ವಾಯುಭಾರ ಕುಸಿತ – ರಾಜ್ಯದ ಹಲವೆಡೆ ತಂಪೆರೆದ ವರುಣ

Public TV
1 Min Read

ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಬಾರ ಕುಸಿತ ಪ್ರಭಾವದಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯ ಹಲವೆಡೆ ಮಳೆಯಾಗಿದೆ.

ನಗರದ ಹೊರವಲಯದ ಯಶವಂತಪುರ, ರಾಜಾಜಿನಗರ, ಕತ್ರಿಗುಪ್ಪೆ, ಬನಶಂಕರಿ, ಶ್ರೀನಗರ, ಕೆಂಗೇರಿ ಸುತ್ತಮುತ್ತಲ ಭಾಗಗಳಲ್ಲಿ ಸಂಜೆ ವೇಳೆ ಮಳೆಯಾಗಿದ್ದು, ನಗರದ ಹೊರವಲಯ ಅನೇಕಲ್ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ.

ಕಳೆದ ಕೆಲ ದಿನಗಳಿಂದ ಬೇಸಿಗೆ ಆರಂಭದ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪು ನೀಡಿದರೆ, ನಗರದಲ್ಲಿ ಏಕಾಏಕಿ ಮಳೆ ಬಿದ್ದಿದ್ದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಟ ನಡೆಸಿದರು. ಮತ್ತೆ ಕೆಲವರು ಮಳೆಯಿಂದ ತಪ್ಪಿಸಿಕೊಳ್ಳಲು ಫ್ಲೈ ಓವರ್ ಕೆಳಗೆ ನಿಂತು ರಕ್ಷಣೆ ಪಡೆದರು.

ರಾಜ್ಯದ ಪ್ರಮುಖ ಪ್ರದೇಶಗಳಾದ ಮಂಡ್ಯದ ಕೆಆರ್ ಪೇಟೆ, ಚನ್ನಪಟ್ಟಣ, ಕನಕಪುರ, ಧಾರವಾಡ, ಮೈಸೂರು, ಚಾಮರಾಜನಗರದ ಭಾಗದಲ್ಲಿ ತುಂತುರು ಮಳೆಯಾಗಿದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ರಾಜ್ಯದ ಹಲವೆಡೆ ಇನ್ನೂ ಎರಡು ದಿನ ಮಳೆಯಾಗುವ ಸಂಭವವಿದೆ.

ಇನ್ನೂ ರಾಜ್ಯದ ಕರಾವಳಿಯಲ್ಲಿ ಎರಡನೇ ದಿನವೂ ವರುಣನ ಅಬ್ಬರ ಮುಂದುವರೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಮಳೆಯಾಗಿದ್ದು, ಮೋಡ ಮುಸುಕಿದ ವಾತಾವರಣ ಮುಂದುವರೆದಿದೆ. ಕಾಫಿನಾಡಿನಲ್ಲಿ ವರ್ಷದ ಮೊದಲ ಮಳೆ ಸಿಂಚನ ತಂದಿದ್ದು, ಮಳೆಗಾಗಿ ಆಕಾಶ ನೋಡ್ತಿದ್ದ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

Share This Article
Leave a Comment

Leave a Reply

Your email address will not be published. Required fields are marked *