ಮಂಡ್ಯ: ಚಿನ್ನದಂಗಡಿಯಲ್ಲಿ ಕಳ್ಳತನ ಮಾಡುವುದನ್ನು ನೋಡಿದ ಹೋಟೆಲ್ ಮಾಲೀಕನ ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯ ಕಾಲಿಗೆ ಪೊಲೀಸರು ಫೈರಿಂಗ್ (Police Firing) ಮಾಡಿದ್ದಾರೆ.
ಈಚಗರೆ ಗ್ರಾಮದ ಕಿರಣ್ (24), ಕೊತ್ತತ್ತಿ ಗ್ರಾಮದ ಆನಂದ್, ಶರತ್, ಶ್ರೀನಿವಾಸ್, ಕೃಷ್ಣಾಚಾರಿ ಬಂಧಿತ ಆರೋಪಿಗಳು. ಪ್ರಕರಣದ ಪ್ರಮುಖ ಆರೋಪಿ ಕಿರಣ್ನನ್ನು ಮಂಡ್ಯದ ಮಳವಳ್ಳಿ ತಾಲೂಕಿನ ಭೀಮನಹಳ್ಳಿ (Bhimanahalli) ಬಳಿ ಬಂಧಿಸುವ ವೇಳೆ ಪೊಲೀಸ್ ಪೇದೆಯ ಮೇಲೆ ಆತ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ಪ್ರಾಣ ರಕ್ಷಣೆಗಾಗಿ ಹಲಗೂರು ಠಾಣೆ ಸಿಪಿಐ ಶ್ರೀಧರ್ ಅವರು ಆರೋಪಿ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಸಮೀರ್ಗೆ ತಪ್ಪದ ಸಂಕಷ್ಟ – ಕಡೂರು ಠಾಣೆಯಲ್ಲಿ ಮತ್ತೊಂದು ದೂರು!
ಏನಿದು ಪ್ರಕರಣ?
ಆ.17ರಂದು ಕಿರುಗಾವಲು ಗ್ರಾಮದ ಮಹಾಲಕ್ಷ್ಮಿ ಜ್ಯುವೆಲರಿ ಶಾಪ್ಗೆ ಖದೀಮರು ಕನ್ನ ಹಾಕಿದ್ದರು. ಬೆಳಗಿನ ಜಾವ 3ಗಂಟೆ ಸಮಯದಲ್ಲಿ ಗ್ಯಾಸ್ ಕಟರ್ನಿಂದ ಶಾಪ್ ಶೆಟರ್ ಮುರಿದು ಕಳ್ಳತನ ಮಾಡಿದ್ದರು. 110ಗ್ರಾಂ ಚಿನ್ನ, 2 ಕೆಜಿಯಷ್ಟು ಬೆಳ್ಳಿಯನ್ನು ಐವರು ಖದೀಮರ ತಂಡ ದೋಚಿತ್ತು. ಕಳ್ಳತನ ಮಾಡುವುದನ್ನ ನೋಡಿದ ಪಕ್ಕದ ಹೋಟೆಲ್ನ ಮಾಲೀಕ ಮಾದಪ್ಪ ಅವರನ್ನು ಖದೀಮರು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಆರೋಪಿ ಆನಂದ್ ಕೇರಳದಲ್ಲೂ ವಾಹನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.