– ಸಿಎಂ ಸಮಾಜವಾದಿ ಹೆಸರೇಳಿಕೊಂಡು ಮಜಾವಾದಿ ಆಗಿದ್ದಾರೆ
– ಡಿಕೆಶಿ ಅವ್ರೇ ಬಿಳಿ ಟೋಪಿ ಸಾಬಣ್ಣ ಬಾ ಅಂತ ಜಮೀರ್ನ ಕರಿತೀರಾ?
ಮೈಸೂರು: ನೆಹರು ಮರಿ ಮೊಮ್ಮಗಳ ಹೆಸರು ಇಟ್ಕೊಂಡಿರುವ ನಿಮ್ಮ ಕೈಯಲ್ಲಿ ಆರ್ಎಸ್ಎಸ್ ಅನ್ನು ಬ್ಯಾನ್ ಸಾಧ್ಯವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಕಿಡಿಕಾರಿದ್ದಾರೆ.
ಆರ್ಎಸ್ಎಸ್ ಪಥ ಸಂಚಲನ ಬ್ಯಾನ್ ಮಾಡುವಂತೆ ಸಿಎಂಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರೇ ಆರ್ಎಸ್ಎಸ್ ಬ್ಯಾನ್ ಮಾಡುವ ವಿಚಾರವನ್ನು ಮರೆತು ಬಿಡಿ. ನೆಹರು ಕೈಯಲ್ಲೇ ಆಗಿಲ್ಲ. ಇನ್ನೂ ನೆಹರು ಮರಿ ಮೊಮ್ಮಗಳ ಹೆಸರು ಇಟ್ಟುಕೊಂಡಿರುವ ನಿಮ್ಮ ಕೈಯಲ್ಲಿ ಇದು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ರಾಜಕೀಯ ವಾರಸುದಾರಿಕೆ ಸುಲಭವಾಗಿ ಸಿಕ್ಕಿದೆ, ಅದ್ರ ಅಹಂನಲ್ಲಿ ಮಾತಾಡ್ತಿದ್ದಾರೆ – CT ರವಿ ವಾಗ್ದಾಳಿ
ಪ್ರಚಾರದ ಹುಚ್ಚು, ಗೀಳು ಜಾಸ್ತಿ
ಪ್ರಿಯಾಂಕ್ ಖರ್ಗೆ 3 ತಿಂಗಳಿಗೊಮ್ಮೆ ಆರ್ಎಸ್ಎಸ್ (RSS) ಅನ್ನು ಬೈಯ್ದು ತಮ್ಮ ಅಸ್ತಿತ್ವ ತೋರಿಸುವ ಪ್ರಯತ್ನ ಮಾಡಿದ್ದಾರೆ ಅಷ್ಟೆ. ಎಮ್ಮೆ ಮೇಲೆ ಮಳೆ ಸುರಿದರೆ ಪ್ರಯೋಜನವಿಲ್ಲ. ಅದೇ ರೀತಿ ಪಿಯುಸಿ ಫೇಲ್ ಆಗಿರುವ ಪ್ರಿಯಾಂಕ್ ಖರ್ಗೆಗೆ ಎಷ್ಟೇ ಬುದ್ಧಿ ಹೇಳಿದರು ಅರ್ಥವಾಗಲ್ಲ. ಪ್ರಚಾರದ ಹುಚ್ಚು, ಗೀಳು ಜಾಸ್ತಿಯಾಗಿ ಈ ರೀತಿ ಆಡ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಖರ್ಗೆ ಕುಟುಂಬ ಕಲಬುರಗಿಯನ್ನು ಕೊಚ್ಚೆ ಮಾಡಿದೆ. ಮೈಸೂರಲ್ಲಿ ಅತ್ಯಾಚಾರಕ್ಕೆ ಒಳಗಾದ ಹಕ್ಕಿ-ಪಕ್ಕಿ ಜನಾಂಗದ ಬಾಲಕಿ ಕಲಬುರಗಿ ಮೂಲದವರು. ಆ ಬಾಲಕಿ ಬಗ್ಗೆ ಪ್ರಿಯಾಂಕ್ ಧ್ವನಿ ಎತ್ತಿದ್ರಾ? ನಿಮ್ಮ ಕ್ಷೇತ್ರದ ಜನರಿಗೆ ಅಧಾರ್ ಕಾರ್ಡ್ ಕೊಡಿಸುವ ಯೋಗ್ಯತೆ ಇಲ್ಲ. ನೀವು ಆರ್ಎಸ್ಎಸ್ ಬಗ್ಗೆ ಮಾತಾಡ್ತೀರಾ? ಪಿಎಸ್ಐ ಹಗರಣ, ಬಿಟ್ ಕಾಯಿನ್ ಹಗರಣ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಿದ್ರಿ? ಈಗ ಅದನ್ನು ಸಾಬೀತು ಮಾಡಲು ಆಗ್ತಿಲ್ಲ ಆಕ್ರೋಶ ಹೊರಹಾಕಿದ್ದಾರೆ.
ಪ್ರಿಯಾಂಕ್ ಪಿಯುಸಿ ಫೇಲ್ ಆಗಿ ಅನಿಮೇಷನ್ ಸರ್ಟಿಫಿಕೇಟ್ ಇಟ್ಟುಕೊಂಡು ಓಡಾಡುತ್ತಿದ್ದಾರೆ. ನೀವಂತೂ ಓದಿಲ್ಲ, ನಿಮ್ಮ ಕ್ಷೇತ್ರದ ಮಕ್ಕಳು ಓದುವಂತೆ ಮಾಡುವ ವಾತಾವರಣವನ್ನೂ ಸೃಷ್ಟಿ ಮಾಡ್ತಿಲ್ಲ. ನಿಮ್ಮ ಖಾತೆಯಲ್ಲಿ ಏನೂ ಕಡಿದು ಕಟ್ಟೆ ಹಾಕಿದ್ದೀರಾ ಹೇಳಿ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಆರ್ಎಸ್ಎಸ್ ಬ್ಯಾನ್ ಮಾಡ್ಬೇಕು ಅಂತ ನಾನೆಲ್ಲಿ ಹೇಳಿದ್ದೇನೆ? – ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ನ ಕೂಗು ಮಾರಿಗಳ ಬಾಯಿಯಾದರೂ ಮುಚ್ಚಿಸಿ
ನೆಹರು ಕುಟುಂಬಕ್ಕೆ ಆರ್ಎಸ್ಎಸ್ ಬ್ಯಾನ್ ಮಾಡಲು ಆಗಿಲ್ಲ. ಇನ್ನೂ ಸಿದ್ದರಾಮಯ್ಯ ಕೈಯಲ್ಲಿ ಆಗುತ್ತಾ? ಸಿದ್ದರಾಮಯ್ಯ ಅವರಂತೂ ಸಮಾಜವಾದಿ ಹೆಸರೇಳಿಕೊಂಡು ಮಜಾವಾದಿ ಆಗಿದ್ದಾರೆ. ಸಿಎಂ ಕೈಯಲ್ಲಿ ಬೆಂಗಳೂರಿನ ಗುಂಡಿ ಮುಚ್ಚಿಸಲು ಆಗ್ತಿಲ್ಲ. ಕಾಂಗ್ರೆಸ್ನ ಕೂಗು ಮಾರಿಗಳ ಬಾಯಿಯಾದರೂ ಮುಚ್ಚಿಸಿ ಎಂದು ಕುಟುಕಿದ್ದಾರೆ.
ಭಾನುವಾರ ಕಾರ್ಯಕ್ರಮವೊಂದರಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ಮುನಿರತ್ನರನ್ನು `ಕರಿಟೋಪಿ ಎಂಎಲ್ಎ’ ಎಂದು ಕರೆದ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ಅವರೇ ರೌಡಿಸಂ ಥರ ಮಾತಾಡುವುದು ನಿಲ್ಲಿಸಿ. ಸಿಎಂ ಸ್ಥಾನಕ್ಕೆ ಬೇಕಾದ ಘನತೆ, ಗಾಂಭೀರ್ಯವನ್ನು ಬೆಳೆಸಿಕೊಳ್ಳಿ. ಆರ್.ಆರ್ ನಗರದಲ್ಲಿ ಕುಸುಮಾರನ್ನು ಗೆಲ್ಲಿಸಲು ಹಣ ಬಲ, ತೋಳ್ಬಲ ಪ್ರಯೋಗ ಮಾಡಿದ್ರೂ, ಜನ ಅವರನ್ನು ಗೆಲ್ಲಿಸಲಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
`ಕೈ’ನಲ್ಲಿ ಜಾಸ್ತಿ ಸೂಟ್ಕೇಸ್ ಕಳಿಸೋರಿಗೆ ಅಧಿಕಾರ
ಸ್ಥಳೀಯ ಶಾಸಕರಿಗೆ, ಸಂಸದರಿಗೆ ಗೌರವ ಕೊಡಿ. ಈ ಗುಂಪಲ್ಲಿ ಜಮೀರ್ ಕೂತಿದ್ರೆ ಹೇ ಬಿಳಿ ಟೋಪಿ ಸಾಬಣ್ಣ ಬಾ ಅಂತಾ ಕರೀತಿರಾ? ಕರೆಯುವ ಧಮ್ ಇದ್ಯಾ? ಕುಸುಮ ಅವರನ್ನು ನಿಮಗೆ ಬೇಕಾದರೆ ಎಂಎಲ್ಸಿ ಮಾಡಿಸಿ, ರಾಜ್ಯಸಭೆ ಸ್ಥಾನ ಕೊಡಿಸಿ. ಇದನ್ನು ಬಿಟ್ಟು ಸ್ಥಳೀಯ ಶಾಸಕರಿಗೆ ಯಾಕೆ ಕಿರುಕುಳ ಕೊಡ್ತೀರಾ? 2028ಕ್ಕೆ ಡಿ.ಕೆ.ಶಿವಕುಮಾರ್ ಕೂಡ ಜಾಬ್ ಲೇಸ್ ಆಗುತ್ತಾರೆ. ಆಗ ಅವರನ್ನು ಇದೇ ರೀತಿ ನಡೆಸಿಕೊಂಡರೆ ಹೇಗಿರುತ್ತದೆ? ಕಾಂಗ್ರೆಸ್ನಲ್ಲಿ ಸೂಟ್ಕೇಸ್ ಯಾರು ಜಾಸ್ತಿ ಕಳುಹಿಸ್ತಾರೋ ಅವರು ಅಧಿಕಾರದಲ್ಲಿ ಮುಂದುವರಿಯುತ್ತಾರೆ. ಇದು ಕಾಂಗ್ರೆಸ್ನ ಹೈಕಮಾಂಡ್ನ ಸಂಸ್ಕೃತಿ ಎಂದು ಆರೋಪಿಸಿದ್ದಾರೆ.