ಇಂದಿನಿಂದ 3 ದಿನ ಮಂಜಿನ ನಗರಿಯಲ್ಲಿ ಪ್ರವಾಸಿ ಉತ್ಸವ- ಕಿರುತೆರೆ ಕಲಾವಿದರು ಭಾಗಿ

Public TV
1 Min Read

ಮಡಿಕೇರಿ: ಪ್ರವಾಸಿಗರ ಸ್ವರ್ಗ, ದಕ್ಷಿಣ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಪ್ರವಾಸೋದ್ಯಮ ಕುಸಿದು ಬಿದ್ದಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಕೊಡಗು ಜಿಲ್ಲಾಡಳಿತ ಮುಂದಾಗಿದೆ.

ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆ ಆಶ್ರಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿ ಉತ್ಸವ ನಡೆಯಲಿದೆ. ಆಗಸ್ಟ್ ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಕಹಿ ನೆನಪಿನಿಂದ ಜಿಲ್ಲೆಯ ಜನತೆಯನ್ನು ಹೊರತರಲು ಹಾಗೂ ಕುಸಿದು ಬಿದ್ದಿರುವ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸಲು ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರವಾಸಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಪ್ರವಾಸಿಗರ ಹಾಟ್ ಸ್ಪಾಟ್ ರಾಜಾಸೀಟ್ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಅಲ್ಲದೇ ನಗರದ ಗಾಂಧಿ ಮೈದಾನದಲ್ಲಿ ಇಂದು ಸಂಜೆ 5 ರಿಂದ 10 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಗಾಯಕಿ ಎಂಡಿ ಪಲ್ಲವಿ, ಸರಿಗಮಪ ಖ್ಯಾತಿಯ ಸುನೀಲ್, ಶ್ರೀ ಹರ್ಷ, ಸೇರಿದಂತೆ ಕಿರುತೆರೆಯ ನಟ-ನಟಿಯರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಮಾಡುವ ಮೂಲಕ ಆಕರ್ಷಿಸಲಿದ್ದಾರೆ.

ಉತ್ಸವದ ಕೊನೆ ದಿನದಂದು ಸಂಜೆ 6.30ರಿಂದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರಿಂದ ಸಂಗೀತ ರಸ ಸಂಜೆ ನಡೆಯಲಿದ್ದು, ಹಿನ್ನೆಲೆ ಗಾಯಕರಾದ ವ್ಯಾಸರಾಜ್, ಅನುರಾಧ ಭಟ್, ಇಂದು ನಾಗರಾಜ್, ಲಕ್ಷ್ಮೀ ನಾಗರಾಜ್, ಸಂಜಿತ್ ಹೆಗ್ಡೆ, ಶ್ರೀನಿವಾಸ್ ಭಾಗವಹಿಸುತ್ತಿರುವುದು ಈ ಉತ್ಸವದ ಕೇಂದ್ರ ಬಿಂದುವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *