ದಾವಣಗೆರೆ: ಹುಡುಗಿಯನ್ನು ದಲಿತ (Dalit) ಯುವಕನೊಬ್ಬ ಬೈಕ್ನಲ್ಲಿ ಡ್ರಾಪ್ ಮಾಡಿದ್ದಕ್ಕೆ ಅತನ ವಿರುದ್ಧ ಪೋಕ್ಸೋ ಕೇಸ್ (POCSO Case) ದಾಖಲಾದ ಘಟನೆ ದಾವಣಗೆರೆ (Davanagere) ನಗರದ ಆರ್ಟಿಒ ಸರ್ಕಲ್ನಲ್ಲಿ ನಡೆದಿದೆ.
ಜಾಲಿ ನಗರದ ಯುವಕ ಶ್ರೀನಿವಾಸ್ 17 ವರ್ಷದ ಪರಿಚಯಸ್ಥ ಹುಡುಗಿಯನ್ನು ಶುಕ್ರವಾರ ಸಂಜೆ 5:30ಕ್ಕೆ ಬೈಕಿನಲ್ಲಿ ಕುಳ್ಳಿರಿಸಿ ಹೋಗುತ್ತಿದ್ದಾಗ 20ಕ್ಕೂ ಹೆಚ್ಚು ಯುವಕರು ಆತನನ್ನು ಹಿಂಬಾಲಿಸಿ ತಡೆದು ನಿಲ್ಲಿಸಿದ್ದಾರೆ.
ಆಕೆಗೆ ಹೇಗೆ ಬೈಕಿನಲ್ಲಿ ಡ್ರಾಪ್ ಕೊಡ್ತೀಯಾ ಎಂದು ಪ್ರಶ್ನಿಸಿ ಶಾದಿಮಹಲ್ಗೆ (Shadi Mahal) ಕರೆದೊಯ್ದು ರಾತ್ರಿಯಿಡಿ ಹಲ್ಲೆ ನಡೆಸಿದ್ದಾರೆ. ಮಧ್ಯರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಮತ ಹಾಕಿದ್ದಕ್ಕೆ ಹಲ್ಲೆ – ಮುಸ್ಲಿಂ ಮಹಿಳೆಯನ್ನು ಭೇಟಿಯಾಗಿ ಧೈರ್ಯ ತುಂಬಿದ ಚೌಹಾಣ್
ಬೆಳಗ್ಗೆ ಶ್ರೀನಿವಾಸ್ ಬೇರೆಯವರ ಬಳಿಯಿಂದ ಮೊಬೈಲ್ ಬಳಸಿ ಪೋಷಕರಿಗೆ ಪೋನ್ ಮಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಹಲ್ಲೆಗೊಳಗಾದ ಶ್ರೀನಿವಾಸ್ ಈಗ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತಡರಾತ್ರಿ 2:30ರ ವೇಳೆಗೆ ಶ್ರೀನಿವಾಸ್ ವಿರುದ್ದ ಹುಡುಗಿಯ ತಾಯಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಮುಂಭಾಗ ಜಮಾಯಿಸಿದ ಹಿಂದೂ ಸಂಘಟನೆಯ ಮುಖಂಡರು, ಇದರಲ್ಲಿ ಯುವಕನದ್ದು ಯಾವುದೇ ತಪ್ಪಿಲ್ಲ. ಪರಿಚಯಸ್ಥ ಹುಡುಗಿ ಡ್ರಾಪ್ ಕೇಳಿದ್ದಕ್ಕೆ ಹಲ್ಲೆ ಮಾಡಲಾಗಿದೆ. ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಈಗಾಗಲೇ ಯುವಕನಿಗೆ ನಿಶ್ಚಿತಾರ್ಥ ಆಗಿದೆ. ಯುವಕ ತಪ್ಪು ಮಾಡಿದ್ದರೇ ಪೊಲೀಸರಿಗೆ ಒಪ್ಪಿಸಬೇಕಾಗಿತ್ತು. ಖಾಸಗಿ ಶಾದಿ ಮಹಲ್ಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದು ಎಷ್ಟು ಸರಿ? ಈ ಪೋಕ್ಸೋ ಕೇಸ್ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿದ ಯುವಕನಾಗಿರುವ ಕಾರಣ ಈಗ ಹಲ್ಲೆ ನಡೆಸಿದ ಯುವಕರ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲು ಸಿದ್ಧತೆ ನಡೆಯುತ್ತಿದೆ.