2ನೇ ಪತ್ನಿಯನ್ನ ಬಿಟ್ಟು ಪೇದೆಯಿಂದ ಚೀಟಿ ಹೆಸ್ರಲ್ಲಿ ಕೋಟ್ಯಂತರ ರೂ. ವಂಚನೆ

Public TV
1 Min Read

-ಕಂಡೋರ ಹಣದಿಂದ ಬೆಂಗ್ಳೂರಲ್ಲಿ ಬಂಗ್ಲೆ, ಶಿರಾದಲ್ಲಿ ಜಮೀನು ಖರೀದಿ

ತುಮಕೂರು: ಪೊಲೀಸ್ ಪೇದೆಯೊಬ್ಬ ತನ್ನ ಎರಡನೇ ಪತ್ನಿ ಹೆಸರಲ್ಲಿ ಚೀಟಿ ವ್ಯವಹಾರ ನಡೆಸಿ ಕೋಟ್ಯಂತರ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲೆಯ ಕುಣಿಗಲ್ ಠಾಣೆಯ ಪೇದೆ ಚಂದ್ರಶೇಖರ್ ಮೇಲೆ ಈ ಆರೋಪ ಕೇಳಿ ಬಂದಿದೆ. ಚಂದ್ರಶೇಖರ್ ತನ್ನ ಎರಡನೇ ಪತ್ನಿಯನ್ನು ಬಿಟ್ಟು ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿ ಚೀಟಿ ನಡೆಸಿದ್ದಾನೆ. ಬೆಂಗಳೂರಿನ ನೂರಾರು ಜನರಿಂದ ಕೋಟ್ಯಂತರ ರೂ. ಸಂಗ್ರಹಿಸಿದ್ದಾನೆ. ಚೀಟಿ ನಡೆಯುವ ದಿನ ಸ್ವತಃ ಚಂದ್ರಶೇಖರನೇ ಬಂದು ಮಧ್ಯಸ್ಥಿಕೆ ವಹಿಸುತ್ತಿದ್ದನಂತೆ. ಆದರೆ ಈಗ ಚೀಟಿ ಅವಧಿ ಮುಗಿಯುತ್ತಿದ್ದಂತೆ ಪತ್ನಿ ಕಣ್ಮರೆಯಾಗಿದ್ದಾಳೆ. ಸುಮಾರು 6 ಕೋಟಿ ರೂ. ಹೆಚ್ಚು ಹಣ ತೆಗೆದುಕೊಂಡು ನಾಪತ್ತೆಯಾಗಿದ್ದಾಳೆ ಎಂದು ಹಣ ಕಳೆದುಕೊಂಡವರು ಆರೋಪಿಸಿದ್ದಾರೆ.

ಚೀಟಿ ಹಣದಿಂದ ಪೇದೆ ಚಂದ್ರಶೇಖರ್ ಬೆಂಗಳೂರಲ್ಲಿ ಭವ್ಯಬಂಗಲೆ ಕಟ್ಟಿ, ಶಿರಾದಲ್ಲಿ ಜಮೀನು ಖರೀದಿಸಿದ್ದಾನೆ. ಈಗ ಚೀಟಿ ಹಣ ಕೊಡಿ ಅಂದರೆ ನಾನ್ಯಾಕೆ ಕೊಡಲಿ. ಆಕೆ ನನ್ನ ಹೆಂಡತಿ ಅಲ್ಲ ಅಂತಾ ಉಲ್ಟಾ ಹೊಡೆದಿದ್ದಾನೆ. ಯಾರೂ ದೂರು ಕೊಟ್ಟರು, ಹೆಚ್ಚಂದರೆ ನನ್ನ ಕೆಲಸ ಹೋಗಬಹುದು ಅಷ್ಟೆ ಅಥವಾ ಒಂದೆರಡು ತಿಂಗಳು ಜೈಲಾಗಬಹುದು. ನಾನಂತು ಈಗ ಸೆಟಲ್ ಆಗಿದ್ದೀನಿ ಅಂತಾ ಚಂದ್ರಶೇಖರ್ ಹೇಳುತ್ತಿದ್ದಾನೆ ಎಂದು ಹಣ ಕಳೆದುಕೊಂಡ ಕುಮಾರ್ ತಿಳಿಸಿದ್ದಾರೆ.

ಪೇದೆ ಚಂದ್ರಶೇಖರ್ ಹಾಗೂ ಆತನ ಪತ್ನಿ ಮೇಘನಾ ವಿರುದ್ಧ ಕಾಮಾಕ್ಷಿ ಪಾಳ್ಯದಲ್ಲಿ ದೂರು ದಾಖಲಾಗಿ ಒಂದು ತಿಂಗಳಾಗಿದೆ. ಆದರೂ ಕಾಮಾಕ್ಷಿಪಾಳ್ಯ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಮೋಸಮಾಡಿದ ಚಂದ್ರಶೇಖರನನ್ನು ಕರೆದು ವಿಚಾರಣೆಯನ್ನೂ ಮಾಡದೇ ತಮ್ಮ ಸಿಬ್ಬಂದಿಯ ರಕ್ಷಣೆಗೆ ನಿಂತಿದ್ದಾರೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *