ಕಾವೇರಿ ನಿರ್ವಹಣಾ ಮಂಡಳಿಗೆ ಬೇಡಿಕೆ: ವೇದಿಕೆಯಲ್ಲಿ ಮೌನಕ್ಕೆ ಜಾರಿದ ಮೋದಿ

Public TV
1 Min Read

ಚೆನ್ನೈ: ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು ಎನ್ನುವ ತಮಿಳುನಾಡಿನ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಮೌನವಹಿಸಿದ್ದಾರೆ.

ಶನಿವಾರ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಬ್ಸಿಡಿ ಸ್ಕೂಟರ್ ನೀಡುವ ಯೋಜನೆಗೆ ಮೋದಿ ಚಾಲನೆ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹಾಗೂ ಡಿಸಿಎಂ ಒ ಪನ್ನೀರ್ ಸೆಲ್ವಂ ಅವರು ಕಾವೇರಿ ನಿರ್ವಹಣಾ ಮಂಡಳಿ ಹಾಗೂ ಕಾವೇರಿ ನೀರು ನಿಯಂತ್ರಣ ಮಂಡಳಿಯನ್ನು ರಚಿಸಬೇಕು ಎಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ಮೋದಿ ಅವರನ್ನು ಆಗ್ರಹಿಸಿದ್ದರು.

ನಾಯಕರ ಭಾಷಣದ ಬಳಿಕ ಮಾತನಾಡಿದ ಮೋದಿ ಕಾವೇರಿ ನಿಯಂತ್ರಣ ಮಂಡಳಿ ರಚನೆಯ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ. ಈ ಕಾರ್ಯಕ್ರಮದಲ್ಲಿ ಎಐಎಡಿಎಂಕೆ ಪಕ್ಷ ಮುಖವಾಣಿ ‘ನಮದು ಪುರಚ್ಚಿ ತಲೈವಿ ಅಮ್ಮ’ ಹೆಸರಿನ ದೈನಿಕವನ್ನು ಲೋಕಾರ್ಪಣೆ ಮಾಡಲಾಯಿತು.

2007ರ ಫೆಬ್ರವರಿ 5ರಂದು ಕಾವೇರಿ ಜಲವಿವಾದ ನ್ಯಾಯಾಧಿಕರಣ ನೀಡಿದ್ದ ಐತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸಲ್ಲಿಸಿದ್ದ ವಿಶೇಷ ಮೆಲ್ಮನವಿ ಅರ್ಜಿಗಳ ಮೇಲೆ ಸುದೀರ್ಘ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಫೆ.16 ರಂದು 465 ಪುಟಗಳ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು.

ಈ ತೀರ್ಪಿನಲ್ಲಿ ನ್ಯಾಯಾಧಿಕರಣ ಹೇಳಿರುವ ಮಾದರಿಯಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಕೋರ್ಟ್ ಒಪ್ಪಿಗೆ ನೀಡಿಲ್ಲ. ಆದರೆ, ನೀರಿನ ಉಸ್ತುವಾರಿಗೆ ಪರ್ಯಾ ವ್ಯವಸ್ಥೆಯೊಂದನ್ನು ಆರು ವಾರದೊಳಗೆ ಸಂಸತ್ ರೂಪಿಸಬೇಕು ಎಂದು ಸ್ಪಷ್ಟವಾಗಿ ಹೇಳಿತ್ತು. ಸಂಕಷ್ಟದ ವರ್ಷಗಳಲ್ಲಿ ಕಣಿವೆ ರಾಜ್ಯಗಳ ನಡುವೆ ನೀರಿನ ಹಂಚಿಕೆ ಸೂತ್ರ ಹೇಗಿರಬೇಕು ಎಂಬುದನ್ನು ಸಂಸತ್ತು ರೂಪಿಸುವ ಹೊಸ ವ್ಯವಸ್ಥೆಯ ಆಧಾರದ ಮೇಲೆ ಬಗೆಹರಿಸಿಕೊಳ್ಳಬೇಕಿದೆ.

ತನ್ನ ತೀರ್ಪಿನಲ್ಲಿ ರಾಜ್ಯದ ಪಾಲಿನ ನೀರಿನ ಪ್ರಮಾಣವನ್ನು 270 ಟಿಎಂಸಿಯಿಂದ 284.75 ಟಿಎಂಸಿ ಅಡಿಗೆ ಸುಪ್ರೀಂ ಹೆಚ್ಚಿಸಿತ್ತು. ಇದನ್ನೂ ಓದಿ: ಮದಹಾಯಿ ವಿವಾದದ ಬಗ್ಗೆ ಮೋದಿ ಹೇಳಿದ್ದು ಏನು?

https://youtu.be/30b9toC1Zo4

 

Share This Article
Leave a Comment

Leave a Reply

Your email address will not be published. Required fields are marked *