ರಾಯಚೂರು: ಮನೆ ಕಳ್ಳತನದ ವಿಚಾರಣೆಗೆ ಕರೆದು ಪೊಲೀಸರು ಯುವಕನನ್ನು ಮನಬಂದಂತೆ ಥಳಿಸಿರುವ ಘಟನೆ ರಾಯಚೂರಿನ ಇಡಪನೂರಿನಲ್ಲಿ ನಡೆದಿದೆ.
ಇಡಪನೂರು ಠಾಣೆ ಪೊಲೀಸರು ವಿಚಾರಣೆ ನೆಪದಲ್ಲಿ ಬಾಸುಂಡೆ ಬರುವಂತೆ ಯುವಕನನ್ನು ಥಳಿಸಿದ್ದಾರೆ. ಪೊಲೀಸರ ಹೊಡೆತಕ್ಕೆ ಲಿಂಗನಖಾನ್ ಗ್ರಾಮದ ಭೀಮೇಶ್ ಗಂಭೀರ ಗಾಯಗೊಂಡಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ನಾಲ್ಕು ತಿಂಗಳ ಹಿಂದೆ ಭೀಮೇಶ್ ಚಿಕ್ಕಪ್ಪ ಆಂಜನೇಯನ ಮನೆ ಕಳ್ಳತನವಾಗಿತ್ತು. 55 ಸಾವಿರ ರೂ. ಕಳ್ಳತನವಾಗಿದ್ದು, ಭೀಮೇಶ್ ಮೇಲೆ ಆರೋಪ ಹೊರಿಸಲಾಗಿತ್ತು. ಗ್ರಾಮದ ಮುಖಂಡರ ನೇತೃತ್ವದಲ್ಲಿ ಪಂಚಾಯ್ತಿ ಮಾಡಿ ದೇವರ ಆಣೆ ಮಾಡಿ ಹಣವನ್ನು ತೆಗೆದುಕೊಂಡು ಹೋಗುವಂತೆ ಆಂಜನೇಯನಿಗೆ ಸೂಚಿಸಲಾಗಿತ್ತು.
ಆದರೆ ಆಂಜನೇಯ ಅಣ್ಣನ ಮಗನೇ ಹಣ ತಿನ್ನಲಿ ಎಂದು ಹೇಳಿ ಹೋಗಿದ್ದನು. ಈಗ ಪುನಃ ಪೊಲೀಸ್ ಠಾಣೆಗೆ ದೂರು ನೀಡಿ, ಸುಳ್ಳು ಆರೋಪ ಹೊರಿಸಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ಸುಳ್ಳು ದೂರಿಗೆ ಪೊಲೀಸರು ಕಳ್ಳತನ ಒಪ್ಪಿಕೊಳ್ಳುವಂತೆ ಥಳಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.