ಹುತಾತ್ಮ ಯೋಧರಿಗೆ ದೆಹಲಿಯಲ್ಲಿ ಗೌರವ ನಮನ

Public TV
2 Min Read

ನವದೆಹಲಿ: ಊಟಿ ಬಳಿಯ ಬೆಟ್ಟ ಪ್ರದೇಶದಲ್ಲಿ ಸಂಭವಿಸಿದ ಘನಘೋರ ದುರಂತದಲ್ಲಿ ಹುತಾತ್ಮರಾದ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರೇ 11 ಸೇನಾಧಿಕಾರಿಗಳ ಪಾರ್ಥಿವ ಶರೀರಗಳನ್ನು ದೆಹಲಿಯ ಪಾಲಂ ವಾಯುನೆಲೆಯಲ್ಲಿ ಇರಿಸಲಾಗಿದ್ದು, ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಮೊದಲು ಹುತಾತ್ಮರ ಕುಟುಂಬಸ್ಥರು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮೂರು ಪಡೆಗಳ ಮುಖ್ಯಸ್ಥರು ಸೇರಿ ಹಲವರು ಅಂತಿಮ ಗೌರವ ನಮನ ಸಲ್ಲಿಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಗೌರವ ಅರ್ಪಿಸಿದರು. ಈ ಸಂದರ್ಭದಲ್ಲಿ ಕೆಲ ಹುತಾತ್ಮರ ಕುಟುಂಬಸ್ಥರ ಕಣ್ಣಾಲಿಗಳು ತುಂಬಿಬಂದಿದ್ದವು.

ಇದಕ್ಕೂ ಮುನ್ನ, ಊಟಿಯ ವೆಲ್ಲಿಂಗ್ಟನ್ ಡಿಫೆನ್ಸ್ ಕಾಲೇಜಿನ ಮೈದಾನದಲ್ಲಿ ಸಿಡಿಎಸ್ ಬಿಪಿನ್ ರಾವತ್ ಮತ್ತು ಇತರರ ಭೌತಿಕ ಕಾಯಗಳಿಗೆ ಸಿಎಂ ಸ್ಟಾಲಿನ್, ತೆಲಂಗಾಣ ರಾಜ್ಯಪಾಲರಾದ ತಮಿಳ್‍ಸಾಯಿ ಸೌಂದರರಾಜನ್, ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಸೇರಿ ಹಲವು ಪ್ರಮುಖರು ಅಂತಿಮ ನಮನ ಸಲ್ಲಿಸಿದ್ರು.

ಸಂಜೆ ಅಲ್ಲಿಂದ 13 ಪ್ರತ್ಯೇಕ ಅಂಬುಲೆನ್ಸ್‌ಗಳಲ್ಲಿ ಸೂಳೂರು ವಾಯುನೆಲೆಗೆ ಪಾರ್ಥಿವ ಶರೀರಗಳನ್ನು ಕೊಂಡೊಯ್ಯಲಾಯಿತು. ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೇಲಗಳಲ್ಲಿ ನಿಂತ ಜನ  ಅಂಬುಲೆನ್ಸ್‌ಗಳ ಮೇಲೆ ಹೂಮಳೆಗೈದರು. ಬಿಪಿನ್ ರಾವತ್ ಅಮರ್ ರಹೇ ಎಂಬ ಘೋಷಣೆಗಳು ಮುಗಿಲುಮುಟ್ಟಿದ್ದವು.

ಸೂಳೂರು ಏರ್‌ಬೇಸ್‌ ಕ್ಯಾಂಪ್‍ನಿಂದ ಸಿ-130ಜೆ ಹರ್ಕ್ಯೂಲೆಸ್‌ ಯುದ್ಧ ವಿಮಾನದಲ್ಲಿ ಹುತಾತ್ಮರ ಪಾರ್ಥಿವ ಶರೀರಗಳನ್ನು ದೆಹಲಿಗೆ ಸಾಗಿಸಲಾಯ್ತು. ರಾತ್ರಿ7.40ಕ್ಕೆ ಈ ವಿಮಾನ ದೆಹಲಿ ತಲುಪಿತ್ತು.

ಶುಕ್ರವಾರ ಏನೇನು?
ಬೆಳಗ್ಗೆ 11ಕ್ಕೆ ಕಾಮರಾಜ್ ಮಾರ್ಗ್ ನಿವಾಸದಲ್ಲಿ ರಾವತ್ ದಂಪತಿ ಭೌತಿಕ ಕಾರ್ಯಗಳು ನಡೆಯಲಿದೆ. ಮೂರು ಸೇನಾ ಪಡೆಗಳ ಬ್ಯಾಂಡ್ ಜೊತೆಗೆ ಮೆರವಣಿಗೆ ನಡೆಯುತ್ತದೆ. ರಾವತ್‍ಗೆ ನಮನ ಸಲ್ಲಿಸಲು ಬಂಧು ಬಾಂಧವರಿಗೆ ಮಧ್ಯಾಹ್ನ 2ರವರೆಗೂ ಅವಕಾಶ ನೀಡಲಾಗುತ್ತದೆ. ಮಧ್ಯಾಹ್ನ 2 ಗಂಟೆಗೆ ಕಾಮರಾಜ್ ಮಾರ್ಗ್‍ನಿಂದ ಬ್ರಾರ್ ವೃತ್ತದ ಸ್ಮಶಾನದವರೆಗೂ ರಾವತ್‌ ದಂಪತಿಯ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆ – ಧೌಲಾಖಾನ್‍ನ ಬ್ರಾರ್ ಕ್ರಿಮೆಟೋರಿಯಂನಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಸಿಡಿಎಸ್ ದಂಪತಿ ಅಂತ್ಯಕ್ರಿಯೆ ಮಾಡಲಾಗುತ್ತದೆ.

ಉಳಿದ ಹುತಾತ್ಮರ ಪಾರ್ಥಿವ ಶರೀರಗಳನ್ನು ಅವರವರ ಸ್ವಗ್ರಾಮಗಳಿಗೆ ಕಳುಹಿಸಲಾಗುತ್ತದೆ. ನಾಳೆ ಅಥವಾ ನಾಡಿದ್ದು ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆಗಳು ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *