– ನಮ್ಮ ಅವಧಿಯಲ್ಲಿ ಅರ್ಹರಿಗೆ ಪ್ರಶಸ್ತಿ
– ಉಗ್ರರ ಮನೆಗೆ ನುಗ್ಗಿ ಹೊಡೆದು ಬರುತ್ತೇವೆ
ಮಂಗಳೂರು: ನಮ್ಮದು ವಂಶೋದಯ ಅಲ್ಲ, ಅಂತ್ಯೋದಯ್. ಅಂತ್ಯೋದಯದಲ್ಲಿ ಕೆಳಹಂತದವರನ್ನೂ ಕೂಡ ಸನ್ಮಾನಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್-ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜೆಡಿಎಸ್ ಪ್ರೇರಣೆ ಪರಿವಾರವಾದ, ನಮ್ಮದು ರಾಷ್ಟ್ರೀಯವಾದ. ನಮ್ಮ ಅವಧಿಯಲ್ಲಿ ಅರ್ಹರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದೇವೆ. ಇದು ನಮ್ಮ ಭಾರತ. ಅಂತ್ಯೋದಯದಲ್ಲಿ ಚಾಯ್ವಾಲಾ ಪ್ರಧಾನಿಯಾಗಬಹುದು ಎಂದು ಹೇಳಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ 5 ವರ್ಷಗಳ ಆಡಳತದಲ್ಲಿ ದೊಡ್ಡ ನಿರ್ಣಯ ತೆಗೆದುಕೊಳ್ಳಲಾಯಿತು. ಭಾರತ ಬದಲಾಗಿದೆಯೋ, ಇಲ್ಲವೋ? ಭಾರತದ ಹೆಸರು ಜಗತ್ತಿನ ಪ್ರತಿಯೊಂದು ದೇಶದಲ್ಲಿ ಕೇಳುತ್ತಿದೆ. ಪ್ರತಿಯೊಬ್ಬರು ಭಾರತವನ್ನು ಗೌರವಿಸುತ್ತಿದ್ದಾರೆ. ಇದು ನನ್ನಿಂದ ಆಗಿದ್ದಲ್ಲ, ನಿಮ್ಮ ಒಂದು ಮತದಿಂದ ಈ ಬದಲಾವಣೆ ಆಗಿದೆ ಎಂದು ಹೇಳಿದರು.
ಕಾಂಗ್ರೆಸ್ನವರು ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕಷ್ಣನ್ ಅವರ ಸ್ಮಾರಕ ನಿರ್ಮಿಸಿದ್ದಾರಾ? ಕಾಂಗ್ರೆಸ್ ಪರಿವಾರದ ಪ್ರತಿಯೊಬ್ಬರ ಸ್ಮಾರಕವನ್ನು ನಿರ್ಮಾಣ ಮಾಡಿದೆ. ಆದರೆ ನಾವು ರಾಮನಾಥ್ಪುರಂನಲ್ಲಿ ಮಾಜಿ ರಾಷ್ಟ್ರಪತಿ ಎಪಿಜಿ ಅಬ್ದುಲ್ ಕಲಾಂ ಸ್ಮಾರಕ ನಿರ್ಮಾಣ ಮಾಡಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಛಾಟಿ ಬೀಸಿದರು.
ಅವರದ್ದು ದರ್ಶನ್ ವಂಶೋದಯ, ನಮ್ಮದು ದರ್ಶನ್ ಅಂತ್ಯೋದಯವಾಗಿದೆ. ಅವರು ದಲ್ಲಾಳಿಗಳ ಕೈಹಿಡಿದು ನಡೆಸುತ್ತಾರೆ. ನಾವು ಜನ್ಧನ್, ಆಧಾರ್, ಮೊಬೈಲ್(ಜ್ಯಾಮ್) ವ್ಯವಸ್ಥೆಯನ್ನು ಅಳವಡಿಸಿ ದೇಶ ನಡೆಸಿದ್ದೇವೆ. ನಾವು ಅಭಿವೃದ್ಧಿ ಮಾಡಿದ್ದೇವೋ ಇಲ್ಲವೋ? ಎಂದು ಸಭೆಯಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದರು.
ಭಾರತೀಯ ಸೇನೆಯು ಉಗ್ರರ ಮನೆಗೆ ನುಗ್ಗಿ ಹೊಡೆದು ಬರುತ್ತೇವೆ. ಆದರೆ ಅವರ ಬಗ್ಗೆ ವಿಪಕ್ಷ ನಾಯಕರು ಅನುಮಾನಪಡುತ್ತಾರೆ. ಸೇನೆ ಸುಳ್ಳು ಹೇಳುತ್ತದೆ ಅಂತ ಹೇಳುತ್ತಾರೆ, ಸೇನಾ ಮುಖ್ಯಸ್ಥರನ್ನು ಗಲ್ಲಿ ರೌಡಿ ಎಂದು ಕರೆಯುತ್ತಾರೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದರು.
ಶಬರಿಮಮಲೆ ಅಯ್ಯಪ್ಪ ವಿಚಾರವಾಗಿ ಹೋರಾಟ ಮಾಡಿದವರನ್ನು ಕಮ್ಯೂನಿಸ್ಟ್ ಸರ್ಕಾರ ಬಂಧಿಸುತ್ತದೆ. ಅಯ್ಯಪ್ಪ ಹೆಸರು ಹೇಳುವಂತಿಲ್ಲ. ಬಿಜೆಪಿಯ ಅಭ್ಯರ್ಥಿಯನ್ನೇ ಜೈಲಿಗೆ ಹಾಕಿದರು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ದೇಶದ ಹಲವು ರಾಜ್ಯಗಳು ರೈತರ ಹೆಸರನ್ನು ನೀಡಿವೆ. ಆದರೆ ಕರ್ನಾಟಕ ಸರ್ಕಾರ ರೈತರ ಮಾಹಿತಿಯನ್ನು ನೀಡಿಲ್ಲ. ರಾಜ್ಯ ಸರ್ಕಾರವು ರೈತರ ಶತ್ರುವಾಗಿದೆ. ಇದರಿಂದಾಗಿ ನಿಮ್ಮ ಖಾತೆಗೆ ಹಣ ಹಾಕಲು ಸಾಧ್ಯವಾಗಲಿಲ್ಲ ಎಂದರು. ಹೀಗಾಗಿ ಈ ಶತ್ರುಗಳಿಗೆ ಈ ಬಾರಿ ಪಾಠ ಕಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ 60 ವರ್ಷ ಆಡಳಿತ ನಡೆಸಿದ ಲೂಟಿಕೋರರಿಗೆ ಸಾಲ ನೀಡಿತ್ತು. ಈ ಆಟ ನಿಲ್ಲಿಸಬೇಕೋ ಬೇಡವೋ? ಎಂದು ಜನರು ಪ್ರಶ್ನಿಸಿದ ಪ್ರಧಾನಿ ಮೋದಿ, ಕರ್ನಾಟಕ ವಿಧಾನಸಭೆಯಲ್ಲಿ ಹೆಚ್ಚು ಸ್ಥಾನ ನೀಡಿದ್ದೀರಿ. ಈಗ ಮತ್ತಷ್ಟು ಹೆಚ್ಚಿನ ಸ್ಥಾನ ನೀಡಬೇಕು ಎಂದು ಮತದಾರರಲ್ಲಿ ಕೇಳಿಕೊಂಡರು.
ಮೋದಿ ಭಾಷಣ ಕೇಳಲು ಹಲವು ಮಂದಿ ಮರವನ್ನು ಏರಿದ್ದರು. ಈ ವಿಚಾರವನ್ನು ಗಮನಿಸಿದ ಮೋದಿ ಭಾಷಣದ ಆರಂಭದಲ್ಲಿ ಮರದ ಮೇಲೆ ಕುಳಿತವರು ದಯವಿಟ್ಟು ಕೆಳಗಡೆ ಇಳಿಯಿರಿ ಎಂದು ಮನವಿ ಮಾಡಿಕೊಂಡರು.