ಎಳನೀರು ಸೇವನೆ, ನೆಲದಲ್ಲೇ ನಿದ್ದೆ, ಸಾತ್ವಿಕ ಆಹಾರ- ರಾಮನ ಪ್ರತಿಷ್ಠಾಪನೆಗೆ ಪ್ರಧಾನಿ ಮೋದಿ ಕಠಿಣ ವ್ರತ

Public TV
1 Min Read

ನವದೆಹಲಿ: ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಜನವರಿ 22 ರಂದು ನಡೆಯಲಿರುವ ಬಾಲರಾಮನ ಪ್ರಾಣಪ್ರತಿಷ್ಠಾಪನೆ (Pran Pratistha) ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಕಠಿಣ ವ್ರತ ಕೈಗೊಂಡಿದ್ದಾರೆ. ವ್ರತದ ಭಾಗವಾಗಿ ಮೋದಿಯವರು (Narendra Modi) ಕೇವಲ ಎಳನೀರು ಸೇವನೆ ಮಾಡುತ್ತಿದ್ದಾರೆ. ಅಲ್ಲದೇ ಕೇವಲ ಹೊದಿಕೆಯೊಂದಿಗೆ ನೆಲದ ಮೇಲೆ ಮಲಗುತ್ತಿದ್ದಾರೆ.

11-ದಿನಗಳ ಈ ವಿಶೇಷ ವ್ರತದಲ್ಲಿ, ಧ್ಯಾನ ಮತ್ತು ವಿಶೇಷ ಸಾತ್ವಿಕ ಆಹಾರದೊಂದಿಗೆ ಮನಸ್ಸು ಮತ್ತು ದೇಹವನ್ನು ಶುದ್ಧೀಕರಿಸುವುದು ಸೇರಿದೆ. ಈ ನಿಯಮಗಳ ಪ್ರಕಾರ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಲವಾರು ಇತರ ವಸ್ತುಗಳ ಸೇವನೆಯನ್ನು ನಿಬರ್ಂಧಿಸಲಾಗುತ್ತದೆ. ಮೋದಿಯವರು ಈ ನಿಯಮಗಳು ಮತ್ತು ಆಚರಣೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ. ಇದನ್ನೂ ಓದಿ: ರಾಮ ಮಂದಿರದ ಅಂಚೆ ಚೀಟಿ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ

ಜನವರಿ 12ರಿಂದ ರಾಮಂದಿರದಲ್ಲಿ ವಿಧಿ-ವಿಧಾನಗಳು ಆರಂಭಗೊಂಡಿವೆ. ಜ.22ರಂದು ಪ್ರಧಾನಿ ಮೋದಿಯವರು ಪ್ರಾಣ ಪ್ರತಿಷ್ಠಾಪನೆಗೆ ಪೂಜೆ ನೆರವೇರಿಸಲಿದ್ದಾರೆ. ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಅರ್ಚಕರ ತಂಡವು ಪ್ರಾಣಪ್ರತಿಷ್ಠೆಯ ಮುಖ್ಯ ವಿಧಿಗಳನ್ನು ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಾಣ ಪ್ರತಿಷ್ಠಾ ಎಂದರೆ ವಿಗ್ರಹಕ್ಕೆ ದೈವಿಕ ಅಂಶಗಳನ್ನು ತುಂಬುವುದು. ಜ.22ರ ಮಧ್ಯಾಹ್ನ 12:30ಕ್ಕೆ ರಾಮಮದಿರದಲ್ಲಿ ಅದರ ಶುಭ ಮುಹೂರ್ತವಾಗಿದೆ. ಈ ವಿಧಿವಿಧಾನ ದೇವಾಲಯದಲ್ಲಿ ಪೂಜಿಸುವ ಪ್ರತಿಯೊಂದು ವಿಗ್ರಹಕ್ಕೂ ಅತ್ಯಗತ್ಯವಾಗಿರುತ್ತದೆ.

ಪ್ರಾಣಪ್ರತಿಷ್ಠಾಪನೆಗೆ ದೇವಾಲಯದ ಟ್ರಸ್ಟ್‍ನಿಂದ ವಿಶೇಷವಾಗಿ ಆಹ್ವಾನಿಸಲ್ಪಟ್ಟ ದೇಶ ಮತ್ತು ವಿದೇಶಗಳಿಂದ ಸಾವಿರಾರು ಅತಿಥಿಗಳು ಭಾಗಿಯಾಗಲಿದ್ದಾರೆ. ಈ ಸಮಾರಂಭದ ದಿನ ಕೇಂದ್ರ ಸರ್ಕಾರ ತನ್ನ ಎಲ್ಲಾ ಕಚೇರಿಗಳನ್ನು ಅರ್ಧ ದಿನ ಮುಚ್ಚುವುದಾಗಿ ಘೋಷಿಸಿದೆ. ಇದನ್ನೂ ಓದಿ: ಜ.22ರಂದು ಕೇಂದ್ರ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ

Share This Article