ಪ್ರೇಯಸಿಯ ಮುಂದೆಯೇ ಪ್ರಿಯಕರನ ಕೈ ಕಟ್ ಪ್ರಕರಣಕ್ಕೆ ಟ್ವಿಸ್ಟ್

Public TV
2 Min Read

– ಪ್ರಿಯತಮೆಯಿಂದಲೇ ಸುಫಾರಿ

ಬೆಂಗಳೂರು: ಬನ್ನೇರುಘಟಕ್ಕೆ ಬಂದಿದ್ದ ಪ್ರೇಮಿಗಳ ಮೇಲೆ ದಾಳಿ ಮಾಡಿ ಪ್ರಿಯಕರನ ಕೈ ಕಟ್ ಮಾಡಿಕೊಂಡು ಹೋಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆತನ ಜೊತೆಗೆ ಬಂದಿದ್ದ ಪ್ರೇಯಸಿಯೇ ಸುಫಾರಿ ಕೊಟ್ಟಿದ್ದಾಳೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಈಗ ಕೈ ಕಟ್ ಮಾಡಿದ್ದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

ಶರವಣ ಕುಮಾರ್  ಅಲಿಯಾಸ್ @ಮೆಂಟಲ್ ವಿಜಿ ಗುಂಟೇಟು ತಿಂದ ಆರೋಪಿ. ಚಿತ್ರದುರ್ಗ ಮೂಲದ ರವೀಶ್ (23) ಕೈ ಕಳೆದುಕೊಂಡಿದ್ದ ಪ್ರೇಮಿ. ಶರವಣ ಗುರುವಾರ ಬನ್ನೇರುಘಟ್ಟದಲ್ಲಿ ನಡೆದಿದ್ದ ಕೈ ಕಟ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತ ಬನ್ನೇರುಘಟ್ಟ ಅಭಯಾರಣ್ಯದ ಕಗ್ಗಲಿಪುರ ವಲಯದಲ್ಲಿ ಅಡಗಿದ್ದನು. ಆರೋಪಿಯನ್ನು ಶನಿವಾರ ಸಂಜೆ ಬಂಧಿಸಲಾಗಿತ್ತು. ಆದರೆ ಪೊಲೀಸರು ಸ್ಥಳ ಮಹಜರ್ ಗೆಂದು ಕರೆದುಕೊಂಡು ಹೋಗುವಾಗ ತಪ್ಪಿಸಿಕೊಳ್ಳಲು ಪೇದೆ ಸಿದ್ದಲಿಂಗಯ್ಯ ಮೇಲೆ ಹಲ್ಲೆ ನಡೆಸಿ ಕುತ್ತಿಗೆಗೆ ಚೈನಿನಿಂದ ಬಿಗಿದು ಕೊಲೆ ಮಾಡಲು ಯತ್ನಿಸಿದ್ದನು.

ಈ ಸಮಯದಲ್ಲಿ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿದರೂ ಲೆಕ್ಕಿಸದೇ ಪೇದೆ ಮೇಲೆ ಹಲ್ಲೆ ಮುಂದುವರಿಸಿದ್ದನು. ಬಳಿಕ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದರು. ಆದರು ಭಯ ಬೀಳದ ವಿಜಿ ಮತ್ತಷ್ಟು ಹಲ್ಲೆ ನಡೆಸುತ್ತಿದ್ದನು. ಕೊನೆಗೆ ದಾರಿ ಕಾಣದೆ ಡಿವೈಎಸ್‍ಪಿ ಮತ್ತು ಎಸ್.ಕೆ.ಉಮೇಶ್ ಪೊಲೀಸರು ವಿಜಿಯ ಎಡಗಾಲಿಗೆ ಗುಂಡು ಹೊಡೆದು ಪೇದೆಯನ್ನು ರಕ್ಷಿಸಿದ್ದಾರೆ.

ವಿ.ವಿ.ಪುರಂ ಠಾಣೆಯ ಪೇದೆ ಜಯಲಕ್ಷ್ಮಿಯೇ ಒಂದು ಲಕ್ಷ ರೂಪಾಯಿಗೆ ಸುಪಾರಿ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೇದೆ ಜಯಲಕ್ಷ್ಮಿ ಮದುವೆಯಾಗಿದ್ದು, ರವೀಶ್ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳು. ಆದರೆ ರವೀಶ್ ಜಯಲಕ್ಷ್ಮಿಯ ಜೊತೆಗಿನ ಅನೈತಿಕ ಸಂಬಂಧದ ವಿಡಿಯೋಗಳನ್ನು ಇಟ್ಟುಕೊಂಡು ಪತಿ ರಾಘವೇಂದ್ರನಿಗೆ ವಿಚ್ಛೇದನ ನೀಡುವಂತೆ ಒತ್ತಡ ಹಾಕುವ ಮೂಲಕ ಹಿಂಸೆ ನೀಡುತ್ತಿದ್ದನಂತೆ. ಇವನ ವಿಕೃತವನ್ನು ಸಹಿಸದೇ ಕೊನೆಗೆ ಜಯಲಕ್ಷ್ಮಿಯೇ ವಿಜಿಗೆ ಒಂದು ಲಕ್ಷ ರೂ.ಗೆ ಸುಪಾರಿಕೊಟ್ಟು ಕೈ ಕತ್ತರಿಸಲು ತಿಳಿಸಿದ್ದಳು ಎಂದು ತನಿಖೆಯಲ್ಲಿ ಒಪ್ಪಿಕೊಂಡಿದ್ದಾಳೆ.

ಈ ಕುರಿತು ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ತನಿಖೆ ನಡೆಸಿ ಈ ಪ್ರಕರಣವನ್ನು ಬೇಧಿಸಿದ್ದಾರೆ. ಈಗ ಪೇದೆ ಮತ್ತು ಸುಫಾರಿ ಪಡೆದ ವಿಜಿ ಅಲಿಯಾಸ್ ಮೆಂಟಲ್ ಕೂಡ ಜೈಲು ಪಾಲಾಗುತ್ತಿದ್ದಾನೆ.

ಅಂದು ನಡೆದಿದ್ದೇನು?
ಸೆಪ್ಟೆಂಬರ್ 11 ಮಂಗಳವಾರ ರವೀಶ್ ಮತ್ತು ಪ್ರೇಯಸಿ ಇಬ್ಬರು ಸೇರಿ ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ದೇವಾಲಯದ ಹಿಂಭಾಗದಿಂದ ಸುವರ್ಣಮುಖಿ ಆಂಜನೇಯ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಲ್ಲಿಗೆ ಅರಣ್ಯ ಪ್ರದೇಶದ 3 ಕಿ.ಮೀ. ಕಾಲು ದಾರಿಯ ಮೂಲಕವೇ ಹೋಗಬೇಕು. ಈ ವೇಳೆ ದಾರಿ ಮಧ್ಯದಲ್ಲಿಯೇ ಕೆಲ ದುಷ್ಕರ್ಮಿಗಳು ಲಾಂಗು ಹಾಗೂ ಮಚ್ಚು ಬಳಸಿ, ಯುವಕನ ಬಲಭಾಗದ ಮುಂಗೈ ಕತ್ತರಿಸಿದ್ದಾರೆ. ಇಷ್ಟಕ್ಕೂ ಸುಮ್ಮನಾಗದೇ ವಿಕೃತಿ ಮೆರೆದ ದುಷ್ಕರ್ಮಿಗಳು ಕತ್ತರಿಸಿ ಕೈಯನ್ನು ಕೊಂಡೊಯ್ದಿದ್ದರು.

ಕೈ ಕಳೆದುಕೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಪ್ರಿಯಕರನನ್ನು ಕಾಪಾಡಿ ಎಂದು ಯುವತಿ ಸ್ಥಳೀಯರಲ್ಲಿ ಕೇಳಿಕೊಂಡಿದ್ದಳು. ಬಳಿಕ ಸ್ಥಳೀಯರ ಸಹಾಯದಿಂದ ರವೀಶ್ ನನ್ನು ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅತಿಯಾದ ರಕ್ತಸ್ರಾವದಿಂದ ಬಳಲುತ್ತಿದ್ದ ರವೀಶ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಸದ್ಯ ರವೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *