ಬೆಂಗಳೂರು: ರಾಜ್ಯದಲ್ಲಿ ಭಾನುವಾರ (ಅ.12) ನಡೆದ ಎರಡು ಬೆಳವಣಿಗೆಗಳ ಬಗ್ಗೆ ಆರ್ಎಸ್ಎಸ್ ರಾಜ್ಯ ಘಟಕದ ಚಾಮರಾಜಪೇಟೆಯ (Chamarajpet) ಕಚೇರಿಯಲ್ಲಿ ಇಂದು (ಅ.13) ಸಭೆ ನಡೆಸುವ ಸಾಧ್ಯತೆ ಇದೆ. ಇದರಿಂದಾಗಿ ಆರ್ಎಸ್ಎಸ್ (RSS) ಕಚೇರಿ ಕೇಶವ ಕೃಪಕ್ಕೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.
ಆರ್ಎಸ್ಎಸ್ ಕಾರ್ಯಕ್ರಮಕ್ಕೆ ಸರ್ಕಾರಿ ಜಾಗ ನೀಡದಂತೆ ಸಚಿವ ಪ್ರಿಯಾಂಕ್ ಖರ್ಗೆಯವರು ಸಿಎಂಗೆ ಪತ್ರ ಬರೆದಿದ್ದರು. ಅದಲ್ಲದೇ ಜೆಪಿ ಪಾರ್ಕ್ನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಶಾಸಕ ಮುನಿರತ್ನ ಅವರನ್ನ ಕರಿಟೋಪಿ ಎಂಎಲ್ಎ ಎಂದಿದ್ದರು. ಈ ಎರಡು ವಿಚಾರವಾಗಿ ಆರ್ಎಸ್ಎಸ್ ಸಭೆ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಸರ್ಕಾರಿ ಸ್ಥಳಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್ಎಸ್ಎಸ್ ಎಲ್ಲಾ ಚಟುವಟಿಕೆ ಬ್ಯಾನ್?
ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಕಾರ್ಯಕ್ರಮ ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಚಿವ ಪ್ರಿಯಾಂಕ ಖರ್ಗೆ (Priyank Kharge) ಪತ್ರ ಬರೆದಿದ್ದರು. ಶಾಲಾ-ಕಾಲೇಜು ಮೈದಾನಗಳು, ಸಾರ್ವಜನಿಕ ಪಾರ್ಕ್, ಮುಜರಾಯಿ ದೇವಸ್ಥಾನಗಳಲ್ಲಿ ಆರ್ಎಸ್ಎಸ್ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು. ಈ ಸಂಬಂಧ, ಕಾನೂನು ರೂಪಿಸಬೇಕು ಅಂತ ಅ. 4ರಂದು ಮನವಿ ಸಲ್ಲಿಸಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದು, ಪರಿಶೀಲಿಸಿ ಕೂಡಲೆ ಅಗತ್ಯ ಕ್ರಮ ವಹಿಸಿ ಎಂದು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಆರ್ಎಸ್ಎಸ್ಗೂ ತಾಲಿಬಾನ್ಗೂ ಏನೂ ವ್ಯತ್ಯಾಸ ಇಲ್ಲ. ಸರ್ಕಾರಿ ಶಾಲೆಗಳ ಜಾಗ ಆರ್ಎಸ್ಎಸ್ಗಾಗಿ ಬಳಕೆ ಆಗಬಾರದು. ನಮ್ಮದು ಬಸವ ತತ್ವದ ಮೇಲೆ ನಡೆಯುವ ಸರ್ಕಾರ ಎಂದಿದ್ದಾರೆ.
ಪ್ರಿಯಾಂಕ್ ಪತ್ರದಲ್ಲೇನಿದೆ..?
* ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುದಕ್ಕಾಗಿ,
* ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ,
* ಸಮಗ್ರತೆ, ಸಮಾನತೆ & ಏಕತೆಯ ಮೂಲಭೂತ ತತ್ವಗಳನ್ನೊಳಗೊಂಡ ಸಂವಿಧಾನವು ನಮಗೆ ಸರ್ಕಾರ ನೀಡುತ್ತದೆ.
* ಆರ್ಎಸ್ಎಸ್ ಸರ್ಕಾರಿ, ಅನುದಾನಿತ ಶಾಲೆಗಳು, ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಳ್ಳುತ್ತಿದೆ.
* ಘೋಷಣೆಗಳನ್ನು ಕೂಗುತ್ತಾ ಮಕ್ಕಳು, ಯುವ ಸಮುದಾಯದ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆ ತುಂಬುತ್ತಿದೆ.
* ಭಾರತದ ಐಕ್ಯತೆಯ ವಿರುದ್ಧವಾಗಿ, ಸಂವಿಧಾನದ ಆಶಯಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.
* ಪೊಲೀಸ್ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸುತ್ತಿದೆ.
* ಈ ಮೂಲಕ ಮುಗ್ದ ಮಕ್ಕಳು, ಯುವಜನರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ.
* ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆ, ಅನುದಾನಿತ ಶಾಲೆಗಳು, ಮೈದಾನಗಳು
* ಉದ್ಯಾನವನಗಳು, ಮುಜರಾಯಿ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು, ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: RSS ನಿಷೇಧಕ್ಕೆ ಪ್ರಿಯಾಂಕ್ ಖರ್ಗೆ ಪತ್ರ – ಸರ್ಕಾರದ ನಡೆಯ ಮೇಲೆ ನಿಗಾ ಇಡಲು ಬಿಜೆಪಿ ಸಮಿತಿ ರಚನೆ