ಸಿದ್ದು ಹೊಗಳಿದ ಪ್ರತಾಪ್ ಸಿಂಹನ ಕಾಲೆಳೆದ ಡಾ.ಮಹದೇವಪ್ಪ

Public TV
1 Min Read

ಮೈಸೂರು: ಫೇಸ್‍ಬುಕ್‍ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೊಗಳಿದ್ದ ಸಂಸದ ಪ್ರತಾಪ್‍ಸಿಂಹ ವಿರುದ್ಧ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಫೇಸ್‍ಬುಕ್‍ನಲ್ಲೇ ಟಾಂಗ್ ಕೊಟ್ಟಿದ್ದಾರೆ.

ಪ್ರತಾಪ್ ಸಿಂಹ ಪೋಸ್ಟ್ ಗೆ ಖಾರವಾದ ಪ್ರತಿಕ್ರಿಯೆ ನೀಡಿರುವ ಮಹದೇವಪ್ಪ, “ಕಳೆದ ಚುನಾವಣೆಯಲ್ಲಿ ಬಿಜೆಪಿಗರು ಸುಳ್ಳು ಪ್ರಚಾರ ಮಾಡಿದರು. ಶವ ರಾಜಕೀಯ ಮಾಡುತ್ತಾ ಅಪಪ್ರಚಾರ ಮಾಡಿದರು. ಆದರೆ ಈಗ ಸಿದ್ದರಾಮಯ್ಯರ ಸಾಧನೆಯನ್ನ ಶ್ಲಾಘಿಸುತ್ತಾರೆ. ಇದು ಬಿಜೆಪಿಗರ ಇಬ್ಬಂದಿ ನೀತಿ. ಈಗ ಸಿದ್ದರಾಮಯ್ಯರನ್ನ ಹೊಗಳಿರುವ ಈ ವ್ಯಕ್ತಿ ಮುಂದಿನ ಚುನಾವಣೆಗೆ ಇನ್ನೊಂದು ವರಸೆ ತೆಗೆಯಬಹುದು”ಎಂದು ಗರಂ ಆಗಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಪ್ರತಾಪ್ ಸಿಂಹ

“ಹಾಗಾಗಿ ಯಾರು ಏನೇ ಹೇಳಿದರೂ ಜನರಿಗೆ ಕೆಲಸ ಮಾಡುವುದಷ್ಟೇ ನಮ್ಮ ಗುರಿಯಾಗಿರಬೇಕೆಂಬ ಸ್ಪಷ್ಟತೆ ನನಗಿದೆ. ಈ ನಿಟ್ಟಿನಲ್ಲಿ ಇಂತಹವರ ಕುತಂತ್ರ, ಇಬ್ಬಂದಿ ತನ ಮತ್ತು ಆತ್ಮವಂಚನೆಯ ಮಾತುಗಳನ್ನು ನಮ್ಮ ಜನರು ಅರ್ಥ ಮಾಡಿಕೊಳ್ಳಬೇಕಿರುವುದು ಈ ಕ್ಷಣದ ತುರ್ತು” ಎಂದು ಬರೆಯುವ ಮೂಲಕ ಸಿದ್ದರಾಮಯ್ಯರನ್ನು ಹೊಗಳಿದ್ದ ಪ್ರತಾಪ್ ಅವರಿಗೆ  ಟಾಂಗ್ ಕೊಟ್ಟಿದ್ದಾರೆ.

ಪ್ರತಾಪ್ ಸಿಂಹ ಪೋಸ್ಟ್:
“ಆತ್ಮೀಯರಾದ ಅಣ್ಣಯ್ಯ ನಾಯಕರು ಲಘು ಹೃದಯಾಘಾತಕ್ಕೊಳಗಾಗಿ ಮೈಸೂರಿನ ಜಯದೇವ ಆಸ್ಪತ್ರೆ ಸೇರಿದ್ದು, ಅವರನ್ನು ನೋಡಲು ಹೋಗಿದ್ದೆ. ಕಟ್ಟಡ ಮತ್ತು ವ್ಯವಸ್ಥೆ ಅದ್ಭುತವಾಗಿದೆ. 168 ಕೋಟಿ ಕೊಟ್ಟು ಅತ್ಯಾಧುನಿಕ ಕಟ್ಟಡ ನಿರ್ಮಾಣಕ್ಕೆ ಕಾರಣರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರಿಗೆ, ಉತ್ತಮ ಸೇವೆ ನೀಡುತ್ತಿರುವ ಮಂಜುನಾಥ್ ಅವರಿಗೆ ಧನ್ಯವಾದ” ಎಂದು ಪೋಸ್ಟ್ ಹಾಕಿದ್ದಾರೆ.

ಬಿಜೆಪಿಯಲ್ಲಿದ್ದರು ಸಿದ್ದರಾಮಯ್ಯ ಸರ್ಕಾರದ ಯೋಜನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಪ್ರತಾಪ್‍ಸಿಂಹ ಬಗ್ಗೆ ನೆಟ್ಟಿಗರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *