ಗಾಂಧೀನಗರ: ಬೇರೆಯವರ ಕಣ್ಣಿಗೆ ತನ್ನ ಪ್ರಿಯತಮೆ ಸುಂದರವಾಗಿ ಕಾಣಿಸಬಾರದು ಎಂದು ಆಕೆಯ ಮುಂದಿನ ಎರಡು ಹಲ್ಲುಗಳನ್ನು ಪ್ರೇಮಿ ಕಿತ್ತು ಹಾಕಿರುವಂತಹ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ.
ಗೀತಾಬೆನ್(55) ಪ್ರಿಯಕರಿನಿಂದ ಹಿಂಸೆ ಅನುಭವಿಸುತ್ತಿರುವ ಮಹಿಳೆ. ಪ್ರಿಯಕರನ ಕಾಟವನ್ನು ತಾಳಲಾಗದೇ ಆಟೋದಿಂದಲೇ ಜಿಗಿದಿದ್ದಾರೆ. ಬಳಿಕ ಸಹಾಯವಾಣಿಗೆ ಕರೆ ಮಾಡಿದ್ದು, ಅವರು ಬಂದು ರಕ್ಷಣೆ ಮಾಡಿದ್ದಾರೆ. ಅಭಯಂ ಸಹಾಯವಾಣಿಯಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾರೆ.
ಘಟನೆಯ ವಿವರ:
ಗೀತಾಬೆನ್ (55) ಈ ಹಿಂದೆ ವ್ಯಕ್ತಿಯೊಬ್ಬರ ಜೊತೆ ಮದುವೆಯಾಗಿತ್ತು. 15 ವರ್ಷದ ಹಿಂದೆ ಆಟೋ ಚಾಲಕನನ್ನು ಗೀತಾಬೆನ್ ಪ್ರೀತಿ ಮಾಡಿ ತನ್ನ ಪತಿ ಮತ್ತು ಮಕ್ಕಳನ್ನು ಬಿಟ್ಟು ಆತನ ಹಿಂದೆ ಓಡಿ ಹೋಗಿದ್ದಾರೆ. ಇಬ್ಬರು ಓಡಿ ಹೋಗಿ ಮದುವೆಯಾಗದೇ ಒಟ್ಟಿಗೆ ಇದ್ದರು. ಆದರೆ ಇತ್ತೀಚೆಗೆ ಪ್ರೇಮಿ ಆಕೆಯ ಮೇಲೆ ಅನುಮಾನ ಪಡಲು ಪ್ರಾರಂಭಿಸಿದ್ದಾನೆ. ಆತನ ಅನುಮಾನ ವಿಪರೀತವಾಗಿ ಆಕೆ ತನಗೆ ಬಿಟ್ಟು ಇನ್ಯಾರಿಗೂ ಸುಂದರವಾಗಿ ಕಾಣಬಾರದು ಎಂದು ಬಲವಂತವಾಗಿ ಆಕೆಯ ಮುಂದಿನ ಎರಡು ಹಲ್ಲು ಕಿತ್ತು ಹಾಕಿದ್ದಾನೆ.
ಪ್ರೇಮಿ ಅಷ್ಟಕ್ಕೆ ಸುಮ್ಮನಾಗದೇ ನನ್ನನ್ನು ಕೆಲಸಕ್ಕೂ ಹೋಗದಂತೆ ತಡೆದಿದ್ದಾನೆ. ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದರು ಆತನಿಗೆ ಅನುಮಾನ ಹೋಗಲಿಲ್ಲ. ಬಳಿಕ ನಾನು ಮನೆಯಲ್ಲಿದ್ದರು ನನ್ನನ್ನು ಯಾರು ನೋಡಬಾದರು ಎಂದು ಮನೆಯಲ್ಲಿದ್ದ ಎಲ್ಲ ಕಿಟಕಿ ಮತ್ತು ಬಾಗಿಲುಗಳಿಗೆ ಪ್ಲಾಸ್ಟಿಕ್ ಶೀಟನ್ನು ತಂದು ಹಾಕಿದ್ದಾನೆ. ಕೊನೆಗೆ ನನ್ನನ್ನು ಮನೆಯಲ್ಲಿಯೂ ಇರಲು ಬಿಡದೆ ತನ್ನ ಜೊತೆಯಲ್ಲಿ ಪ್ರತಿದಿನ ಆಟೋದಲ್ಲಿ ಪಕ್ಕದಲ್ಲಿಯೇ ಕೂರಿಸಿಕೊಂಡು ಸುತ್ತಾಡಿಸುತ್ತಿದ್ದನು. ನಾನು ಅವನ ಬಳಿ ಖೈದಿಯಂತೆ ಬದುಕುತ್ತಿದ್ದೇನೆ ಎಂದು ಗೀತಾಬೆನ್ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರೇಮಿಯ ಕಾಟಕ್ಕೆ ಬೆಸತ್ತು ಮಹಿಳೆ ಬುಧವಾರ ಎಂದಿನಂತೆ ಆತನ ಜತೆ ಆಟೋರಿಕ್ಷಾದಲ್ಲಿ ಹೋಗಿದ್ದಾರೆ. ಈ ವೇಳೆ ದುಧೇಶ್ವರ್ ಪ್ರದೇಶದಲ್ಲಿ ತಕ್ಷಣ ಆಟೋದಿಂದ ಜಿಗಿದಿದ್ದಾರೆ. ನಂತರ ಇದನ್ನು ಗಮನಿಸಿದ ಸಾರ್ವಜನಿಕರು 181 ಅಭಯಂ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಗೀತಾಬೆನ್ ಸಹಾಯವಾಣಿಯಲ್ಲಿ ತಾನು ಅನುಭವಿಸುತ್ತಿರುವ ಹಿಂಸೆಯನ್ನು ಹೇಳಿಕೊಂಡಿದ್ದಾರೆ.
ಮಹಿಳೆಯ ನೋವನ್ನು ಆಲಿಸಿದ ಸಹಾಯವಾಣಿ ಆಟೋ ಚಾಲಕನನ್ನು ಕರೆಸಿ ಆತನ ಜೊತೆ ಮಾತನಾಡಿ ಇನ್ನು ಮುಂದೆ ಆಕೆಯ ಮೇಲೆ ಅನುಮಾನ ಪಡುವುದಿಲ್ಲ ಎಂದು ಲಿಖಿತವಾಗಿ ಬರೆಸಿಕೊಂಡಿದೆ. ಇಷ್ಟಾದರೂ ಗೀತಾಬೆನ್ ಆತನ ವಿರುದ್ಧ ಯಾವುದೇ ದೂರು ನೀಡಿಲ್ಲ. ನಾನು ಆತನನ್ನು ತುಂಬಾ ಪ್ರೀತಿಸುತ್ತೇನೆ. ಆದ್ದರಿಂದ ನಾನು ಪೊಲೀಸರಿಗೆ ದೂರು ನೀಡಿಲ್ಲ ಎಂದು ಗೀತಾಬೆನ್ ಹೇಳಿದ್ದಾರೆ.