ದೇವಸ್ಥಾನ ತೆರವು ಹೇಯ ಕೃತ್ಯ: ಮುತಾಲಿಕ್

Public TV
1 Min Read

ಧಾರವಾಡ: ಸರ್ಕಾರ ಮೈಸೂರಿನಲ್ಲಿ ದೇವಸ್ಥಾನ ತೆರವು ಮಾಡುತ್ತಿರುವದು ಅತ್ಯಂತ ಹೇಯ ಕೃತ್ಯ, ಇದನ್ನು ನಾನು ಖಂಡಿಸುತ್ತೇನೆ, ವಿರೋಧಿಸುತ್ತೇನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನ ಕಲ್ಲಿನ ಹಾಗೂ ಸಿಮೆಂಟಿನ ಕಟ್ಟಡ ಮಾತ್ರ ಅಲ್ಲ, ಭಾವ, ಭಕ್ತಿಯ ಮಂದಿರ. ಯಾವುದೇ ರೀತಿಯ ಸೂಚನೆ ಇಲ್ಲದೇ, ಸಮಾಲೋಚನೆ ಇಲ್ಲದೇ ರಾತ್ರೋ ರಾತ್ರಿ ದೇವಸ್ಥಾನ ಕೆಡವುವುದು ಅತ್ಯಂತ ಖಂಡನೀಯ. ಸರ್ಕಾರ ಕೂಡಲೇ ಈ ಕುರಿತು ಗಮನಹರಿಸಿ, ತಡೆಯಬೇಕು. ದೇವಸ್ಥಾನ ಮಾತ್ರ ಟಾರ್ಗೇಟ್ ಮಾಡುತ್ತಿರುವದು ಸರಿಯಲ್ಲ. ರಸ್ತೆ ಹಾಗೂ ಫುಟ್‍ಪಾತ್ ಮೇಲೆ ಸಾಕಷ್ಟು ಮಸೀದಿ, ದರ್ಗಾಗಳು, ಘೋರಿಗಳು ಹಾಗೂ ಚರ್ಚ್ ಇವೆ. ಅವುಗಳನ್ನು ಮಾತ್ರ ಮುಟ್ಟದೆ ದೇವಸ್ಥಾನ ಟಾರ್ಗೆಟ್ ಮಾಡುವದು ಸರಿಯಲ್ಲ ಎಂದರು. ಇದನ್ನೂ ಓದಿ: ಮೈಸೂರಿನಲ್ಲಿ ದೇವಸ್ಥಾನ ತೆರವು ಕಾರ್ಯಚರಣೆಗೆ ಜಿಲ್ಲಾಡಳಿತ ಬ್ರೇಕ್

ಕಾನೂನು ಎಲ್ಲರಿಗೂ ಸಮಾನವಾಗಿದೆ, ಸುಪ್ರೀಂ ಕೋರ್ಟ್ ಬರಿ ದೇವಸ್ಥಾನಕ್ಕೆ ಅಷ್ಟೇ ಹೇಳಿಲ್ಲ. ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಒಂದು ಘೋರಿ ಹಾಗೆಯೇ ಜೀವಂತವಾಗಿದೆ. ಅದನ್ನು ತೆಗೆಯುವ ತಾಕತ್ತು ಸರ್ಕಾರಕ್ಕೆ ಇಲ್ಲ. ಸರ್ಕಾರ ಇದನ್ನು ನಿಲ್ಲಿಸದಿದ್ದರೆ ನಮ್ಮ ಸಂಘಟನೆಯಿಂದ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಸರ್ಕಾರ ಹಿಂದುತ್ವ ಎಂದು ಹೇಳುತ್ತೆ, ಈಗ ಅದೇ ಸರ್ಕಾರ ವರ್ತಿಸುವುದನ್ನು ನೋಡಿದರೆ ವಿಚಿತ್ರ ಆಗುತ್ತಿದೆ. ಬಿಜೆಪಿಗೆ ಸೆಕ್ಯುಲರ್ ಆಗಬೇಕು ಎಂಬ ಸ್ಥಿತಿ ನಿರ್ಮಾಣ ಆಗಿದೆಯಾ ಎಂದ ಅವರು, ಹಿಂದುತ್ವದ ಹಿನ್ನೆಲೆಯಲ್ಲಿ ಬಂದಿರುವ ಬಿಜೆಪಿ, ಜಿಲ್ಲಾಧಿಕಾರಿ ಮೂಲಕ ದೇವಸ್ಥಾನ ಕೆಡವುವದು ಸರಿಯಲ್ಲ. ಸುಪ್ರೀಂ ಕೋರ್ಟ್ ಆದೇಶ ಬಹಳ ಇವೆ, ಮಸೀದಿ ಮೈಕ್ ಹಚ್ಚಬಾರದು ಎಂದು ಆದೇಶ ಇದೆ. ಇದರ ಬಗ್ಗೆ ಸರ್ಕಾರ ಲಕ್ಷ್ಯ ಕೊಟ್ಟಿಲ್ಲ, ಬಿಜೆಪಿಯವರು ಅದನ್ನು ಪಾಲನೆ ಮಾಡಲಿ. ನಾನು ಗೃಹ ಮಂತ್ರಿ ಹಾಗೂ ಸಿಎಂಗೆ ಮನವಿ ಮಾಡುತ್ತೇನೆ, ಕೂಡಲೇ ಇದನ್ನು ನಿಲ್ಲಿಸಿ, ಇದು ನಿಮಗೆ ಶೋಭೆ ತರಲ್ಲ ಎಂದು ಮುತಾಲಿಕ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *