ಟಿಬಿ ಡ್ಯಾಂ ಕಾಲುವೆ ದುರಸ್ತಿಯೆಂದು ಕೋಟಿ ಕೋಟಿ ಹಣ ಗುಳುಂ!

Public TV
1 Min Read

ಬಳ್ಳಾರಿ: ತುಂಗಭದ್ರಾ ಜಲಾಶಯದ ಕಾಲುವೆಗಳ ದುರಸ್ತಿ ಕಾರ್ಯದ ಹೆಸರಲ್ಲಿ ರಾಜಕಾರಣಿಗಳು ಕೋಟಿ ಕೋಟಿ ಹಣವನ್ನು ಗುಳುಂ ಮಾಡುತ್ತಿದ್ದಾರೆ.

ಸದ್ಯ ಜಲಾಶಯ ಭರ್ತಿಯಾಗಿದ್ದು, ನದಿಗೆ ಈಗಾಗಲೇ 20 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ. ಜೊತೆಗೆ ರೈತರ ಹಿತಾಸಕ್ತಿಗೆ ಪೂರಕವಾಗಿ ತುಂಗಭದ್ರಾ ಬಲದಂಡೆಯ ಮೇಲ್ಮಟ್ಟದ ಮತ್ತು ಕೆಳಮಟ್ಟದ ಕಾಲುವೆಗಳಿಗೆ ನೀರು ಬಿಡಲು ಟಿಬಿ ಬೋರ್ಡ್ ಸಜ್ಜಾಗಿದೆ. ಅಚ್ಚರಿ ವಿಷಯವೆಂದರೆ ಅದೇ ಕಾಲುವೆಗಳ ದುರಸ್ತಿ ಕಾರ್ಯ ಈಗ ನಡೆಯುತ್ತಿದೆ.

ತುಂಗಭದ್ರಾ ಬಲದಂಡೆ ಕಾಲುವೆಗಳ ದುರಸ್ತಿ ಕಾರ್ಯ ಪ್ರತಿ ವರ್ಷ ನೀರು ಬಿಡುವ ಸಮಯದಲ್ಲೇ ನಡೆಯುತ್ತಿರುತ್ತವೆ. ಹೆಚ್.ಎಲ್.ಸಿ ಕಾಲುವೆಯಲ್ಲಿ ಕಳೆದ ಆರು ತಿಂಗಳಿನಿಂದ ಹಾಗೂ ಎಲ್.ಎಲ್‍ಸಿ ಕಾಲುವೆಯಲ್ಲಿ ಕಳೆದ ಮೂರು ತಿಂಗಳಿನಿಂದ ನೀರು ಹರಿಯುವುದು ನಿಂತರೂ ದುರಸ್ತಿ ಕಾರ್ಯ ಕೈಗೊಳ್ಳದ ಅಧಿಕಾರಿಗಳು, ಗುತ್ತಿಗೆದಾರರು ಕಾಲುವೆಗಳಿಗೆ ನೀರು ಬಿಡುವ ಸಮಯದಲ್ಲೇ ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ಈ ದುರಸ್ತಿ ಕಾಮಗಾರಿ ಗುತ್ತಿಗೆದಾರರಿಗೆ ಹಣದ ಮೂಲವಾಗಿದೆ ಎಂದು ರೈತ ಸಂಘಟನೆ ಆರೋಪಿಸುತ್ತಿದೆ.

ಕಾಮಗಾರಿ ಏಕಿಷ್ಟು ತಡ ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳನ್ನು ಸ್ಥಳೀಯ ರೈತ ಪ್ರಶ್ನಿಸಿದ್ರೆ, ದುರಸ್ತಿಯ ವರದಿಯ ಅನುಮೋದನೆಗೆ ಹಣಕಾಸಿನ ಮಂಜೂರಾತಿ ಪಡೆದು ಕಾಮಗಾರಿ ಪ್ರಾರಂಭಿಸಿಲು ತಡವಾಗುತ್ತದೆ ಎಂದು ಸಬೂಬು ನೀಡುತ್ತಾರೆ. ಆದ್ರೆ ಇದಕ್ಕೆ ಯಾವುದೇ ಸ್ಪಷ್ಟವಾದ ಉತ್ತರವನ್ನು ನೀಡುತ್ತಿಲ್ಲ. ಇತ್ತ ನದಿ ಮೂಲಕ ಸಾವಿರಾರು ಕ್ಯೂಸೆಕ್ ನೀರು ಹರಿದು ಆಂಧ್ರದ ಪಾಲಾಗುತ್ತಿದೆ ಅಂತ ರೈತ ಹೇಳಿದ್ದಾರೆ

ಕೇಂದ್ರ ಸರ್ಕಾರದ ನಿರ್ದೇಶನದಂತೆ ತುಂಗಭದ್ರಾ ಮಂಡಳಿ ಈ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಬಹುಕೋಟಿ ರೂಪಾಯಿಗಳ ಕಾಮಗಾರಿಯನ್ನು ನೀರು ಬಿಡುವ ಸಮಯದಲ್ಲಿ ನಡೆಸುತ್ತಿರುವುರಿಂದ ಸರ್ಕಾರದ ಹಣ ಪೋಲಾಗುತ್ತದೆ. ಹಾಗೆ ಬಹುತೇಕ ಗುತ್ತಿಗೆದಾರರು, ಅಧಿಕಾರಿಗಳೊಂದಿಗೆ ಸೇರಿಕೊಂಡು ಕಾಮಗಾರಿ ಮುಗಿಸಿದಂತೆ ಬಿಲ್ ಪಡೆಯುತ್ತಾರೆ ಎಂಬ ಗಂಭೀರ ಆರೋಪವು ಕೇಳಿಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *