ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಅವರು ಇದೀಗ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತನ್ನ ಬಳಿ ಬರಬೇಡಿ ಅಂತ ವಾಪಸ್ ಕಳುಹಿಸಿದ ಪ್ರಸಂಗವೊಂದು ನಡೆದಿದೆ.
ಪ್ಲೀಸ್ ನನ್ನ ಹತ್ರ ಬರಬೇಡಿ, ನಾನು ಫೈಲ್ ನೋಡಲ್ಲ. ನೀವು ಅವರ ಹತ್ರನೇ ಹೋಗಿ ಪ್ಲೀಸ್, ಅವರಿಗೆ ಹೇಳಿ. ಹೀಗೆ ಐಎಎಸ್ ಅಧಿಕಾರಿಗಳಿಗೆ ಪ್ಲೀಸ್ ಎಂದು ಹೇಳಿ ಇಲಾಖೆಯ ಫೈಲ್ಗಳನ್ನು ಸಚಿವ ಜಿ.ಟಿ ದೇವೇಗೌಡ ವಾಪಸ್ ಕಳುಹಿಸುತ್ತಿದ್ದಾರೆ.
ಐಎಎಸ್ ಅಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಜಿಟಿ ದೇವೇಗೌಡ ಅವರ ಬಳಿ ಹೋದ್ರೆ `ಅಯ್ಯೋ ನನ್ನ ಹತ್ರ ಏಕೆ ಬರ್ತಿರಾ? ಬರಬೇಡ್ರಾಪ್ಪ ನೀವು! ಎಂದು ಹೇಳಿ ಉನ್ನತ ಶಿಕ್ಷಣ ಇಲಾಖೆಯ ಕಡತಗಳನ್ನ ವಾಪಸ್ ಕಳಿಸುತ್ತಿದ್ದಾರೆ.
ನನಗೂ, ಈ ಖಾತೆಗೂ ಯಾವುದೇ ಸಂಬಂಧವೇ ಇಲ್ಲ, ನನಗೆ ಗೊತ್ತಿಲ್ಲ. ನೀವು ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರ ಹತ್ರನೇ ಹೋಗಿ, ಅವರಿಗೆ ಫೈಲ್ ತೋರಿಸಿ. ಸಿಎಂ ಕುಮಾರಣ್ಣ ಅವರೇ ಫೈಲ್ಗಳನ್ನ ಕ್ಲೀಯರ್ ಮಾಡ್ತಾರೆ, ನಾನು ಮಾಡಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಜಿಟಿಡಿ ತಿಳಿಸಿದ್ದಾರೆ.
ಸಚಿವ ಜಿಟಿಡಿ ಹೇಳಿಕೆಯಿಂದ ಇಲಾಖೆ ಅಧಿಕಾರಿಗಳು ಕಂಗಾಲಾಗಿದ್ದಾರೆ. ಅಧಿಕೃತವಾಗಿ ಇಲಾಖೆ ಸಚಿವ ಜಿ.ಟಿ.ದೇವೇಗೌಡರ ಬಳಿಯೇ ಇದೆ. ಶೈಕ್ಷಣಿಕ ವರ್ಷ ಆರಂಭವಾಗಿರೋದ್ರಿಂದ ಹಲವು ಕಡತಗಳು ಬಾಕಿ ಇವೆ. ಹಾಗಾದ್ರೆ ಆ ಫೈಲ್ಗಳನ್ನ ಕ್ಲೀಯರ್ ಮಾಡೋರು ಯಾರು? ಹೇಗೆ?. ಇವತ್ತಾದ್ರೂ ಜಿಟಿಡಿ ಅವರಿಗೆ ಹೊಸ ಖಾತೆ ಸಿಗುತ್ತಾ? ಉನ್ನತ ಶಿಕ್ಷಣ ಸಿಎಂಗೆ ಬರುತ್ತಾ? ಎಂಬುದು ಕಾದು ನೋಡಬೇಕಿದೆ.