ಪ್ರೀತಿಸಿ ಮದ್ವೆಯಾದ ಪತ್ನಿಯ ಗುಪ್ತಾಂಗವನ್ನು ಇಸ್ತ್ರಿಪೆಟ್ಟಿಗೆಯಿಂದ ಸುಟ್ಟ ಕಿರಾತಕ

Public TV
1 Min Read

ತುಮಕೂರು: ವ್ಯಕ್ತಿಯೊಬ್ಬ ಪ್ರೀತಿಸಿ ಮದುವೆಯಾಗಿ, ಪತ್ನಿಯ ಕೈಕಾಲು ಕಟ್ಟಿ ಆಕೆಯ ಗುಪ್ತಾಂಗವನ್ನು ಇಸ್ತ್ರಿಪೆಟ್ಟಿಗೆಯಿಂದ ಸುಟ್ಟಿರುವ ಹೀನ ಕೃತ್ಯ ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.

ಆರೋಪಿ ರಂಗನಾಥ್ ಪ್ರೀತಿಯ ನಾಟಕವಾಡಿ ಯುವತಿಗೆ ಮೋಸ ಮಾಡಿ ಈ ಹೀನ ಕೃತ್ಯ ಎಸಗಿದ್ದಾನೆ. ಆರೋಪಿ ಖಾಸಗಿ ಬಸ್ ಡ್ರೈವರ್ ಆಗಿದ್ದು, ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ ಮಾಡಿರುವ ಮಂಜುಳಾನನ್ನು ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದ.

ಮಂಜುಳಾ ಪದವಿ ಓದುವ ವೇಳೆ ಪ್ರವಾಸಕ್ಕೆ ಹೋಗಿದ್ದಾಗ ಚಾಲಕ ರಂಗನಾಥ ಆಕೆಗೆ ಪ್ರಪೋಸ್ ಮಾಡಿ ಪ್ರೀತಿಯ ನಾಟಕವಾಡಿದ್ದಾನೆ. ಆಕೆಯನ್ನ ನಂಬಿಸಿ ದೈಹಿಕ ಸಂಪರ್ಕ ಕೂಡ ಬೆಳೆಸಿ ಗರ್ಭವತಿಯನ್ನಾಗಿ ಮಾಡಿದ್ದಾನೆ. ಈಗಾಗಲೇ ತನಗೆ ಮದುವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು ಈ ರೀತಿ ಪ್ರೀತಿಯ ನಾಟಕವಾಡಿದ್ದಾನೆ. ಸಂತ್ರಸ್ತೆ ಮಂಜುಳಾ ನನ್ನನ್ನು ಮದುವೆಯಾಗು ಅಂದಾಗಲೆಲ್ಲಾ ಉಲ್ಟಾ ಹೊಡೆಯುತ್ತಿದ್ದ ರಂಗನಾಥನ ವಿರುದ್ಧ ಮಂಜುಳಾ ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದರು.

ಇದರಿಂದ ಭಯಗೊಂಡ ರಂಗನಾಥ ಮೊದಲ ಪತ್ನಿ ಒಪ್ಪಿಗೆ ಪಡೆದು ಮಂಜುಳಾರನ್ನು ಮದುವೆಯಾಗಿದ್ದ. ಇಬ್ಬರು ಹೆಂಡತಿಯರ ಜೊತೆ ಒಂದೇ ಮನೆಯಲ್ಲಿ ಸಂಸಾರ ಕೂಡ ನಡೆಸುತ್ತೇನೆ ಎಂದು ಹೇಳಿ ಮದುವೆ ಮಾಡಿಕೊಂಡಿದ್ದ. ಆದರೆ ಮದುವೆಯಾದ ಬಳಿಕ ರಾಕ್ಷಸನಾಗಿ ಕೆಲ ದಿನಗಳ ಬಳಿಕ ಮಂಜುಳಾಗೆ ಟಾರ್ಚರ್ ಕೊಡಲು ಶುರುಮಾಡಿದ್ದಾನೆ. ಆಕೆಯ ಕೈ, ಕಾಲು ಕಟ್ಟಿ ಗುಪ್ತಾಂಗಕ್ಕೆ ಇಸ್ತ್ರಿಪೆಟ್ಟಿಗೆ ಇಟ್ಟು ಚಿತ್ರಹಿಂಸೆ ಕೊಟ್ಟಿದ್ದಾನೆ.

ತವರು ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ತಪ್ಪಿಗೆ ಮಂಜುಳಾ ಪರಿತಪಿಸುತ್ತಿದ್ದು, ಪತಿಯ ಚಿತ್ರಹಿಂಸೆಯನ್ನು ತಾಳಲಾಗದೆ ನೊಂದು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *