– ಭಾರತೀಯ ಉತ್ಪನ್ನಗಳ ಗುಣಮಟ್ಟ & ಬ್ರ್ಯಾಂಡ್ ಇಂಡಿಯಾವನ್ನು ಬಲಪಡಿಸುವ ಸಮಯ
– ಉತ್ತರ ವಸ್ತುಗಳನ್ನು ರಫ್ತು ಮಾಡಲು ಉತ್ಪಾದಕರಿಗೆ ಮೋದಿ ಕರೆ
ನವದೆಹಲಿ: ಭಾರತ-ಯುರೋಪಿಯನ್ ಯೂನಿಯನ್ (India-EU Trade Deal) ನಡುವೆ ಮುಕ್ತ ವಾಣಿಜ್ಯ ಒಪ್ಪಂದ ಜಾರಿಗೆ ಬಂದಿದ್ದು, ಇದು ‘ಆತ್ಮವಿಶ್ವಾಸಿ ಭಾರತಕ್ಕೆ ಮೈಲುಗಲ್ಲು’ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವರ್ಣಿಸಿದರು. ಭಾರತೀಯ ಉದ್ಯಮಗಳು ಈ ಅವಕಾಶವನ್ನು ಬಳಸಿಕೊಂಡು ಗುಣಮಟ್ಟದ ಉತ್ಪನ್ನಗಳನ್ನು ಯುರೋಪಿಯನ್ ಒಕ್ಕೂಟದ 27 ದೇಶಗಳಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ದಿನದಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹೊಸ ಮಾರುಕಟ್ಟೆ ತೆರೆದಿದ್ದು, ಭಾರತೀಯ ಉತ್ಪನ್ನಗಳ ಗುಣಮಟ್ಟ ಮತ್ತು ‘ಬ್ರ್ಯಾಂಡ್ ಇಂಡಿಯಾ’ವನ್ನು ಬಲಪಡಿಸುವ ಸಮಯ ಇದು ಎಂದರು. ಇದನ್ನೂ ಓದಿ: ಐರೋಪ್ಯ ಒಕ್ಕೂಟದ ಜೊತೆ ವ್ಯಾಪಾರ ಒಪ್ಪಂದ: ಭಾರತಕ್ಕೆ ಏನು ಅನುಕೂಲ?
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜಂಟಿ ಅಧಿವೇಶನದ ಭಾಷಣವನ್ನು ಉಲ್ಲೇಖಿಸಿದ ಅವರು, ಇದು 140 ಕೋಟಿ ಭಾರತೀಯರ ವಿಶ್ವಾಸ, ಸಂಕಲ್ಪ ಮತ್ತು ವಿಶೇಷವಾಗಿ ಯುವಕರ ಆಕಾಂಕ್ಷೆಗಳ ಪ್ರತಿಬಿಂಬ ಎಂದು ಹೇಳಿದರು.
ಭಾರತ ಈಗ ಸಮಸ್ಯೆಗಳನ್ನು ಬಿಡಿಸುವ ಕಾಲದಲ್ಲಿದೆ, ಅಡಚಣೆಗಳ ಕಾಲದಲ್ಲಿಲ್ಲ ಎಂದರು. ಇದು ಸಮಸ್ಯೆಗಳ ಕಾಲವಲ್ಲ, ಪರಿಹಾರಗಳ ಯುಗ, ವಿಘ್ನಗಳ ಬದಲು ಪರಿಹಾರಗಳು, ಅಡೆತಡೆಗಳ ಬದಲು ನಿರ್ಣಯಗಳ ಮೇಲೆ ಗಮನ ಹರಿಸಬೇಕು ಎಂದು ಸಂಸದರನ್ನು ಒತ್ತಾಯಿಸಿದರು. ಇದನ್ನೂ ಓದಿ: 1 ಒಪ್ಪಂದ, 27 ಯುರೋಪ್ ಮಾರುಕಟ್ಟೆಗಳು – ಕರ್ನಾಟಕಕ್ಕೆ ಏನು ಪ್ರಯೋಜನ?
ಈ ಸರ್ಕಾರವನ್ನು ‘ರಿಫಾರ್ಮ್, ಪರ್ಫಾರ್ಮ್ ಮತ್ತು ಟ್ರಾನ್ಸ್ಫಾರ್ಮ್’ ಎಂದು ಗುರುತಿಸಲಾಗಿದ್ದು, ಈಗ ಭಾರತ ‘ರಿಫಾರ್ಮ್ ಎಕ್ಸ್ಪ್ರೆಸ್’ನಲ್ಲಿ ಪ್ರಯಾಣಿಸುತ್ತಿದೆ. ಸರ್ಕಾರದ ಕಾರ್ಯವೈಖರಿಯು ಮಾನವ ಕೇಂದ್ರಿತವಾಗಿದ್ದು, ದೀರ್ಘಕಾಲೀನ ಪರಿಹಾರಗಳ ಕಡೆಗೆ ಚಲನೆ ನಡೆಯುತ್ತಿದೆ. 2026ರ ಭಾರತವು ವಿಶ್ವಕ್ಕೆ ಆಶಾಕಿರಣವಾಗಿದ್ದು, ಜಾಗತಿಕ ಗಮನದ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ ಎಂದು ಹೇಳಿದರು.


