ಪಡಿತರ ಅಕ್ಕಿಯಲ್ಲಿ ಮಿಕ್ಸ್ ಆಗ್ತಿದ್ಯಾ ಪ್ಲಾಸ್ಟಿಕ್ ಅಕ್ಕಿ..?

Public TV
2 Min Read

– ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ಲಾಸ್ಟಿಕ್ ಪಡಿತರ ಪತ್ತೆ

ಬೆಂಗಳೂರು: ಸರ್ಕಾರ ನೀಡ್ತಿರೋ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಕಂಡು ಬಂದಿದ್ದು, ಜನ ಆತಂಕಕ್ಕೀಡಾಗಿದ್ದಾರೆ. ಅಕ್ಕಿ ಖರೀದಿಸಿ ಮನೆಗೆ ಹೋಗಿ ಅನ್ನ ಸಾಂಬಾರ್ ಸವಿಯಲು ರೆಡಿಯಾಗಿದ್ದ ಕುಟುಂಬಗಳು ಪ್ಲಾಸ್ಟಿಕ್ ಅಕ್ಕಿ ಕಂಡು ಶಾಕ್ ಆಗಿದ್ದಾರೆ. ಈಗ ಪಡಿತರ ಅಕ್ಕಿ ಸಹವಾಸವೇ ಬೇಡ ಅಂತ ಖರೀದಿ ಮಾಡಿರೋ ಅಕ್ಕಿ ವಾಪಸ್ ತಂದುಕೊಡ್ತಿದ್ದಾರೆ.

ರಾಜ್ಯದಲ್ಲಿ ಮತ್ತೊಮ್ಮೆ ಪ್ಲಾಸ್ಟಿಕ್ ರೈಸ್ ಸಖತ್ ಸದ್ದು ಮಾಡ್ತಿದೆ. ಆದರೆ ಈ ಬಾರಿ ಚರ್ಚೆಗೆ ಗ್ರಾಸವಾಗಿರೋದು ಚೀನಾ ಮೇಡ್ ಪ್ಲಾಸ್ಟಿಕ್ ರೈಸ್ ಅಲ್ಲ. ಬದಲಾಗಿ ಪ್ಲಾಸ್ಟಿಕ್ ಪಡಿತರ. ರಾಜ್ಯ ಸರ್ಕಾರ ನ್ಯಾಯಬೆಲೆ ಅಂಗಡಿಗಳಲ್ಲಿ ನೀಡ್ತಿರೋ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಾದರಿಯ ವಸ್ತು ಪತ್ತೆಯಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ಮಾಡಿ ಕೊಡಲಾಗ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಆನೇಕಲ್‍ನ ಹಿನ್ನಕ್ಕಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತವಾಗಿ ವಿತರಿಸುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಪತ್ತೆಯಾಗಿದೆ. ಥೇಟ್ ಅಕ್ಕಿಯಂತೆ ಇದ್ದು ಸಾಮಾನ್ಯ ಅಕ್ಕಿಗಿಂತ ಸ್ವಲ್ಪ ದೊಡ್ಡ ಆಕಾರದಲ್ಲಿದೆ. ಅರ್ಧ ಕುದಿಸಿ ಆರಿಸಿದ ರೀತಿಯಲ್ಲಿದ್ದು ಜನ ಆತಂಕಕ್ಕೀಡಾಗಿದ್ದಾರೆ. ಆದರೆ ನ್ಯಾಯಬೆಲೆ ಅಂಗಡಿಯವರು ನಮಗೇನು ಗೊತ್ತಿಲ್ಲ ಅಂತಿದ್ದಾರೆ. ಇದನ್ನೂ ಓದಿ: RSS ಅನ್ನು ತಾಲಿಬಾನ್‍ಗೆ ಹೋಲಿಕೆ ಮಾಡಿದ್ರೆ ಕಾಂಗ್ರೆಸ್ ಐತಿಹಾಸವನ್ನು ತೆಗೆಯಬೇಕಾಗುತ್ತೆ: ಮುತಾಲಿಕ್

ಕೋಲಾರದ ಮುಳಬಾಗಿಲು ತಾಲೂಕಿನ ಕೀಲಗಾಣಿ, ಊರುಕುಂಟೆ, ಮಿಟ್ಟೂರು ಗ್ರಾಮದ ಜನ ಕೂಡ ಇದೇ ಆರೋಪ ಮಾಡಿದ್ದಾರೆ. ಪಡಿತರ ಅಕ್ಕಿಯನ್ನು ನೀರಿಗೆ ಹಾಕಿದಾಗ ಅಕ್ಕಿ ತೇಲುತ್ತಿತ್ತು. ಬೇಯಿಸಿದಾಗ ಕರಗಿ ಹೋಗಿದೆ ಅಂತ ಆರೋಪಿಸಿದ್ದಾರೆ. ಅತ್ತ ಹಾಸನದ ಸಕಲೇಶಪುರದ ಬೆಳಗೋಡಿನಲ್ಲೂ ಇದೇ ಆರೋಪ. ಬೇಲೂರಿನ ಟಿಎಪಿಸಿಎಂಎಸ್ ನ್ಯಾಯಬೆಲೆ ಅಂಗಡಿಯಲ್ಲಿ ಮಲ್ಲಿಕ್ ಅನ್ನೋರು 40 ಕೆಜಿ ಅಕ್ಕಿ ಪಡೆದಿದ್ದರು. ಅದರಲ್ಲಿ 10 ಕೆಜಿ ಅಕ್ಕಿಯನ್ನು ಹಿಟ್ಟು ಮಾಡಿಸಿದ್ದಾರೆ. ಈ ವೇಳೆ ಅಕ್ಕಿ ಹಿಟ್ಟಿನಲ್ಲಿ ಪ್ಲಾಸ್ಟಿಕ್ ಅಂಶ ಪತ್ತೆ ಆಗಿದೆ ಅಂತ ಮಲ್ಲಿಕ್ ಸೀದಾ ಪಡಿತರ ಅಂಗಡಿಗೆ ತೋರಿಸಿದ್ದಾರೆ. ಆದರೆ ಆಹಾರ ಶಿರಸ್ತೇದಾರ್ ಮಂಜುನಾಥ್ ಮಾತ್ರ, ಗಿರಣಿಯಲ್ಲಿ ತಾಂತ್ರಿಕ ದೋಷದಿಂದಾಗಿ ಹಿಟ್ಟು ಸರಿಯಾಗಿ ಬಂದಿಲ್ಲ. ಇದನ್ನೇ ಪ್ಲಾಸ್ಟಿಕ್ ಅಕ್ಕಿ ಅಂತ ತಪ್ಪಾಗಿ ತಿಳಿದುಕೊಂಡಿದ್ದಾರೆ ಅಂದಿದ್ದಾರೆ.

ದಾವಣಗೆರೆಯ ಹರಿಹರ ತಾಲೂಕಿನ ಬೆಳ್ಳೂಡಿಯಲ್ಲಿ ಮಕ್ಕಳಿಗೆ ಸರ್ಕಾರ ವಿತರಿಸುವ ಅಕ್ಕಿಯಲ್ಲೂ ಪ್ಲಾಸ್ಟಿಕ್ ಅಕ್ಕಿ ಇದೆ ಅನ್ನೋದು ಆರೋಪ ಕೇಳಿ ಬಂದಿದೆ. ಒಟ್ಟಿನಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲಾಗುತ್ತಿರುವ ಅಕ್ಕಿ ಸದಾ ಒಂದಿಲ್ಲ ಒಂದು ಸುದ್ದಿಯಲ್ಲಿ ಇದ್ದೇ ಇರುತ್ತದೆ. ಸದ್ಯಕ್ಕೆ ಈ ಅಕ್ಕಿ ಪ್ಲಾಸ್ಟಿಕ್ ಅಕ್ಕಿ ಅಥವಾ ಏನು ಎಂಬುದರ ಬಗ್ಗೆ ಅಧಿಕಾರಿಗಳು ಈ ಅಕ್ಕಿಯನ್ನ ಲ್ಯಾಬ್ಗೆ ಕಳುಹಿಸಿ ವರದಿ ಬಂದ ನಂತರ ಅಷ್ಟೇ ಇದು ಯಾವ ರೀತಿಯ ಅಕ್ಕಿ ಎಂಬುದು ತಿಳಿದುಬರಲಿದೆ. ಸರ್ಕಾರ ಉಚಿತವಾಗಿ ನೀಡುವ ಅಕ್ಕಿಯಲ್ಲಿ ಹೇಗೆ ಕಲಬೆರೆಕೆ ಆಯ್ತು ಅನ್ನೋದು ಸ್ಥಳೀಯರ ಪ್ರಶ್ನೆ ಯಾಗಿದ್ದು, ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳೇ ಉತ್ತರವನ್ನ ನೀಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *