ಪ್ರಜ್ವಲ್ ರೇವಣ್ಣ ಸ್ಫೋಟದಿಂದ ತೆನೆಯಲ್ಲಿ ತಳಮಳ- ಮೊಮ್ಮಗನ ಮೇಲೆ ದೇವೇಗೌಡ್ರು ಬೇಸರ

Public TV
2 Min Read

ಮೈಸೂರು: ಜೆಡಿಎಸ್ ಕುಟುಂಬದಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಹುಣಸೂರು ಕ್ಷೇತ್ರದಿಂದ ಟಿಕೆಟ್ ಮಿಸ್ಸಾಗಿದ್ದಕ್ಕೆ ಕುಟುಂಬದ ವಿರುದ್ಧವೇ ಸಿಟ್ಟಾಗಿರುವ ರೇವಣ್ಣ ಪುತ್ರ ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ರೇವಣ್ಣ, ಚಿಕ್ಕಪ್ಪ ಕುಮಾರಸ್ವಾಮಿ ಹಾಗೂ ತಾತನ ವಿರುದ್ದವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಣಸೂರಿನಲ್ಲಿ ನಿಂತು ಜೆಡಿಎಸ್ಸೇ ಹುಬ್ಬೇರುವಂತೆ ಮಾಡಿದ್ದಾರೆ.

ಮೈಸೂರಿನ ಹುಣಸೂರು ಇದೀಗ ಜೆಡಿಎಸ್ ಪಕ್ಷಕ್ಕೆ ಹುಳಿ ಹುಳಿಯಾಗಿ ಪರಿಣಮಿಸಿದೆ. ಒಂದೆಡೆ ಕ್ಷೇತ್ರದಲ್ಲಿ ಸತತ 4 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ ಶಾಸಕ ಜಿ.ಟಿ.ದೇವೆಗೌಡರ ಪುತ್ರ ಟಿಕೆಟ್ ಆಕಾಂಕ್ಷಿಯಾಗಿದ್ರೆ. ಮತ್ತೊಂದೆಡೆ ಈಗಷ್ಟೆ ಪಕ್ಷ ಸೇರಿರುವ ಮಾಜಿ ಸಂಸದ ವಿಶ್ವನಾಥ್ ಮತ್ತೊಬ್ಬ ಆಕಾಂಕ್ಷಿಯಾಗಿದ್ದಾರೆ. ಇವರಿಬ್ಬರ ಮಧ್ಯೆ ನಾನೇನು ಕಮ್ಮಿ ಅನ್ನೋ ಹಾಗೆ ಬಂದಿದೆ ದೇವೇಗೌಡರ ಕುಟುಂಬದ ಕುಡಿ, ಶಾಸಕ ರೇವಣ್ಣನವರ ಪುತ್ರ ಪ್ರಜ್ವಲ್ ರೇವಣ್ಣ.

ಕಳೆದ 3 ತಿಂಗಳಿನಿಂದ ಹುಣಸೂರಿನಲ್ಲಿ ಬಿರುಗಾಳಿಯಂತೆ ಓಡಾಡಿ ಪಕ್ಷ ಸಂಘಟನೆ ಮಾಡಿದ್ರು. ತನ್ನದೇ ಗುಂಪು ಕಟ್ಟಿಕೊಂಡು ನಾನು ಟಿಕೆಟ್ ಆಕಾಂಕ್ಷಿ ಅನ್ನೋದನ್ನ ತನ್ನ ತಾತ ದೇವೇಗೌಡ ಹಾಗೂ ಚಿಕ್ಕಪ್ಪ ಕುಮಾರಸ್ವಾಮಿಗೆ ಪರೋಕ್ಷವಾಗಿ ತಿಳಿಸಿದ್ರು. ಆದ್ರೆ ವಿಶ್ವನಾಥ್ ಪಕ್ಷ ಸೇರ್ಪಡೆ ಅಧಿಕೃತವಾದ ಮೇಲೆ ಲೆಕ್ಕಾಚಾರ ತಲೆಕೆಳಗಾಗಿದೆ. ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೂಡಾ ಸಿಗಲ್ಲ ಎನ್ನಲಾಗಿದೆ. ಅದಕ್ಕೀಗ ಪ್ರಜ್ವಲ್ ತನ್ನ ಕುಟುಂಬಸ್ಥರ ವಿರುದ್ಧವೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಸೂಟ್‍ಕೇಸ್ ತಂದವರಿಗೆ ಮುಂದಿನ ಕುರ್ಚಿ, ಪ್ರಮಾಣಿಕರಿಗೆ ಹಿಂದಿನ ಕುರ್ಚಿ ಅಂತಾ ಹೇಳೋ ಮೂಲಕ ತನ್ನ ಚಿಕ್ಕಪ್ಪನಿಗೆ ಟಾಂಗ್ ನೀಡಿದ್ದಾರೆ.

ತಾತ, ಚಿಕ್ಕಪ್ಪನ ಜೊತೆಗೆ ಸ್ಥಳೀಯ ನಾಯಕರನ್ನು ಟಾರ್ಗೆಟ್ ಮಾಡಿರುವ ಪ್ರಜ್ವಲ್, ನಮ್ಮನ್ನು ಬೆಳೆಸಿದ ನಾಯಕರು ನಮ್ಮನ್ನೇ ವಿರೋಧಿಸುತ್ತಾರೆ. ಎರಡು ದೋಣಿಗಳ ಮೇಲೆ ಕಾಲಿಟ್ಟು ಅವರು ಆರಾಮಾಗಿದ್ದಾರೆ ಅಂತ ಕಿಡಿಕಾರಿದ್ರು. ಇನ್ನು ಪಕ್ಷಕ್ಕಾಗಿ ಎಂಥಾ ತ್ಯಾಗಕ್ಕೂ ಸಿದ್ಧ ಎಂದ ಪ್ರಜ್ವಲ್, ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿದ್ರು.

ಅಂತಿಮವಾಗಿ ನನ್ನ ನೋವನ್ನ ಹೇಳಿಕೊಳ್ಳುತ್ತಿದ್ದೇನೆ ಎಂದ ಪ್ರಜ್ವಲ್, ಟಿಕೆಟ್ ಕೈ ತಪ್ಪಿದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ರು. ಅಲ್ಲದೆ ಈ ಸಭೆ ಯಾರ ವಿರುದ್ಧವೂ ಅಲ್ಲ. ನನ್ನ ಬೆಂಬಲಿಗರು ಹಾಗೂ ಅಭಿಮಾನಿಗಳು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರಿ. ದೇವೇಗೌಡರ ಕೈ ಬಲಪಡಿಸಿ. ಕುಮಾರಸ್ವಾಮಿಯವರನ್ನ ಮುಖ್ಯಮಂತ್ರಿ ಮಾಡೋಣ ಎಂದರು.

ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವ ಪ್ರಜ್ವಲ್, ಮಾಜಿ ಪ್ರಧಾನಿ ಹಾಗೂ ಮಾಜಿ ಮುಖ್ಯಮಂತ್ರಿಯಾಗಿರುವ ತಾತ ಹಾಗೂ ಚಿಕ್ಕಪ್ಪನ ವಿರುದ್ಧವೇ ಸಿಟ್ಟಾಗಿದ್ದು ಮಾತ್ರ ಎಲ್ಲರನ್ನು ಹುಬ್ಬೇರಿಸಿದೆ. ಪಕ್ಷದ ನಾಯಕತ್ವದ ಬಹಿರಂಗ ಟೀಕೆ ಹಿನ್ನೆಲೆ ದೇವೇಗೌಡರು ಬೇಸರಗೊಂಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಅಸಮಾಧಾನಗೊಂಡಿದ್ದಾರೆ. ಪ್ರಜ್ವಲ್ ರೇವಣ್ಣರಿಂದ ಈ ಬಗ್ಗೆ ಸ್ಪಷ್ಟೀಕರಣ ಕೊಡಿಸಲು ಕುಟುಂಬದಲ್ಲಿ ಪ್ರಯತ್ನ ನಡೆದಿದ್ದು, ಇಂದು ಯುವ ನಾಯಕ ಪ್ರಜ್ವಲ್ ರೇವಣ್ಣ ಸ್ಪಷ್ಟೀಕರಣ ಕೊಡ್ತಾರಾ ಎಂದು ಕಾದುನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *