ಮಂದತಿ ತಿರುಪತಿ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆಗೆ NCP ನಾಯಕ ಶರದ್ ಪವಾರ್ ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಉದ್ದೇಶಿಸಲಾಗಿತ್ತು. ಕಾಂಗ್ರೆಸ್, ಜೆಡಿಎಸ್, ಟಿಎಂಸಿ, ಆರ್‌ಜೆಡಿ ಸೇರಿದಂತೆ ಮೊದಲಾದ ಪಕ್ಷಗಳೂ ಇದಕ್ಕೆ ಬೆಂಬಲ ಸೂಚಿಸಿದ್ದವು. ಇದಕ್ಕಾಗಿ ನಿನ್ನೆ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 18 ರಾಜಕೀಯ ಪಕ್ಷದ ನಾಯಕರು ಪಾಲ್ಗೊಂಡಿದ್ದರು. ಈ ವೇಳೆ ತಾವು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಪವಾರ್ ಸ್ಪಷ್ಟಪಡಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *