ಗ್ರಹಣದಿಂದಾಗಿ ದಾಖಲಾಗದ ಗರ್ಭಿಣಿಯರು- ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ಬೆಡ್‍ಗಳೂ ಖಾಲಿಖಾಲಿ

Public TV
1 Min Read

ಹಾಸನ: ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಗರ್ಭಿಣಿಯರು ಆಸ್ಪತ್ರೆಗೆ ದಾಖಲಾಗದೇ ಇರುವುದರಿಂದ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ಬೆಡ್ ಗಳೂ ಖಾಲಿಖಾಲಿ ಆಗಿದೆ.

ಚಂದ್ರಗ್ರಹಣ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದವರೂ ಸಹ ಶುಕ್ರವಾರ ಡಿಸ್ಚಾರ್ಜ್ ಆಗಿದ್ದಾರೆ. ಗ್ರಹಣ ತಗುಲುತ್ತೆ ಎನ್ನುವ ಮೂಢನಂಬಿಕೆಯಿಂದ ಆಸ್ಪತ್ರೆಯಲ್ಲಿದ್ದವರೆಲ್ಲರೂ ಅಲ್ಲಿಂದ ಡಿಸ್ಚಾರ್ಜ್ ಆಗಿ ಹೋಗಿದ್ದಾರೆ. ಹಾಸನ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗ ಖಾಲಿಯಾಗಿದೆ.

ಜಿಲ್ಲಾಸ್ಪತ್ರೆಯ ಪ್ರಸೂತಿ ವಿಭಾಗ ಪ್ರತಿನಿತ್ಯ ಗರ್ಭಿಣಿಯರಿಂದ ತುಂಬಿರುತ್ತಿತ್ತು. ವಿವಿಧ ತಾಲೂಕುಗಳಿಂದ ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದರು. ನೂರಾರು ಬೆಡ್ ಗಳುಳ್ಳ ಜಿಲ್ಲಾಸ್ಪತ್ರೆಯ ಗರ್ಭಿಣಿಯರ ವಿಭಾಗ ಪ್ರತಿನಿತ್ಯ ಜನಜಂಗುಳಿಯಿಂದ ಕೂಡುತ್ತಿದ್ದು, ಗ್ರಹಣ ಹಿನ್ನೆಲೆ ಖಾಲಿ ಆಗಿದೆ.

ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ವಿಜಯಪುರ ನಗರದ ಬಹುತೇಕ ಹೆರಿಗೆ ಆಸ್ಪತ್ರೆಗಳು ಖಾಲಿ-ಖಾಲಿಯಾಗಿದ್ದು, ವಿಜಯಪುರದ ಆಸ್ಪತ್ರೆಗಳಲ್ಲಿ ತುಂಬು ಗರ್ಭಿಣಿ ಸ್ತ್ರೀಯರಿಗೆ ಸಿಸೇರಿಯನ್ ಗಾಗಿ ದಿನಾಂಕ ನೀಡಿದ್ದರೂ, ಯಾರೊಬ್ಬರು ಆಸ್ಪತ್ರೆಯತ್ತ ತಲೆ ಹಾಕಿಲ್ಲ. ಸಿಸೇರಿಯನ್ ಗಾಗಿ ನಿಗದಿಪಡಿಸಿದ ಡೇಟ್‍ಗಳು ಗ್ರಹಣದ ಹಿನ್ನೆಲೆಯಲ್ಲಿ ರದ್ದಾಗಿದೆ. ಗರ್ಭಿಣಿಯರ ಮನೆಯವರು ಹೆರಿಗೆಗೆ ನಿರಾಕರಣೆ ಮಾಡಿದ್ದು, ಬಹುತೇಕ ಆಸ್ಪತ್ರೆಗಳು ಖಾಲಿ ಖಾಲಿಯಾಗಿತ್ತು. ಇನ್ನು ಕೆಲವರು ಶನಿವಾರಕ್ಕೆ ಸಿಸೇರಿಯನ್ ಮುಂದೂಡಿದ್ದಾರೆ.

ಚಂದ್ರ ಗ್ರಹಣದಿಂದಾಗಿ ಮುಂದೆ ಹುಟ್ಟಲಿರುವ ಮಗುವಿಗೆ ಕಂಟಕವಾಗುತ್ತದೆ ಎಂದು ಭಾವಿಸಿ ಗರ್ಭಿಣಿಯರು ದೇವರ ನಾಮ ಸ್ಮರಣೆಯ ಮೊರೆ ಹೋಗಿದ್ದರು. ಸ್ತ್ರೋತ್ರ ಪುಸ್ತಕಗಳನ್ನು ಓದುತ್ತಾ ಕುಳಿತ ಗರ್ಭಿಣಿ ಸ್ತ್ರೀಯರು ದೇವರ ನಾಮಸ್ಮರಣೆಯಲ್ಲಿ ತಲ್ಲೀನರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *