ಬೆಂಗಳೂರು: ಮುಖ್ಯಮಂತ್ರಿಗಳಿಗೆ ಪೊಲೀಸ್ ಅಧಿಕಾರಿಗಳಿಗೆ ಘೋಷಣೆ ಆದ ಪದಕ ವಿತರಣೆಗೂ ಸಮಯ ಇಲ್ಲವಂತೆ. ಪೊಲೀಸ್ ಇಲಾಖೆ ಸಿಬ್ಬಂದಿಗೆ `ಮುಖ್ಯಮಂತ್ರಿಗಳ ಬಂಗಾರದ ಪದಕ’ ಘೋಷಣೆ ಮಾಡಿ ವರ್ಷ ಕಳೆದರೂ ಇನ್ನೂ ಅದನ್ನು ಪಡೆಯುವ ಭಾಗ್ಯ ಬಂದಿಲ್ಲ.
ಹೌದು. 2017-18ನೇ ಸಾಲಿನಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳಿಗೆ `ಮುಖ್ಯಮಂತ್ರಿಗಳ ಬಂಗಾರದ ಪದಕ’ ಘೋಷಿಸಲಾಗಿತ್ತು. ಸಮಾರಂಭಕ್ಕೆ ಎರಡ್ಮೂರು ಬಾರಿ ಗೃಹ ಇಲಾಖೆ ಸಿಎಂ ಬಳಿ ಟೈಮ್ ಕೇಳಿತ್ತು. ಆದರೆ ಸಿಎಂ ಬ್ಯುಸಿ ಇದ್ದ ಕಾರಣಕ್ಕೆ ಈ ಕಾರ್ಯಕ್ರಮ ಹಾಗೆಯೇ ಬಾಕಿ ಉಳಿದಿದೆ. ಪ್ರತಿ ವರ್ಷವು ಚಾಚು ತಪ್ಪದೆ ನಡೆಯುತ್ತಿದ್ದ ಕಾರ್ಯಕ್ರಮವೀಗ ಮುಖ್ಯಮಂತ್ರಿಗಳ ಸಮಯಕ್ಕಾಗಿ ಕಾಯುವ ಪರಿಸ್ಥಿತಿ ಬಂದಿದೆ. ಇನ್ನೊಂದು ಕಡೆ ಪದಕ ಆಸೆಯಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೂ ಸಹ ನಿರಾಸೆಯಾಗಿದೆ.
ಪೊಲೀಸ್ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸುವವರಿಗೆ `ಮುಖ್ಯಮಂತ್ರಿಗಳ ಬಂಗಾರದ ಪದಕ’ ನೀಡಿ ಗೌವರ ಸಲ್ಲಿಸಲಾಗುತ್ತದೆ. 2017-18 ನೇ ಸಾಲಿನಲ್ಲಿ ಒಟ್ಟು 122 ಪೊಲೀಸರಿಗೆ ಮುಖ್ಯಮಂತ್ರಿಗಳ ಬಂಗಾರದ ಪದಕ ಘೋಷಣೆಯಾಗಿದ್ದು, ಅದರಲ್ಲಿ 10 ಡಿಸಿಪಿ, 11 ಎಸಿಪಿ, 28 ಇನ್ಸ್ಪೆಕ್ಟರ್, 14 ಪಿಎಸ್ಐ, 15 ಎಎಸ್ಐ ಮತ್ತು 42 ಕಾನ್ಸ್ಟೇಬಲ್ಗಳಿದ್ದಾರೆ.
ಪದಕ ಘೋಷಣೆಯಾಗಿ ವರ್ಷವಾದರು ಇನ್ನೂ ಸಿಬ್ಬಂದಿಗೆ ಅದು ಸಿಕ್ಕಿಲ್ಲ. ಇದರಿಂದ ಸರ್ಕಾರದ ಕಾರ್ಯವೈಖರಿಗೆ ಪೊಲೀಸ್ ಇಲಾಖೆ ಅಸಮಾದಾನ ವ್ಯಕ್ತಪಡಿಸುತ್ತಿದೆ. ಮುಖ್ಯಮಂತ್ರಿಗಳು ಕಾನೂನು ಸುವವ್ಯಸ್ಥೆ ಕಾಪಾಡುವವರಿಗೆ ಸಮಯ ನೀಡಿ, ಘೋಷಣೆಯಾಗಿರೋ ಪದಕ ನೀಡಿ ಅವರ ಕೆಲಸಕ್ಕೆ ಉತ್ತೇಜನ ನೀಡಬೇಕಿದೆ.