ಗುರುವಾಯೂರ್ ದೇವಾಲಯದಲ್ಲಿ ಕಮಲದ ಹೂಗಳಿಂದ ಮೋದಿ ತುಲಾಭಾರ

Public TV
1 Min Read

ತಿರುವನಂತಪುರಂ: ಪ್ರಧಾನಿ ಮೋದಿ ಅವರು ಮಾಲ್ಡೀವ್ಸ್‍ಗೆ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದು, ಆದಕ್ಕೂ ಮುನ್ನ ಬೆಳಗ್ಗೆ ಕೇರಳದ ಗುರುವಾಯೂರ್  ಸನ್ನಿಧಿಯಲ್ಲಿಯಲ್ಲಿ ತುಲಾಭಾರ ಮಾಡಿಸಿದ್ದಾರೆ.

ಲೋಕಸಭಾ ಚುನಾವಣೆಯ ಭರ್ಜರಿ ಗೆಲುವಿನ ನಂತರ ಮೊದಲ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿ 5 ಸಾವಿರ ವರ್ಷಗಳ ಇತಿಹಾಸ ಇರುವ ಗುರುವಾಯೂರ್ ಶ್ರೀ ಕೃಷ್ಣನ ದರ್ಶನ ಪಡೆದರು.

ಬಿಳಿ ಬಣ್ಣದ ಧೋತಿ ಮತ್ತು ಶಲ್ಯ ಧರಿಸಿದ್ದ ಮೋದಿ ಅವರು ಬಿಜೆಪಿಯ ಚಿಹ್ನೆಯಾದ ಕಮಲದ ಹೂಗಳಿಂದ ತುಲಾಭಾರ ಮಾಡಿಸಿಕೊಂಡರು. ಒಂದು ಗಂಟೆಯ ದರ್ಶನದ ನಂತರ ಮೋದಿ ಅವರು, ಕೇರಳದ ಬಿಜೆಪಿ ಸಮಿತಿ ಗುರುವಾಯೂರ್ ನಲ್ಲಿ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಭಾಗವಹಿಸಿದರು.

ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ನಂತರ ಮೊದಲ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಕೇರಳದ ಜನತೆ ಬಿಜೆಪಿಗೆ ಮತಹಾಕದಿದ್ದರೂ ಮೋದಿ ಯಾಕೆ ಕೇರಳಕ್ಕೆ ಬಂದಿದ್ದಾರೆ ಎಂದು ಆಶ್ಚರ್ಯವಾಗಬಹುದು. ಆದರೆ ಕೇರಳ ಬಿಜೆಪಿಗೆ ವೋಟ್ ಮಾಡದೇ ಇದ್ದರೂ ನನ್ನ ಕ್ಷೇತ್ರ ವಾರಣಾಸಿಯಂತೆ ಈ ರಾಜ್ಯವೂ ನನಗೆ ಇಷ್ಟ. ಚುನಾವಣೆ ಮತ್ತು ಪ್ರಜಾಪ್ರಭುತ್ವದ ಆಚರಣೆಗಳು ಬೇರೆ ಬೇರೆ. ಇದನ್ನು ನಾವು ಗೌರವಿಸಬೇಕು ಎಂದು ಹೇಳಿದರು.

ಕೇರಳದಲ್ಲಿ ಬಿಜೆಪಿ ಒಂದು ಸ್ಥಾನವನ್ನು ಗೆದ್ದಿಲ್ಲ. ಆದರೆ ಮೋದಿ ಅಲ್ಲಿನ ಜನರಿಗೆ ಧನ್ಯವಾದ ತಿಳಿಸಲು ಹೋಗಿದ್ದು ಯಾಕೆ. ಮೋದಿ ತಲೆಯಲ್ಲಿ ಏನಿದೆ ಎಂದು ಕೆಲ ರಾಜಕೀಯ ಚಿಂತಕರು ಪ್ರಶ್ನೆ ಮಾಡುತ್ತಿರಬಹುದು. ಆದರೆ ಇದು ನಮ್ಮ ಸಂಸ್ಕೃತಿ ಇದು ನಮ್ಮ ಚಿಂತನೆ. ಈ ಕಾರಣಕ್ಕೆ ನಾನು ಕೇರಳಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

ಶುಕ್ರವಾರ ರಾತ್ರಿ ಕೇರಳಕ್ಕೆ ಬಂದಿದ್ದ ಮೋದಿ ಅವರು ಸರ್ಕಾರಿ ಅತಿಥಿ ಗೃಹದಲ್ಲಿ ತಂಗಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇರಳದಲ್ಲಿ ಖಾತೆ ತೆರೆಯಲು ವಿಫಲವಾಗಿತ್ತು. ಕೇರಳದಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ 16 ಕ್ಷೇತ್ರಗಳ ಪೈಕಿ 15ರಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ 20 ಕ್ಷೇತ್ರಗಳ ಪೈಕಿ 19 ಸ್ಥಾನಗಳನ್ನು ಗೆದ್ದುಕೊಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *