ಇದು ಭಾರತದ ಚೈತನ್ಯ: ಸಾರ್ವಜನಿಕರ ಕಾರ್ಯಕ್ಕೆ ಮೋದಿ ಮೆಚ್ಚುಗೆ

Public TV
1 Min Read

ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ವೈದ್ಯರು, ವೈದ್ಯಕೀಯ ಸಿಬ್ಬಂದಿ ನಿತ್ಯವೂ ಹೋರಾಡುತ್ತಿದ್ದಾರೆ. ಈ ಪೈಕಿ ವೈದ್ಯೆಯೊಬ್ಬರಿಗೆ ಸ್ಥಳೀಯರು ತೋರಿದ ಗೌರವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೋವನ್ನು ಟ್ವೀಟ್ ಮಾಡಿದ್ದ ಚಂಡೀಗಢ ಬಿಜೆಪಿ ಕಾರ್ಯದರ್ಶಿ ದೀಪಕ್ ಮಲ್ಹೋತ್ರಾ, ಮಹಿಳಾ ವೈದ್ಯೆಯೊಬ್ಬರು ಕೊರೊನಾ ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಬರೋಬ್ಬರಿ 20 ದಿನಗಳ ಕಾಲ ಚಿಕಿತ್ಸೆ ನೀಡಿ ಮನೆಗೆ ವಾಪಸ್ ಆದರು. ಈ ವೇಳೆ ಅವರಿಗೆ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ಜನರಿಂದ ಅಭೂತಪೂರ್ವ ಸ್ವಾಗತ ಸಿಕ್ಕಿದೆ ಎಂದು ಬರೆದುಕೊಂಡಿದ್ದರು.

ದೀಪಕ್ ಮಲ್ಹೋತ್ರಾ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಈ ರೀತಿಯ ಕ್ಷಣಗಳು ಹೃದಯವನ್ನು ಸಂತೋಷಪಡಿಸುತ್ತವೆ. ಇದು ಭಾರತದ ಚೈತನ್ಯ, ಸ್ಫೂರ್ತಿ. ಕೋವಿಡ್-19 ವಿರುದ್ಧ ನಾವು ಧೈರ್ಯದಿಂದ ಹೋರಾಟ ನಡೆಸಿದ್ದೇವೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೆಲಸ ಮಾಡುವವರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಹೆಮ್ಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚು ಜನರಿಗೆ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 1,993 ಮಂದಿಗೆ ಸೋಂಕು ದೃಢಪಟ್ಟಿದ್ದು, 73 ಮಂದಿ ಸಾನ್ನಪ್ಪಿದ್ದಾರೆ. ಹೀಗಾಗಿ ಕೊರೊನಾಗೆ ಬಲಿಯಾದವರ ಸಂಖ್ಯೆ 1,147ಕ್ಕೆ ಏರಿಕೆ ಕಂಡಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿರುವ ಪ್ರಕಾರ, ಕಳೆದ 14 ದಿನಗಳಲ್ಲಿ ಕೋವಿಡ್-19ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.25ರಷ್ಟು ಏರಿಕೆಯಾಗಿದೆ. ಅದೇ ರೀತಿ ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *