ಬೆಂಗ್ಳೂರಲ್ಲಿ ಮತ್ತೆ ಪೊಲೀಸರ ಗುಂಡಿನ ಮೊರೆತ – ಆತ್ಮರಕ್ಷಣೆಗಾಗಿ ರೌಡಿ ಶೀಟರ್ ಮೇಲೆ ದಾಳಿ

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದೆ. ರೌಡಿಶೀಟರ್ ನಾಗೇಂದ್ರ ಅಲಿಯಾಸ್ ನಾಮನ ಮೇಲೆ ಮಂಗಳವಾರ ರಾತ್ರಿ 9.15ರ ಸುಮಾರಿಗೆ ಪೊಲೀಸರಿಂದ ಫೈರಿಂಗ್ ನಡೆದಿದೆ. ಕೇವಲ ಹದಿನೈದು ದಿನಗಳಲ್ಲೇ ನಾಲ್ಕನೇಯ ಪೊಲೀಸ್ ಫೈರಿಂಗ್ ಇದಾಗಿದೆ.

ನಾಗೇಂದ್ರ ಅಲಿಯಾಸ್ ನಾಮ ಚಾಮರಾಜಪೇಟೆಯ ರೌಡಿಶೀಟರ್. ಸುಮಾರು ಹದಿನಾಲ್ಕಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಈ ಭಾಗಿಯಾಗಿದ್ದ. ಎರಡು ಬಾರಿ ವಾರಂಟ್ ಜಾರಿಯಾಗಿದ್ರೂ ಪೊಲೀಸರ ಕಣ್ಣು ತಪ್ಪಿಸಿ ಓಡಾಡ್ತಾ ಇದ್ದ ನಾಗೇಂದ್ರ ಈಗ ಪೊಲೀಸ್ ತುಪಾಕಿಯಿಂದ ಸಿಡಿದ ಗುಂಡಿಗೆ ಆರ್.ಆರ್.ನಗರದ ಆಸ್ಪತ್ರೆ ಸೇರಿದ್ದಾನೆ. ಆತ್ಮರಕ್ಷಣೆಗಾಗಿ ಬ್ಯಾಟರಾಯನಪುರ ಇನ್ಸ್ ಪೆಕ್ಟರ್ ಶಿವಸ್ವಾಮಿ ಸಿಡಿಸಿದ ಗುಂಡು ನಾಗೇಂದ್ರನ ಕಾಲಿಗೆ ತಗುಲಿದೆ.

ರಾತ್ರಿ ಆಗಿದ್ದೇನು?: ನಾಗೇಂದ್ರನ ಇರುವಿಕೆಯ ನಿಖರ ಮಾಹಿತಿ ಮೇರೆಗೆ ಕೆಂಗೇರಿ ಪಕ್ಕದ ಸೊನ್ನೇನಹಳ್ಳಿ ಲಿಂಕ್ ರಸ್ತೆಯ ನಿರ್ಜನ ಪ್ರದೇಶವೊಂದಕ್ಕೆ ಕ್ರೈಂ ಪೇದೆ ನವೀನ್ ಜೊತೆ ದೌಡಾಯಿಸಿದ್ದ ಬ್ಯಾಟರಾಯನಪುರ ಇನ್ಸ್ ಪೆಕ್ಟರ್ ಶಿವಸ್ವಾಮಿ ನಾಗೇಂದ್ರನನ್ನು ಅಟ್ಟಾಡಿಸಿದ್ರು. ಈ ವೇಳೆ ಮಚ್ಚಿನ ಸಹಿತ ನಿರ್ಜನ ಪ್ರದೇಶದಲ್ಲಿದ್ದ ನಾಗೇಂದ್ರ ಇನ್ಸ್ ಪೆಕ್ಟರ್ ಶಿವಸ್ವಾಮಿಯ ಮೇಲೆ ಹಲ್ಲೆಗೆ ಮುಂದಾಗಿದ್ದ. ಗಲಭೆ ವೇಳೆ ಶಿವಸ್ವಾಮಿ ಆತ್ಮರಕ್ಷಣೆಗಾಗಿ ನಾಗೇಂದ್ರನ ಮೇಲೆ ಫೈರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕೊಲೆ, ಸುಲಿಗೆ, ದರೋಡೆ ಸೇರಿದಂತೆ ಸುಮಾರು 14ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಗೇಂದ್ರನ ಮೇಲೆ ಚಾಮರಾಜಪೇಟೆಯಲ್ಲಿ ರೌಡಿಶೀಟ್ ತೆರೆಯಲಾಗಿತ್ತು.

ಸದ್ಯ ಗಾಯಗೊಂಡಿರುವ ಇನ್ಸ್ ಪೆಕ್ಟರ್ ಶಿವಸ್ವಾಮಿ, ಪೇದೆ ನವೀನ್, ಹಾಗೂ ರೌಡಿಶೀಟರ್ ನಾಗೇಂದ್ರ ಮೂವರೂ ಆರ್.ಆರ್.ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಕಳೆದ ಒಂದು ತಿಂಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ನಾಲ್ಕನೆಯ ಫೈರಿಂಗ್ ಇದಾಗಿದೆ. ಸೋಲದೇವನಹಳ್ಳಿಯಲ್ಲಿ ಕೊಮ್ಮಘಟ್ಟ ಮಂಜ, ರಾಜಗೋಪಾಲ ನಗರದಲ್ಲಿ ಪವನ್, ಹೆಚ್.ಎಲ್.ನಲ್ಲಿ ಶಿವರಾಮರೆಡ್ಡಿ ಮತ್ತು ಈಗ ನಾಗೇಂದ್ರನ ಮೇಲೆ ಫೈರಿಂಗ್ ನಡೆದಿದೆ.

 

Share This Article
Leave a Comment

Leave a Reply

Your email address will not be published. Required fields are marked *