ಸ್ಯಾಂಟ್ರೋ ರವಿಗಾಗಿ 4 ಜಿಲ್ಲೆಯಲ್ಲಿ ಪೊಲೀಸರಿಂದ ಶೋಧ- ಮೈಸೂರಲ್ಲೇ ಎಡಿಜಿಪಿ ಠಿಕಾಣಿ

Public TV
2 Min Read

ಮೈಸೂರು: ರಾಜ್ಯ ರಾಜಕಾರಣದಲ್ಲಿ ಚರ್ಚೆಯಲ್ಲಿದ್ದ ಸ್ಯಾಂಟ್ರೋ ರವಿ (Santro Ravi) ಪ್ರಕರಣ ಇದೀಗ ರಾಷ್ಟ್ರ ಮಟ್ಟಕ್ಕೆ ತಲುಪಿದೆ. ಈ ಬೆನ್ನಲ್ಲೇ ಆರೋಪಿಯ ಪತ್ತೆ ಕಾರ್ಯಾಚರಣೆ ಚುರುಕಾಗಿದ್ದು, ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಮೈಸೂರಿಗೆ ಬಂದು ಕೂತಿದ್ದಾರೆ.

ಹೌದು. ವೇಶ್ಯಾವಾಟಿಕೆ ಕಿಂಗ್ ಪಿನ್ ಸ್ಯಾಂಟ್ರೋ ರವಿ ವಿರುದ್ಧ ಎಫ್‍ಐಆರ್ ದಾಖಲಾಗಿ 9 ದಿನ ಕಳೆದಿದೆ. ಸಿಎಂ, ಗೃಹ ಸಚಿವರಾದಿಯಾಗಿ ಬಿಜೆಪಿಯ ಪ್ರಮುಖರೊಂದಿಗೆ ಗುರುತಿಸಿಕೊಂಡಿದ್ದ ಆತನ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿತ್ತು. ಇಡೀ ಸರ್ಕಾರವೇ ತಲೆತಗ್ಗಿಸುವಂತೆ ಮಾಡಿರುವ ಈ ಪ್ರಕರಣ ಕೇಂದ್ರ ಸರ್ಕಾರದ ಅಂಗಳಕ್ಕೂ ತಲುಪಿದೆ. ಒಡನಾಡಿ ಸೇವಾ ಸಂಸ್ಥೆ (Odanadi Seva Samsthe) ಯ ನಿರ್ದೇಶಕರು ಐಟಿ, ಇಡಿ ದೂರು ನೀಡಿದ್ದಾರೆ. ಪ್ರಕರಣ ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದ ಬೆನ್ನಲ್ಲೆ ರಾಜ್ಯ ರಾಜಕಾರಣದ ಹಲವರಿಗೆ ನಡುಕ ಶುರುವಾಗಿದೆ. ಮತ್ತೊಂದೆಡೆ ಪ್ರಕರಣದ ತನಿಖೆಯೂ ಚುರುಕುಗೊಂಡಿದ್ದು, ಸ್ಯಾಂಟ್ರೋ ರವಿ ಜಾಡು ಹಿಡಿದು 11 ತಂಡಗಳಲ್ಲಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮೈಸೂರಿಗೆ ಭೇಟಿ ನೀಡಿದ್ದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿ ಪ್ರಕರಣದ ಈವರೆಗಿನ ಮಾಹಿತಿ ಪಡೆದುಕೊಂಡ್ರು. ಅಲ್ಲದೇ ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕರು ಹಾಗೂ ಸಂತ್ರಸ್ಥ ಮಹಿಳೆಯರ ಜೊತೆ ಖುದ್ದಾಗಿ ಮಾಹಿತಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ವಿರುದ್ಧ 6 ತಿಂಗಳ ಹಿಂದೆಯೇ ಡಿಜಿ -ಐಜಿಪಿಗೆ ದೂರು ನೀಡಲು ಮುಂದಾಗಿದ್ದ ಒಡನಾಡಿ ಸಂಸ್ಥೆ

ಸ್ಯಾಂಟ್ರೋ ರವಿ ಬಂಧನಕ್ಕಾಗಿ ಲುಕ್ ಔಟ್ ನೋಟೀಸ್ (Look Out Notice) ಜಾರಿ ಮಾಡಲಾಗಿದೆ. ಏರ್ ಪೋರ್ಟ್‍ಗಳಿಗೂ ಸ್ಯಾಂಟ್ರೋ ರವಿ ಬಗ್ಗೆ ಮಾಹಿತಿ ನೀಡಲಾಗಿದೆ. ಎಸ್ಕೇಪ್ ಆಗದಂತೆ ಮುಂಜಾಗ್ರತಾ ವಹಿಸಲಾಗಿದೆ. ಆತನ ಆಕೌಂಟ್‍ಗಳನ್ನ ಸೀಜ್ ಮಾಡಲಾಗಿದೆ. ಬೆಂಗಳೂರಿನ ಆರ್ ಆರ್ ನಗರ ಸ್ಯಾಂಟ್ರೋ ಪತ್ನಿ ಮನೆಯಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಸ್ಯಾಂಟ್ರೋ ರವಿ ಪತ್ತೆ ನಾಲ್ಕು ತಂಡಗಳು ಈಗಾಗಲೇ ಮೈಸೂರು, ಮಂಡ್ಯ, ರಾಮನಗರ ಹಾಗೂ ಬೆಂಗಳೂರಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಸ್ಯಾಂಟ್ರೋ ರವಿ ಬಂಧನವಾಗಲಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

ವಿಚಾರಣೆಗೆ ಒಳಪಟ್ಟ ಸಂತ್ರಸ್ತೆ ಎಡಿಜಿಪಿ ಅಲೋಕ್ ಕುಮಾರ್ ಮುಂದೆ ತನಗಾದ ದೌರ್ಜನ್ಯದ ಕಥೆಗಳನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಸ್ಯಾಂಟ್ರೋ ರವಿ ವಕೀಲನಿಗೆ ಸಿಗುತ್ತಾನೆ. ಪೊಲೀಸರಿಗೆ ಸಿಗ್ತಿಲ್ಲಾ ಅಂದ್ರೆ ಏನ್ ಅರ್ಥ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಐಷಾರಾಮಿ ಕಾರುಗಳ ಹೆಸರಲ್ಲಿ ಸ್ಯಾಂಟ್ರೋ ರವಿಯಿಂದ ನಡೀತಿತ್ತು ಸುಂದರಿಯರ ಸೆಲೆಕ್ಷನ್..!

ಸ್ಯಾಂಟ್ರೋ ರವಿ ಎಲ್ಲೂ ಹೋಗಲ್ಲ ಎರಡು ದಿನ ಕಾಯಿರಿ. ಯಾವುದೇ ಮೂಲೆಯಲ್ಲಿದ್ದರೂ ಎಳೆದು ತರ್ತಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಒಟ್ಟಿನಲ್ಲಿ ಸ್ಯಾಂಟ್ರೋ ರವಿ ಪ್ರಕರಣ ದಿನದಿನ ಹೋದಂತೆ ಗಂಭೀರತೆ ಪಡೆದುಕೊಳ್ಳುತ್ತಿದೆ. ಆರೋಪಿ ಬಂಧನಕ್ಕೆ ಎಲ್ಲೆಡೆಯಿಂದ ಒತ್ತಾಯ ಕೇಳಿ ಬರುತ್ತಿದ್ದು, ಸರ್ಕಾರದ ಮೇಲೂ ಒತ್ತಡ ಹೆಚ್ಚಾಗುತ್ತಿರೋದಂತೂ ಸತ್ಯ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *