ಚುನಾವಣಾ ಆಯೋಗದ ಶಿಫಾರಸಿಗೆ ರಾಷ್ಟ್ರಪತಿ ಅಂಕಿತ-ಶಾಸಕತ್ವ ಸ್ಥಾನ ಕಳೆದುಕೊಂಡ ಆಪ್ 20 ಶಾಸಕರು

Public TV
2 Min Read

ನವದೆಹಲಿ: ಚುನಾವಣಾ ಆಯೋಗ ದೆಹಲಿಯ ಆಮ್ ಆದ್ಮಿ ಸರ್ಕಾರದ 20 ಶಾಸಕರನ್ನು ಅನರ್ಹಗೊಳಿಸಲು ಶಿಫಾರಸ್ಸು ಮಾಡಿದ ಕಡತಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ.

ಆಪ್ ಶಾಸಕರು ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆ ಚುನಾವಣಾ ಆಯೋಗ ಶಾಸಕರನ್ನು ಅನರ್ಹಗೊಳಿಸಲು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿತ್ತು. ಆದರೆ ಆಪ್ ಶಾಸಕರು ಸಂಸದೀಯ ಕಾರ್ಯದರ್ಶಿ ಹುದ್ದೆ ಹೊಂದಿದ್ದರೂ, ಯಾವುದೇ ರೀತಿಯ ಸಂಬಳ, ಸವಲತ್ತು ಪಡೆದಿಲ್ಲ ಎಂಬ ಕಾರಣ ನೀಡಿ ಚುನಾವಣೆ ಆಯೋಗದ ಶಿಫಾರಸನ್ನು ಪ್ರಶ್ನೆ ಮಾಡಿದ್ದರು. ಚುನಾವಣಾ ಆಯೋಗದ ಶಿಫಾರಸನ್ನು ಪ್ರಶ್ನಿಸಿ ಆಪ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.

ರಾಷ್ಟ್ರಪತಿಗಳ ಅಂಕಿತ ಕುರಿತು ಪ್ರತಿಕ್ರಿಯೆ ನೀಡಿದ ದೆಹಲಿ ಆಪ್ ಶಾಸಕ ಗೋಪಾಲ್ ರಾಯ್, ಶಾಸಕರ ಅನರ್ಹತೆಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದರು. ಅಲ್ಲದೇ ಈ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಲು ಸಿದ್ಧ. ರಾಷ್ಟ್ರಪತಿಗಳ ನಿರ್ಧಾರ ಅಸಂವಿಧಾನಿಕವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಎಂದು ಆರೋಪಿಸಿದರು.

ರಾಷ್ಟ್ರಪತಿಗಳ ಅಂಕಿತದಿಂದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಭಾರಿ ಮುಖಭಂಗವಾಗಿದ್ದು, ಶೀಘ್ರದಲ್ಲಿಯೇ ದೆಹಲಿಯ 20 ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಆದರೆ ಪ್ರಸ್ತುತ 70 ಸ್ಥಾನಗಳನ್ನು ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ ಆಪ್ ಪಕ್ಷ 66 ಸ್ಥಾನಗಳನ್ನು ಹೊಂದಿದೆ. ರಾಷ್ಟ್ರಪತಿಗಳ ಅಂಕಿತದ ನಂತರ 20 ಅನರ್ಹರಾದ ಕಾರಣ ಆಪ್ ಸ್ಥಾನಗಳ ಸಂಖ್ಯೆ 46ಕ್ಕೆ ಇಳಿಕೆಯಾಗಲಿದೆ. ಶಾಸಕರ ಸಂಖ್ಯೆ ಕಡಿಮೆಯಾದರೂ ಕೇಜ್ರಿವಾಲ್ ಆಡಳಿತದಲ್ಲಿ ಮುಂದುವರಿಯಲಿದ್ದಾರೆ. 35ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಇರುವ ಕಾರಣ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ.

ಏನಿದು ಪ್ರಕರಣ?
2016ರ ನಂತರ ಕೇಜ್ರಿವಾಲ್ ಮುಂದಾಳತ್ವದ ಆಪ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿತ್ತು. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಕೇಜ್ರಿವಾಲ್ 21 ಶಾಸಕರನ್ನು ವಿಧಾನಸಭಾ ಕಾರ್ಯದರ್ಶಿಗಳಾಗಿ ನೇಮಕ ಮಾಡಿದ್ದರು. ಈ ಕುರಿತು ಪ್ರಶಾಂತ್ ಪಟೇಲ್ ಎಂಬವರು ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದರು. ಈ ದೂರನ್ನು ರಾಷ್ಟ್ರಪತಿಗಳು ಚುನಾವಣಾ ಆಯೋಗಕ್ಕೆ ವರ್ಗಾವಣೆ ಮಾಡಿದ್ದರು.

2016ರಲ್ಲಿ ಆಪ್ ವಿರುದ್ಧ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿತ್ತು. ಆಪ್ 21 ಶಾಸಕರು ಲಾಭದಾಯಕ ಹುದ್ದೆ ಹೊಂದಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು. ಈ ಬಗ್ಗೆ ದೂರು ಸ್ವೀಕರಿಸಿದ್ದ ಆಯೋಗ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷದಿಂದ ಸ್ಪಷ್ಟನೆ ಕೇಳಿತ್ತು. ಆದರೆ ತಮ್ಮ ವಿರುದ್ಧ ಪ್ರಕರಣವನ್ನು ಕೈ ಬಿಡುವಂತೆ ಆಪ್ ನ ಶಾಸಕರು ಆಯೋಗಕ್ಕೆ ಮನವಿ ಮಾಡಿದ್ದರಾದರೂ, ಆಯೋಗ ಅವರ ಅರ್ಜಿಯನ್ನು ತಿರಸ್ಕರಿಸಿತ್ತು.

 

Share This Article
Leave a Comment

Leave a Reply

Your email address will not be published. Required fields are marked *