ಪ್ರಧಾನಿ ಹೊಟ್ಟೆಯಿಂದ ಪ್ರಧಾನಿ ಹುಟ್ಟುತ್ತಿದ್ದ ವಂಶಾವಳಿ ಪದ್ಧತಿಯನ್ನು ನಾವು ಕಿತ್ತುಹಾಕಿದ್ದೇವೆ: ನಿತಿನ್ ಗಡ್ಕರಿ

Public TV
1 Min Read

ಹೈದರಾಬಾದ್: ಪ್ರಧಾನಿ ಹೊಟ್ಟೆಯಿಂದ ಪ್ರಧಾನಿ ಹುಟ್ಟುತ್ತಿದ್ದ ವಂಶವಾಹಿ ರಾಜಕಾರಣಾ ಪದ್ಧತಿಯನ್ನು ನಾವು ಕಿತ್ತುಹಾಕಿದ್ದೇವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ತೆಲಂಗಾಣ ರಾಜಧಾನಿಯ ಬಿಜೆಪಿ ಯುವ ಮೋರ್ಚಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗಿದ್ದಾಗಿನಿಂದ ಪ್ರಧಾನಿ ಹೊಟ್ಟೆಯಿಂದ ಪ್ರಧಾನಿಯ ಹುಟ್ಟು, ಮುಖ್ಯಮಂತ್ರಿಯ ಹೊಟ್ಟೆಯಿಂದ ಮುಖ್ಯಮಂತ್ರಿ ಹಾಗೂ ಸಂಸದನ ಹೊಟ್ಟೆಯಿಂದ ಸಂಸದ ಹುಟ್ಟುತ್ತಿದ್ದ ವಂಶವಾಹಿ ಪರಂಪರೆಯಿಂದ ಭಾರತದ ಪ್ರಜಾಪ್ರಭುತ್ವ ಇಲ್ಲವಾಗುವ ಹಂತಕ್ಕೆ ತಲುಪಿತ್ತು. ಆದರೆ ನಾವೀಗ ಅದನ್ನು ಕಿತ್ತುಹಾಕುವ ಮೂಲಕ ವಂಶ ರಾಜಕಾರಣಕ್ಕೆ ಅಂತ್ಯ ಹಾಡಿದ್ದೇವೆ ಎನ್ನುವ ಮೂಲಕ ವಂಶವಾಹಿ ರಾಜಕಾರಣವನ್ನು ಮುಂದುವರಿಸಿಕೊಂಡು ಬಂದಿದ್ದ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

ಬಿಜೆಪಿ ಪಕ್ಷವು ಯಾವುದೇ ಒಂದು ಪರಿವಾರಕ್ಕೆ ಸೇರಿಲ್ಲ. ಜಾತಿ, ಧರ್ಮ ಹಾಗೂ ಭಾಷೆಯ ಆಧಾರದ ಮೇಲೆ ರಾಜಕಾರಣ ನಡೆಸುವ ಪಕ್ಷ ನಮ್ಮದಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಎಂದೆಂದಿಗೂ ನಮ್ಮ ವರಿಷ್ಠ ನಾಯಕರು. ಅಲ್ಲದೇ ಎಲ್.ಕೆ.ಅಡ್ವಾಣಿಯವರು ಸಹ ನಮ್ಮ ವರಿಷ್ಠರೇ ಆದರೆ ಕೇವಲ ಅವರ ಹೆಸರಿನಿಂದ ನಮ್ಮ ಪಕ್ಷವನ್ನು ಯಾರು ಗುರುತಿಸಿಲ್ಲ. ಪ್ರಸ್ತುತ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅಮಿತ್ ಶಾ ರವರು ನೇಮಕಗೊಂಡಿದ್ದಾರೆ. ಆದರೆ ಇವುಗಳ ನೇತೃತ್ವ ಎಂದಿಗೂ ಬದಲಾಗುತ್ತಲೇ ಇರುತ್ತದೆ. ನಮ್ಮ ಪಕ್ಷ ಯಾವುದೇ ವ್ಯಕ್ತಿಯ ಹೆಸರಲ್ಲಿ ನಡೆಯುವುದಿಲ್ಲ. ನಮ್ಮ ಪಕ್ಷ ಕೇವಲ ಸಿದ್ಧಾಂತ ಮತ್ತು ಉದ್ದೇಶದ ಆಧಾರದ ಮೇಲೆ ನಡೆಯುತ್ತದೆ ಎಂದು ತಿಳಿಸಿದರು.

ಈ ಹಿಂದೆ ಸುಮಾರು 60 ವರ್ಷಗಳ ದೇಶವನ್ನಾಳಿದ ಕೆಲವರು ಕೇವಲ ತಮ್ಮ ಕುಟುಂಬವನ್ನು ಮಾತ್ರ ಉದ್ಧಾರ ಮಾಡಿಕೊಂಡರು ಎನ್ನುವ ಮೂಲಕ ಪರೋಕ್ಷವಾಗಿ ನೆಹರು ಹಾಗೂ ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *