ಹುತಾತ್ಮನ ಮಗನನ್ನು ಎತ್ತಿಕೊಂಡು ಕಣ್ಣೀರು ಹಾಕಿದ ಹಿರಿಯ ಅಧಿಕಾರಿ

Public TV
1 Min Read

ಶ್ರೀನಗರ: ಜಮ್ಮು-ಕಾಶ್ಮೀರದ ಅನಂತ್‍ನಾಗ್‍ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಇನ್ಸ್ ಪೆಕ್ಟರ್ ಅರ್ಷದ್ ಖಾನ್ ಅವರ ಮಗನನ್ನು ಎತ್ತಿಕೊಂಡು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಣ್ಣೀರು ಹಾಕಿದ ಫೋಟೋವೊಂದು ವೈರಲ್ ಆಗುತ್ತಿದೆ.

ಸೋಮವಾರ ಶ್ರೀನಗರದ ಜಿಲ್ಲಾ ಪೊಲೀಸ್ ಮಾರ್ಗದಲ್ಲಿ ನಡೆದ ಮಾರ್ಲಪಾಣಾ ಕಾರ್ಯಕ್ರಮದಲ್ಲಿ ಈ ಫೋಟೋವನ್ನು ಕ್ಲಿಕ್ಕಿಸಲಾಗಿದೆ. ಹಿರಿಯ ಅಧಿಕಾರಿ ಹಾಸೀಬ್ ಮುಗಲ್ ಹುತಾತ್ಮರಾದ ಅರ್ಷದ್ ಖಾನ್ ಅವರ 4 ವರ್ಷದ ಮಗ ಉಹ್ಬಾನ್‍ನನ್ನು ಎತ್ತಿಕೊಂಡು ಕಣ್ಣೀರು ಹಾಕಿದ್ದಾರೆ.

ಅರ್ಷದ್ ಖಾನ್ ಅನಂತ್‍ನಾಗ್‍ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡ ಅವರನ್ನು ದೆಹಲಿಯ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರ್ಷದ್ ಭಾನುವಾರ ಹುತಾತ್ಮರಾಗಿದ್ದಾರೆ.

ಅರ್ಷದ್ ಖಾನ್ ಅನಂತ್‍ನಾಗ್ ನಗರದ ಸರ್ದಾರ್ ಪೊಲೀಸ್ ಠಾಣೆಯಲ್ಲಿ ಎಸ್‍ಎಚ್‍ಒ ಆಗಿ ನೇಮಕರಾಗಿದ್ದರು. ಅರ್ಷದ್ ಅವರು ತಮ್ಮ ಪತ್ನಿ, ಇಬ್ಬರು ಗಂಡು ಮಕ್ಕಳು, ಪೋಷಕರು ಹಾಗೂ ಕಿರಿಯ ಸಹೋದರನನ್ನು ಅಗಲಿದ್ದಾರೆ.

ಜಮ್ಮು-ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಸೈನಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಐವರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅಲ್ಲದೆ ಪ್ರತಿ ದಾಳಿಯಲ್ಲಿ ಒಬ್ಬ ಉಗ್ರನನ್ನು ಸೈನಿಕರು ಹತ್ಯೆ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *