ವಿದೇಶದಿಂದ ಮರಳಿದ ಕೆಲವೇ ಗಂಟೆಗಳಲ್ಲಿ ಜೇಟ್ಲಿ ಮನೆಗೆ ತೆರಳಿದ ಮೋದಿ

Public TV
2 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ ಪ್ರವಾಸದಿಂದ ವಾಪಸಾಗಿದ್ದು, ಇಂದು ಬೆಳಗ್ಗೆ ಮಾಜಿ ಹಣಕಾಸು ಸಚಿವ ದಿ.ಅರುಣ್ ಜೇಟ್ಲಿ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅರುಣ್ ಜೇಟ್ಲಿ ಅವರು ಮೃತಪಟ್ಟ ಮೂರು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅವರ ಮನೆಗೆ ತೆರಳಿದ್ದಾರೆ. ಪ್ರಧಾನಿ ಮೋದಿ ಫ್ರಾನ್ಸ್, ಯುಎಇ, ಬಹ್ರೇನ್ ಮೂರು ದೇಶಗಳ ಪ್ರವಾಸದಲ್ಲಿದ್ದಾಗ ಈ ಸುದ್ದಿ ತಿಳಿದಿತ್ತು. ಈ ವೇಳೆ ಅರುಣ್ ಜೇಟ್ಲಿ ಅವರ ಕುಟುಂಬಸ್ಥರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದರು. ಆಗ ಅವರ ಕುಟುಂಬಸ್ಥರು ಯಾವುದೇ ಕಾರಣಕ್ಕೂ ನಿಮ್ಮ ವಿದೇಶಿ ಪ್ರವಾಸವನ್ನು ಮೊಟಕುಗೊಳಿಸಬೇಡಿ ಎಂದು ತಿಳಿಸಿದ್ದರು.

ಜೇಟ್ಲಿ ಅವರ ಅಂತ್ಯಕ್ರಿಯೆಯನ್ನು ಭಾನುವಾರ ನಡೆಸಲಾಗಿದ್ದು, ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ದಕ್ಷಿಣ ದೆಹಲಿಯಲ್ಲಿರುವ ಅರುಣ್ ಜೇಟ್ಲಿ ಅವರ ಮನೆಗೆ ತೆರಳಿ ಪತ್ನಿ ಮತ್ತು ಮಕ್ಕಳನ್ನು ಭೇಟಿಯಾದರು.

ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸರಣಿ ಟ್ವೀಟ್‍ಗಳ ಮೂಲಕ ಅವರ ದೀರ್ಘ ಕಾಲಿನ ಸ್ನೇಹವನ್ನು ಸ್ಮರಿಸಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಒಟ್ಟೊಟ್ಟೊಗೆ ಬಂದಿದ್ದೆವು. ಉಗ್ರ ವಿದ್ಯಾರ್ಥಿ ನಾಯಕ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಜಾಪ್ರಭುತ್ವ ರಕ್ಷಿಸುವಲ್ಲಿ ಮುಂಚೂಣಿಯಲ್ಲಿದ್ದರು ಎಂದು ತಿಳಿಸಿದ್ದರು.

ಅರುಣ್ ಜೇಟ್ಲಿ ಬಿಜೆಪಿಯೊಂದಿಗೆ ಬಿಡಿಸಲಾಗದ ನಂಟು ಹೊಂದಿದ್ದರು. ಅಲ್ಲದೆ, ನಮ್ಮ ಪಕ್ಷದಲ್ಲಿ ಹೆಚ್ಚು ಇಷ್ಟ ಪಡುವ ನಾಯಕರಾಗಿದ್ದರು. ಪಕ್ಷದ ಕಾರ್ಯಕ್ರಮಗಳನ್ನು ಮತ್ತು ಸಿದ್ಧಾಂತವನ್ನು ಸಮಾಜದ ವಿಶಾಲ ವ್ಯಾಪ್ತಿಗೆ ನಿರೂಪಿಸಬಲ್ಲವರಾಗಿದ್ದರು ಎಂದು ಟ್ವೀಟ್ ಮಾಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಬಹ್ರೇನ್‍ನಲ್ಲಿ ಭಾಷಣ ಮಾಡುವಾಗಲೂ ಸಹ ಭಾವುಕರಾಗಿದ್ದರು. ವಿದ್ಯಾರ್ಥಿ ಜೀವನದಿಂದಲೂ ನಾವಿಬ್ಬರೂ ಒಟ್ಟಿಗೆ ಬಂದಿದ್ದೇವೆ. ರಾಜಕೀಯದಲ್ಲೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರ ಸಾವನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಭಾವುಕ ಭಾಷಣ ಮಾಡಿದ್ದರು.

ಬಹ್ರೇನ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ 15 ಸಾವಿರಕ್ಕೂ ಅಧಿಕ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದರು. ನಾನು ಕರ್ತವ್ಯಕ್ಕೆ ಬದ್ಧನಾಗಿರುವ ಮನುಷ್ಯ, ಬಹ್ರೇನ್‍ನಲ್ಲಿ ಉತ್ಸಾಹದ ವಾತಾವರಣವಿರುವಾಗ, ನಮ್ಮ ದೇಶದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿರುವ ಸಂದರ್ಭದಲ್ಲಿ ಬಾಲ್ಯ ಸ್ನೇಹಿತನನ್ನು ಕಳೆದುಕೊಂಡ ನನ್ನ ಹೃದಯ ತೀವ್ರ ದುಃಖತಪ್ತವಾಗಿದೆ. ವಿದ್ಯಾರ್ಥಿ ದೆಸೆಯಿಂದಲೂ ಸ್ನೇಹಿತರಿದ್ದೆವು. ಸಾರ್ವಜನಿಕ ಜೀವನದಲ್ಲಿ ನನ್ನೊಂದಿಗೆ ಒಟ್ಟಿಗೆ ಹೆಜ್ಜೆ ಹಾಕಿದ ಸ್ನೇಹಿತ, ಇಬ್ಬರೂ ಒಟ್ಟಿಗೆ ರಾಜಕೀಯ ಪಯಣ ಆರಂಭಿಸಿದ್ದೆವು. ನಾನು ಎಲ್ಲ ಸಮಯದಲ್ಲೂ ಅವರೊಂದಿಗೆ ಸಂಪರ್ಕದಲ್ಲಿದ್ದೆ. ಅವರೊಂದಿಗೆ ನಾನು ಹೋರಾಟಗಳನ್ನು ಎದುರಿಸಿದ್ದೇನೆ, ನಾನು ಕಂಡಿದ್ದ ಕನಸುಗಳನ್ನು ಈಡೇರಿಸಿದ್ದ ಆ ನನ್ನ ಸ್ನೇಹಿತ ಅರುಣ್ ಜೇಟ್ಲಿ, ದೇಶದ ಮಾಜಿ ಹಣಕಾಸು ಸಚಿವರು ನಿಧನರಾಗಿದ್ದಾರೆ ಎಂದು ಭಾಷಣವನ್ನು ಮಾಡಿದ್ದರು.

ಇದನ್ನು ನಾನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ನಾನು ಇಲ್ಲಿದ್ದೇನೆ. ಆದರೆ, ನನ್ನ ಸ್ನೇಹಿತ ನಮ್ಮನ್ನು ಬಿಟ್ಟು ಅಗಲಿದ್ದಾನೆ. ಆಗಸ್ಟ್ ತಿಂಗಳಲ್ಲಿ ನನ್ನ ಸಹೋದರಿ ಸುಷ್ಮಾ ಸ್ವರಾಜ್ ಅವರನ್ನು ಕಳೆದುಕೊಂಡಿದ್ದೇವೆ. ಇದೀಗ ನನ್ನ ಸ್ನೇಹಿತ ಅರುಣ್ ಜೇಟ್ಲಿಯನ್ನು ಕಳೆದುಕೊಂಡಿದ್ದೇನೆ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *