ಮಫ್ತಿಯಲ್ಲಿರುವ ಪೊಲೀಸರಿಗೆ ಉಚಿತ ಪ್ರಯಾಣ – ಬಿಎಂಟಿಸಿಗೆ ಸಿಎಂ ಸೂಚನೆ

Public TV
1 Min Read

ಬೆಂಗಳೂರು: ಮಫ್ತಿಯಲ್ಲಿ ಕೆಲಸ ಮಾಡುವ ಪೊಲೀಸರಿಗೆ ಬಿಎಂಟಿಸಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ.

ವಿವಿಧ ಕೆಲಸಗಳಿಗಾಗಿ ಮಫ್ತಿಯಲ್ಲಿ ಓಡಾಡುವ ಪೊಲೀಸರು ಬಿಎಂಟಿಸಿ ಬಸ್ಸಿನಲ್ಲಿ ಓಡಾಡುವ ವೇಳೆ ಟಿಕೆಟ್ ತೆಗೆದುಕೊಳ್ಳುವಂತೆ ಕಂಡಕ್ಟರ್ ತಾಕೀತು ಮಾಡುತ್ತಾರೆ. ನಾವು ಮಫ್ತಿಯಲ್ಲಿ ಕೆಲಸ ಮಾಡುತ್ತಿದ್ದೀವಿ ಎಂದು ಐಡಿ ಕಾರ್ಡ್ ತೋರಿಸಿದರೂ ಕಂಡಕ್ಟರ್‌ಗಳು ಕೇಳುವುದಿಲ್ಲ. ಡ್ರೆಸ್‍ನಲ್ಲಿ ಇದ್ದವರಿಗೆ ಮಾತ್ರ ಉಚಿತ ಪ್ರಯಾಣ, ಉಳಿದವರು ಟೆಕೆಟ್ ತೆಗೆದುಕೊಳ್ಳಲೇಬೇಕು ಎಂದು ಗಲಾಟೆ ಮಾಡುತ್ತಾರೆ ಅಂತ ಪೊಲೀಸರು ಮೇಲಾಧಿಕಾರಿಗಳ ಮನವಿ ಮಾಡಿಕೊಂಡಿದ್ದರು.

ಗೃಹ ಇಲಾಖೆಗೆ ಬಿಎಂಟಿಸಿ ಪ್ರತಿವರ್ಷ ಹತ್ತರಷ್ಟು ಹೆಚ್ಚುವರಿಯಾಗಿ ಹಣ ನೀಡುತ್ತೆ. ಹಾಗಾಗಿ ಗುಪ್ತಚರ, ಸಚಿವರ ಅಂಗರಕ್ಷಕರು ಸೇರಿದಂತೆ ವಿವಿಧ ಕೆಲಸಗಳಿಗೆ ಬಸ್ಸಿನಲ್ಲಿ ಓಡಾಡುವ ಪೊಲೀಸರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕು ಅಂತ ಹಿರಿಯ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು.

ರಾಜ್ಯದ ಬೇರೆ ಬೇರೆ ನಗರಗಳಿಂದ ಕೆಲಸದ ನಿಮಿತ್ತ ಬೆಂಗಳೂರಿಗೆ ಬರುವವರಿಗೂ ಕೂಡ ಬಿಎಂಟಿಸಿ ಬಸ್ಸಿನಲ್ಲಿ ಟಿಕೆಟ್ ಖರೀದಿ ಮಾಡಬೇಕಿತ್ತು. ಆಗಲೂ ಪೊಲೀಸ್ ಸಿಬ್ಬಂದಿ ನಾವು ಅಂತ ಐಡಿ ಕಾರ್ಡ್ ತೋರಿಸಿದರೂ, ಸಮವಸ್ತ್ರದಲ್ಲಿರುವವರಿಗೆ ಮಾತ್ರ ಉಚಿತ ಸೇವೆ ಎಂದು ನಮಗೆ ಆದೇಶವಾಗಿದೆ ಅಂತ ಕಂಡಕ್ಟರ್‌ಗಳು ಹೇಳುತ್ತಿದ್ದರು.

ಈ ಎಲ್ಲಾ ಸಮಸ್ಯೆಗಳಿಗೆ ಅಂತ್ಯವಾಡುವ ದೃಷ್ಟಿಯಿಂದ ಸಿಎಂ ಯಡಿಯೂರಪ್ಪ ಬಿಎಂಟಿಸಿಗೆ ಪತ್ರ ಬರೆದಿದ್ದು, ಐಡಿ ಕಾರ್ಡ್ ಹೊಂದಿರುವ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಬಿಎಂಟಿಸಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕೊಡುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶದಿಂದ ಸ್ವಂತ ಖರ್ಚಿನಲ್ಲಿ ಓಡಾಡುತ್ತಿದ್ದ ನೂರಾರು ಪೊಲೀಸರು ನಿಟ್ಟುಸಿರುಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *