ಶಿವ ದೇವಾಲಯದ ಮೇಲೆ ಅಜ್ಮೀರ್‌ ದರ್ಗಾ ನಿರ್ಮಾಣ – ಕೋರ್ಟ್‌ ನೋಟಿಸ್‌

Public TV
1 Min Read

– ದೇವಸ್ಥಾನದ ಕುರುಹು ಇರೋ ಜಾಗದಲ್ಲಿ ಮತ್ತೆ ಪೂಜೆಗೆ ಅವಕಾಶ ಕೋರಿ ಅರ್ಜಿ

ಜೈಪುರ: ಶಿವ ದೇವಾಲಯದ (Shiva Temple) ಮೇಲೆ ಅಜ್ಮೀರ್‌ ದರ್ಗಾ ನಿರ್ಮಿಸಲಾಗಿದೆ ಎಂದು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಅಜ್ಮೀರ್‌ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರ ದರ್ಗಾದಲ್ಲಿ ಶಿವ ದೇವಾಲಯವಿದೆ ಎಂದು ಅರ್ಜಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಅಜ್ಮೀರ್‌ನ ನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ. ಸೆಪ್ಟೆಂಬರ್‌ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ಮತ್ತೆ ಸ್ಥಳದಲ್ಲಿ ಪೂಜೆಗೆ ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಲಾಗಿದೆ. ಇದನ್ನೂ ಓದಿ: ಸಂಸತ್‌ನಲ್ಲಿ ಅಮ್ಮ-ಅಣ್ಣ-ತಂಗಿ; ಇಂದು ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ ಸ್ವೀಕಾರ

ಸಿವಿಲ್ ನ್ಯಾಯಾಧೀಶ ಮನಮೋಹನ್ ಚಾಂಡೆಲ್ ಅವರು ಅಜ್ಮೀರ್ ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಕಚೇರಿಗೆ ಪ್ರತಿಕ್ರಿಯೆ ಕೋರಿ ನೋಟಿಸ್‌ಗೆ ಆದೇಶಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಯೋಗೇಶ್ ಸಿರೋಜಾ ತಿಳಿಸಿದ್ದಾರೆ.

ವಾರಣಾಸಿ, ಮಥುರಾ ಮತ್ತು ಧಾರ್‌ನಲ್ಲಿರುವ ಭೋಜಶಾಲಾ ಸೇರಿದಂತೆ ದೇಶದಾದ್ಯಂತದ ಪ್ರಮುಖ ದೇಗುಲಗಳಿಗೆ ಇದೇ ರೀತಿಯ ಆರೋಪ ಮಾಡಲಾಗಿದೆ. ಇದನ್ನೂ ಓದಿ: ಮೀಸಲಾತಿ ಲಾಭಕ್ಕಾಗಿ ಮರು ಮತಾಂತರ ಆಗೋದು ಸಂವಿಧಾನಕ್ಕೆ ಮಾಡುವ ವಂಚನೆ: ಸುಪ್ರೀಂ

ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಮಸೀದಿ ಸಮೀಕ್ಷೆಗೆ ವಿರೋಧಿಸಿ ಈಚೆಗೆ ಘರ್ಷಣೆ ನಡೆಯಿತು. ಸ್ಥಳೀಯ ನ್ಯಾಯಾಲಯ ಮಸೀದಿ ಸಮೀಕ್ಷೆಗೆ ಆದೇಶಿಸಿತ್ತು. ಸರ್ವೇ ತಂಡ ಆಗಮಿಸುತ್ತಿದ್ದಂತೆ ಜನರು ವಿರೋಧಿಸಿದರು. ಈ ವೇಳೆ ಪೊಲೀಸರು ಮತ್ತು ಗುಂಪಿನ ನಡುವೆ ಘರ್ಷಣೆ ನಡೆಯಿತು. ಘರ್ಷಣೆಗೆ ನಾಲ್ವರು ಬಲಿಯಾಗಿದ್ದಾರೆ. ಹಳೆಯ ದೇವಸ್ಥಾನವನ್ನು ಧ್ವಂಸಗೊಳಿಸಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಅಜ್ಮೀರ್ ಷರೀಫ್ ಅವರ ಪ್ರಕರಣದಲ್ಲಿ ಅರ್ಜಿದಾರರಾಗಿರುವ ಬಲಪಂಥೀಯ ಗುಂಪು ಹಿಂದೂ ಸೇನೆಯ ಮುಖ್ಯಸ್ಥ ವಿಷ್ಣು ಗುಪ್ತಾ, ಅಜ್ಮೀರ್ ದರ್ಗಾವನ್ನು (Ajmer Dargah) ಸಂಕಷ್ಟ ಮೋಚನ್ ಮಹಾದೇವ ದೇವಾಲಯ ಎಂದು ಘೋಷಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು ಎಂದಿದ್ದರು.

Share This Article