ಪ್ರಧಾನಿಯಿಂದ ಭಾನುವಾರ ದೇಶದ ಅತಿ ಉದ್ದದ ತೂಗುಸೇತುವೆ ʻಸುದರ್ಶನ ಸೇತುʼ ಲೋಕಾರ್ಪಣೆ

Public TV
3 Min Read

ಗಾಂಧಿನಗರ: ಗುಜರಾತ್‌ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ (ಫೆ.25) ದೇಶದ ಅತೀ ಉದ್ದದ ಕೇಬಲ್‌ ತೂಗು ಸೇತುವೆ ʻಸುದರ್ಶನ ಸೇತುʼವನ್ನು (Sudarshan Setu) ಉದ್ಘಾಟಿಸಲಿದ್ದಾರೆ.

ಎರಡು ದಿನಗಳ ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಗುಜರಾತ್‌ನ ಓಖಾ ಮುಖ್ಯ ಭೂಭಾಗ ಮತ್ತು ಬೇಟ್‌ ದ್ವಾರಕಾ ದ್ವೀಪವನ್ನು ಸಂಪರ್ಕಿಸುವ ಅತೀ ಉದ್ದದ ಕೇಬಲ್‌ ತೂಗು ಸೇತುವೆಯನ್ನು (India’s longest Cable Bridge) ಲೋಕಾರ್ಪಣೆಗೊಳಿಸಲಿದ್ದಾರೆ. 2017ರಲ್ಲಿ ಇದಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇದನ್ನೂ ಓಧಿ: ಕೋಟಿ ಕೋಟಿ ಒಡೆಯ ಅಯೋಧ್ಯೆ ಬಾಲರಾಮ – ಒಂದು ತಿಂಗಳಲ್ಲಿ 25 ಕೋಟಿ ಸಂಗ್ರಹ

ಭಾನುವಾರ (ಫೆ.25) ಬೆಳಗ್ಗೆ 8:25ಕ್ಕೆ ಸುದರ್ಶನ ಸೇತುಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಬೇಟ್‌ ದ್ವಾರಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬೆಳಗ್ಗೆ 9:30ಕ್ಕೆ ದ್ವಾರಕಾಧೀಶ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಸೇತುವೆ ಉದ್ಘಾಟನೆ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿರುವ ಮೋದಿ ಜಾಮ್‌ನಗರ, ದೇವಭೂಮಿ ದ್ವಾರಕಾ ಮತ್ತು ಪೋರಬಂದರ್‌ ಜಿಲ್ಲೆಗಳಲ್ಲಿಯೂ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಗುಜರಾತ್‌ ಸಿಎಂ ಭೂಪೇಂದ್ರಭಾಯಿ ಪಟೇಲ್ ತಿಳಿಸಿದ್ದಾರೆ.

ಅಲ್ಲದೇ ರಾಜ್‌ಕೋಟ್‌ನಲ್ಲಿ ಗುಜರಾತ್‌ನ ಮೊದಲ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್), ರಾಜ್‌ಕೋಟ್ ನಗರದ ಹೊರವಲಯದಲ್ಲಿರುವ ಪಾರಾ ಪಿಪಾಲಿಯಾ ಗ್ರಾಮದ ಬಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಒಳರೋಗಿಗಳ ವಿಭಾಗವನ್ನೂ (ಐಪಿಡಿ) ಮೋದಿ ಉದ್ಘಾಟಿಸಲಿದ್ದಾರೆ ಎಂದು ಪಟೇಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓಧಿ: ಲೋಕಸಭೆ ಚುನಾವಣೆಗೆ ಮುಂದಿನ ವಾರ ಬಿಜೆಪಿ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ?

ಸುದರ್ಶನ ಸೇತು ವಿಶೇಷತೆಗಳೇನು?
ಚತುಷ್ಪಥ ರಸ್ತೆಯನ್ನು ಒಳಗೊಂಡಿರುವ ಸುದರ್ಶನ ಸೇತು 2.32 ಕಿಮೀ ಗಳಷ್ಟು ಉದ್ದವಿದೆ. ಸರಿಸುಮಾರು 980 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸುದರ್ಶನ ಸೇತುವನ್ನು ಓಖಾ-ಬೇಟ್ ದ್ವಾರಕಾ ಸಿಗ್ನೇಚರ್ ಬ್ರಿಡ್ಜ್‌ ಅಂತಲೂ ಕರೆಯುತ್ತಾರೆ. ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಸೌರ ಫಲಕಗಳನ್ನು ಅಳವಡಿಸಿದ್ದು, ಇದು ಒಂದು ಮೆಗಾವ್ಯಾಟ್‌ ಅನ್ನು ಉತ್ಪಾದಿಸಲಿದೆ.

ಪಾದಚಾರಿ ಮಾರ್ಗಗಳಲ್ಲಿ ಭಗವದ್ಗೀತೆ ಶ್ಲೋಕ:
ಸೇತುವೆ ಮೇಲೆ ನಿರ್ಮಾಣಗೊಂಡಿರುವ ರಸ್ತೆಗಳು 27.2 ಮೀಟರ್‌ ಅಂದ್ರೆ ಸುಮಾರು 89 ಅಡಿಗಳಷ್ಟು ಅಗಲವಿದೆ. ಎರಡೂ ಬದಿಗಳಲ್ಲಿ 2.5 ಮೀಟರ್‌ (8 ಅಡಿ) ಗಳಷ್ಟು ಪಾದಚಾರಿ ಮಾರ್ಗಕ್ಕೆ ಸ್ಥಳಾವಕಾಶವಿದೆ. ಈ ಪಾದಚಾರಿ ಮಾರ್ಗಗಳಲ್ಲಿ ಭಗವದ್ಗೀತೆಯ ಶ್ಲೋಕಗಳನ್ನ ಹಾಕಲಾಗಿದೆ ಮತ್ತು ಶ್ರೀಕೃಷ್ಣನ ಚಿತ್ರಗಳನ್ನ ಅಲಂಕರಿಸಲಾಗಿದೆ. ಇದನ್ನೂ ಓಧಿ: ಕಪ್ಪು ತುಂಡುಡುಗೆ ತೊಟ್ಟು ರೈಲಿನಲ್ಲಿ ಸೊಂಟ ಬಳುಕಿಸಿದ ಶ್ವೇತಸುಂದರಿ – ನೆಟ್ಟಿಗರಿಂದ ಫುಲ್‌ ಕ್ಲಾಸ್‌

20 ಲಕ್ಷ ಯಾತ್ರಾರ್ಥಿಗಳಿಗೆ ಪ್ರಯೋಜನ:
ಬೇಟ್ ದ್ವಾರಕಾ, ಓಖಾ ಬಂದರಿನ ಸಮೀಪವಿರುವ ಒಂದು ದ್ವೀಪವಾಗಿದೆ. ಇದು ದ್ವಾರಕಾ ಪಟ್ಟಣದಿಂದ ಸುಮಾರು 30 ಕಿಮೀ ದೂರದಲ್ಲಿದೆ. ಅಲ್ಲಿ ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ ದೇವಾಲಯವೂ ಇದೆ. ಈ ಮಾರ್ಗವು ದೇವಸ್ಥಾನಗಳಿಗೆ ಪ್ರಯಾಣಿಸುವ ಭಕ್ತರಿಗೆ ಮತ್ತಷ್ಟು ಅನುಕೂಲಕರವಾಗಲಿದೆ. ಒಟ್ಟಿನಲ್ಲಿ ಈ ಸುದರ್ಶನ ಸೇತು ಸುಮಾರು 8,500ಕ್ಕೂ ಹೆಚ್ಚು ಸ್ಥಳೀಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲಿದೆ. ಈ ಪ್ರದೇಶದಲ್ಲಿನ ದೇವಾಲಯಗಳಿಗೆ ಭೇಟಿ ನೀಡುವ 20 ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳಿಗೆ ಪ್ರಯೋಜನವಾಗಲಿದೆ.

Share This Article