ಸಂಯುಕ್ತಾ ಥ್ರಿಲ್ಲರ್ ಮಂಜು ತಂಗಿ, ಬ್ರೂಸ್ಲಿ ಬಾಮೈದ ಅಂತ ತಿಳ್ಕೊಂಡು ಕೈ ಮಾಡಿದ್ದು ಸರಿಯಲ್ಲ- ಪ್ರಥಮ್

Public TV
2 Min Read

ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಕನ್ನಡದ ‘ಬಿಗ್‍ಬಾಸ್’ನಲ್ಲಿ ಕಿರಿಕ್ ನಟಿ ಸಂಯುಕ್ತ ಹೆಗಡೆ ಭಾರೀ ಹೈಡ್ರಾಮ ಮಾಡಿದ್ದಾರೆ. ರೌಡಿಯಂತೆ ಸಮೀರ್ ಆಚಾರ್ಯ ಅವರ ಕೆನ್ನೆಗೆ ಬಾರಿಸಿ ಕಿಕ್ ಔಟ್ ಆಗಿದ್ದು, ಈ ಕುರಿತು ಬಿಗ್ ಬಾಸ್ ಸೀಸನ್ 4ರ ವಿನ್ನರ್ ಪ್ರಥಮ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಸಂಯುಕ್ತಾ ಬಿಗ್ ಬಾಸ್ ಮನೆಯಲ್ಲಿ ಸಮೀರ್ ಆಚಾರ್ಯರಿಗೆ ಕಪಾಳಕ್ಕೆ ಹೊಡೆದಿರುವ ವಿಚಾರ ನನ್ನ ಗಮನಕ್ಕೆ ಬಂತು. ಬಿಗ್ ಬಾಸ್ ಜೀವನದ ಪಾಠವನ್ನು ಕಲಿಸುತ್ತದೆ. ಹೇಗಂದ್ರೆ ನಾವು ಅಲ್ಲಿದ್ದಾಗ ನಮ್ಮ ತಂಡದ ಮೇಲೆ ಅಭಿಮಾನ ಪ್ರೀತಿ ಹುಟ್ಟಿಕೊಳ್ಳುತ್ತದೆ. ಸಂಯುಕ್ತಾ ಹೆಗಡೆ ತಾವು ಥ್ರಿಲ್ಲರ್ ಮಂಜು ತಂಗಿ ತರನೋ, ಬ್ರೂಸ್ಲಿ ಬಾಮೈದ ಅಂತಾ ತಿಳಿದುಕೊಂಡು ಸಮೀರ್ ಅವರ ಮೇಲೆ ಕೈ ಮಾಡಿದ್ದು ನನಗ್ಯಾಕೋ ಅದು ಸರಿ ಅನ್ನಿಸುತ್ತಿಲ್ಲ ಅಂತಾ ಪ್ರಥಮ್ ತಿಳಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಹೋಗುವ ಮುಂಚೆ ಒಂದು ಮಾತನ್ನು ಹೇಳಿ ಕೊಡುತ್ತಾರೆ. ಅದೇನೆಂದರೆ ನೀವು ಮನೆಗೆ ಹೋಗುವ ಮುಂಚೆ ನೀವು ನೀವಾಗಿರಿ. ನಿಮ್ಮತನ ಒಂದೇ ನಿಮ್ಮನ್ನು ಕಡೆವರೆಗೂ ಕರೆದುಕೊಂಡು ಹೋಗುತ್ತದೆ ಎಂದು ಕಲಿಸಿಕೊಡ್ತಾರೆ. ಬಿಗ್ ಬಾಸ್ ಮನೆಯಲ್ಲಿ ಬಿಗ್‍ಬಾಸ್ ಸಂವಿಧಾನ ಇರುತ್ತೆ. ಆ ಸಂವಿಧಾನದಂತೆ ಯಾರ ಮೇಲೆಯೂ ಕೈ ಮಾಡುವ ಹಾಗಿಲ್ಲ. ನಾಮಿನೇಷನ್ ಬಗ್ಗೆ ಮಾತನಾಡುವ ಹಾಗಿಲ್ಲ. ಮನೆಯಲ್ಲಿ ಯಾರಿಗೂ ಪ್ರಚೋದನೆ ಮಾಡಬಾರದು. ಇಂತಹದೆಲ್ಲವನ್ನು ಹೇಳಿ ಕೊಡುತ್ತಾರೆ. ಈ ಶಿಸ್ತುಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಆಟವನ್ನು ನೀವು ಹೇಗಾದರೂ ಆಡಿದರೆ ಅದಕ್ಕೆ ಬಿಗ್ ಬಾಸ್ ಅಭ್ಯಂತರವಿಲ್ಲ.

ನೀವು ಸಹ ಸ್ಪರ್ಧಿಗಳೊಂದಿಗೆ ಜಗಳ ಆಡ್ತೀರಾ, ಕೋಪಗೊಂಡು ಊಟ ಬಿಡ್ತೀರಾ, ಅವರಿಗೆ ಹೆದರಿಸ್ತೀರಾ ಅದು ವೈಯಕ್ತಿಕ. ಮನೆಯಲ್ಲಿ ಆಟದ ವೈಖರಿ ಮತ್ತು ನಡವಳಿಕೆ ಮಾತ್ರ ಅಲ್ಲಿ ನಮ್ಮನ್ನು ಉಳಿಸುತ್ತದೆಯೇ ಹೊರತು ಬೇರೆ ಯಾವುದು ಅಲ್ಲ ಎಂದು ಬಿಗ್ ಮನೆಯ ನಿಯಮಗಳ ಬಗ್ಗೆ ಪ್ರಥಮ್ ಸ್ಪಷ್ಟಪಡಿಸಿದರು.

ಸಮೀರ್ ಆಚಾರ್ಯ ಹೊರಗಡೆ ಅಡುಗೆ ಮಾಡಿಕೊಂಡು ತುಂಬಾ ಶಿಸ್ತಿನಿಂದ ಆ ಮನೆಯಲ್ಲಿದ್ದಾರೆ. ಸಮೀರ್ ಅವ್ರಿಗೆ ಮದುವೆಯಾಗಿದ್ದು, ಅಂತಹ ದೊಡ್ಡ ವ್ಯಕ್ತಿಯ ಮೇಲೆ ಚಿಕ್ಕ ಹುಡುಗಿ ಸಂಯುಕ್ತಾ ತುಂಬಾ ಆತುರ ಮಾಡಿಕೊಂಡರೇನೋ ಅಂತಾ ಅನ್ನಿಸಿತು. ಜನರು ಸಂಯುಕ್ತಾರನ್ನು ಕ್ಷಮಿಸುವ ದೊಡ್ಡ ಮನಸ್ಸು ಮಾಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ ಅಂತಾ ಪ್ರಥಮ್ ಮನವಿ ಮಾಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *