ಮಕ್ಕಳಾಗಿಲ್ಲ ಎಂಬ ವಿಚಾರಕ್ಕೆ ಅಳಿಯನಿಗೆ ಕೊರಗಿತ್ತು: ಬಿಸಿ ಪಾಟೀಲ್‌

Public TV
2 Min Read

ಶಿವಮೊಗ್ಗ: ಮಕ್ಕಳಾಗಿಲ್ಲ ಎಂಬ ವಿಚಾರದಲ್ಲಿ ಅಳಿಯನಿಗೆ ಕೊರಗಿತ್ತು ಎಂದು ಮಾಜಿ ಸಚಿವ ಬಿಸಿ ಪಾಟೀಲ್‌ (BC Patil) ಹೇಳಿದ್ದಾರೆ.

ಅಳಿಯ ಪ್ರತಾಪ್‌ ಕುಮಾರ್‌ (Pratap Kumar) ಆತ್ಮಹತ್ಯೆ (Suicide) ಮಾಡಿಕೊಂಡ ಹಿನ್ನೆಲೆಯಲ್ಲಿ ಬಿಸಿ ಪಾಟೀಲ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

16 ವರ್ಷದ ಹಿಂದೆ ನಾನು ಪುತ್ರಿಯನ್ನು ಅವರಿಗೆ ಮದುವೆ ಮಾಡಿಕೊಟ್ಟಿದ್ದೆ. ಬೆಳಗ್ಗೆ ಜೊತೆಯಲ್ಲಿ ತಿಂಡಿ ಮಾಡಿದ್ದೆವು. ನಾನು ನಮ್ಮ ಭಾಗದ ಕೆರೆಗಳಿಗೆ ಹೋಗಿ ಭೇಟಿ ನೀಡಿ ಬರುವಾಗ ವಿಷಯ ಗೊತ್ತಾಯಿತು. ನಾಳೆ ಚನ್ನಗಿರಿಯ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತೇವೆ ಎಂದು ತಿಳಿಸಿದರು.

 

ಬಿಸಿ ಪಾಟೀಲ್‌ ಹೇಳಿದ್ದೇನು?
ನನ್ನ ಮಗಳು ಸೌಮ್ಯ (Sowmya) ಜೊತೆ 2008ರಲ್ಲಿ ಮದುವೆ ನಡೆದಿತ್ತು. ನಮ್ಮ ಜೊತೆಯಲ್ಲೇ ಇದ್ದ ಪ್ರತಾಪ್ ನಮ್ಮ ಎಲ್ಲಾ ವ್ಯವಹಾರಗಳನ್ನು ಪ್ರತಾಪ್ ನೋಡಿಕೊಳ್ಳುತ್ತಿದ್ದರು. ಇಂದು ಬೆಳಿಗ್ಗೆ ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಅಪಘಾತಕ್ಕೂ ಮುನ್ನ 18,730 ರೂ. ಮದ್ಯ ಕುಡಿದಿದ್ದ ಮಿಹಿರ್‌ ಶಾ – ಮಗ ಮಾಡಿದ ತಪ್ಪಿಗೆ ತಂದೆಗೆ ಜೈಲು!

ಮಧ್ಯಾಹ್ನ 1:45ರ ವೇಳೆಗೆ ಪ್ರತಾಪ್ ಸಹೋದರ ಪ್ರಭುದೇವ ಕರೆಮಾಡಿ, ಪ್ರತಾಪ್ ಏನಾದ್ರೂ ನಿಮಗೆ ಸಿಕ್ಕಿದ್ನಾ ಅಂತಾ ಕೇಳಿದ್ರು. ನನ್ನ ಬಳಿ ಊರಿಗೆ ಹೋಗ್ತೀನಿ ಅಂತ ಹೇಳಿ ಹೋಗಿದ್ದಾರೆ ಅಂದೆ. ಅದೇನೋ ಮಾತ್ರೆ ತಗೊಂಡಿದ್ದಾನೆ ಅಂತ ಸುದ್ದಿಯಿದೆ. ಅವನ ಫೋನ್‌ ಸ್ವಿಚ್‌ ಆಫ್‌ ಆಗಿದೆ. ಕೂಡಲೇ ಮೊಬೈಲ್‌ ಟ್ರ್ಯಾಕ್‌ ಮಾಡಿ ಎಂದು ಸಹೋದರ ಹೇಳಿದರು.

 

ಪ್ರಭುದೇವ ಅವರ ಕರೆ ಬಂದ ಕೂಡಲೇ ಡಿಎಸ್‌ಪಿ, ಶಿವಮೊಗ್ಗ ಎಸ್‌ಪಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದೆ. ನಂತರ ನಾನು ಪ್ರತಾಪ್‌ಗೆ ಕರೆ ಮಾಡಿದೆ. ಪ್ರತಾಪ್ ಫೋನ್‌ ರಿಸೀವ್ ಮಾಡಿ ಮಾತನಾಡಿದರು. ಎಲ್ಲಿದಿಯಾ ಅಂತಾ ಕೇಳಿದಾಗ, ಹೊನ್ನಳ್ಳಿ-ಮಲೆಬೆನ್ನೂರು ಮಾರ್ಗದಲ್ಲಿದಿನಿ ಅಂತಾ ಹೇಳಿದರು. ಸ್ಪಷ್ಟವಾಗಿ ಮಾತನಾಡಿತ್ತಿರಲಿಲ್ಲ. ಕರೆ ಸ್ವೀಕರಿಸಿದ ವಿಚಾರವನ್ನು ನಾನು ಪೊಲೀಸ್‌ ಸೇರಿದಂತೆ ಎಲ್ಲರಿಗೂ ತಿಳಿಸಿದೆ. ಈ ವೇಳೆ ಪ್ರಭು ಅವರು ದಾರಿಯಲ್ಲಿ ಬರುತ್ತಿದ್ದಾಗ ಪ್ರತಾಪ್‌ ಅವರ ಕಾರು ಸಿಕ್ಕಿತು. ಕೂಡಲೇ ಅವರು ಹೊನ್ನಾಳಿಗೆ ಪ್ರತಾಪ್‌ ಅವರನ್ನು ಕರೆ ತಂದರು. ಈ ವೇಳೆ ನೀವು ದಾವಣಗೆರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಸಲಹೆ ನೀಡಿದರು. ದಾವಣಗೆರೆಗೆ ದೂರ ಆಗುತ್ತದೆ ಎಂದು ತಿಳಿದು ಶಿವಮೊಗ್ಗಕ್ಕೆ ದಾಖಲಿಸಲು ಪ್ರಭು ಮುಂದಾದರು. ಶಿಕಾರಿಪುರದ ಹತ್ತಿರ ಬರುವಾಗ ದಾರಿ ಮಧ್ಯೆ ಪ್ರತಾಪ್‌ ಮೃತಪಟ್ಟರು.

ಪ್ರತಾಪ್‌ ಅವರಿಗೆ ಮಕ್ಕಳಾಗಿಲ್ಲ ಎಂಬ ಕೊರಗಿತ್ತು. ಕುಡಿತದ ಚಟವು ಇತ್ತು. ಲಿವರ್‌ ಹೋಗಿತ್ತು. ಬೆಂಗಳೂರಿನ ಪುನರ್ವಸತಿ ಕೇಂದ್ರದಲ್ಲಿ ದಾಖಲಿಸಿ 2 ತಿಂಗಳು ಚಿಕಿತ್ಸೆ ಕೊಡಿಸಿದ್ದೆ. ಎಲ್ಲಾ ಸರಿ ಹೋಗಿತ್ತು. ಆದರೆ ಮತ್ತೆ ಕುಡಿತದ ಅ‍ಭ್ಯಾಸ ಶುರು ಮಾಡಿದ್ದರು. ನಾನು ಈ ರೀತಿ ಕುಡಿಯಬಾರದು ಎಂದು ಸಲಹೆ ಹೇಳಿದ್ದೆ. ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಅವರು ನೋಡಿಕೊಳ್ಳುತ್ತಿದ್ದರು ಎಂದು ಬಿಸಿ ಪಾಟೀಲ್‌ ಹೇಳಿದರು.

ಪ್ರತಾಪ್‌ ಕುಮಾರ್‌ ಕೆ.ಜಿ ಅವರು ಬಿ.ಸಿ ಪಾಟೀಲ್ ಪತ್ನಿ ವನಜಾ ಅವರ ಸಹೋದರ. ಗಂಡು ಮಕ್ಕಳು ಇಲ್ಲದ ಕಾರಣ ಹಿರಿಯ ಪುತ್ರಿಯಾದ ಸೌಮ್ಯಳನ್ನು ಬಿಸಿ ಪಾಟೀಲ್ ಸೋದರ ಮಾವನಿಗೆ ಕೊಟ್ಟು ಮದುವೆ ಮಾಡಿದ್ದರು. ಬಿ.ಸಿ ಪಾಟೀಲ್‌ ಅವರ ಕೃಷಿಗೆ ಸಂಬಂಧಿಸಿದ ವ್ಯವಹಾರವನ್ನು ಪ್ರತಾಪ್ ಕುಮಾರ್‌ ನೋಡಿಕೊಳ್ಳುತ್ತಿದ್ದರು. ಅಳಿಯನ ಆತ್ಮಹತ್ಯೆಯಿಂದ ಬಿಸಿ ಪಾಟೀಲ್‌ ಕುಗ್ಗಿದ್ದು ಹಿರೇಕೆರೂರಿನಲ್ಲಿ ಇದ್ದ ಅವರು ಶಿವಮೊಗ್ಗಲ್ಲಿರುವ ಮೆಗ್ಗಾನ್‌ ಆಸ್ಪತ್ರೆಗೆ ಈಗ ದೌಡಾಯಿಸಿದ್ದಾರೆ.

Share This Article