ಆಟೋಗೆ ಬೈಕ್ ಟಚ್ ಆಗಿದ್ದಕ್ಕೆ ಜಗಳ- ವ್ಯಕ್ತಿಯನ್ನ ಕೊಚ್ಚಿ ಕೊಂದೇಬಿಟ್ರು

Public TV
1 Min Read

– ದೀಪಾವಳಿ ಅಮಾವಾಸ್ಯೆಗೆ ಬೆಂಗ್ಳೂರಲ್ಲಿ 7 ಸಾವು
– ಪಟಾಕಿ ಸಿಡಿತಕ್ಕೆ 30ಕ್ಕೂ ಹೆಚ್ಚು ಮಕ್ಕಳಿಗೆ ಗಾಯ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೆಜಿ ಹಳ್ಳಿ ನಿವಾಸಿ ಸೈಯದ್ ಯೂಸುಫ್‍ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಗುರುವಾರ ರಾತ್ರಿ ಯೂಸಫ್ ಕೆಲಸ ಮುಗಿಸಿ ಮನೆಗೆ ಹೋಗಿದ್ದಾರೆ. ಮತ್ತೆ ಟೀ ಕುಡಿಯಲೆಂದು ಮನೆಯಿಂದ ಆಚೆ ಬಂದಾಗ ಅವರ ಬೈಕ್ ರೌಡಿಶೀಟರ್ ಚಪ್ಡಿ ನದೀಮ್ ಆಟೋಗೆ ಟಚ್ ಆಗಿದೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದ್ರಿಂದ ಕೋಪಗೊಂಡ ನದೀಮ್ ಮತ್ತೆ ತನ್ನ ಗ್ಯಾಂಗ್ ಜೊತೆ ಬಂದು ಮಚ್ಚು ಲಾಂಗ್‍ಗಳಿಂದ ಯೂಸುಫ್ ಮೇಲೆ ಬರ್ಬರವಾಗಿ ಹಲ್ಲೆ ಮಾಡಿದ್ದಾರೆ. ಎಷ್ಟೇ ಅಂಗಲಾಚಿದ್ರು ಬಿಡದೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಯೂಸುಫ್ ಅವರನ್ನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಕೆಜಿ ಹಳ್ಳಿ ಪೊಲೀಸರು ರೌಡಿಶೀಟರ್ ನದೀಮ್ ಹಾಗೂ ಆತನ ಗ್ಯಾಂಗ್‍ನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಯೂಸುಫ್ ಕೊಲೆ ಸೇರಿದಂತೆ ದೀಪಾವಳಿ ಅಮವಾಸ್ಯೆಗೆ ಗುರುವಾರ ಒಂದೇ ದಿನಕ್ಕೆ ಬೆಂಗಳೂರಿನಲ್ಲಿ 7ಕ್ಕೂ ಹೆಚ್ಚು ಸಾವು ನೋವು ಸಂಭವಿಸಿದೆ. ನೆಲಮಂಗಲದಲ್ಲಿ ಭೀಕರ ಅಪಘಾತಕ್ಕೆ ಐವರು ಬಲಿಯಾಗಿದ್ದಾರೆ. ಉತ್ನಳ್ಳಿಯಲ್ಲಿ ಯುವಕನ ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ಬಾಲಕಿ ಸಾವನ್ನಪ್ಪಿದ್ದಾಳೆ.

ಶಿವಾಜಿನಗರ ರಸ್ತೆಯಲ್ಲಿ ಹೋಗುತ್ತಿದ್ದ ಯುವಕನಿಗೆ ಯಾರೋ ಹಚ್ಚಿದ್ದ ಪಟಾಕಿ ಸಿಡಿದು ಎಡಗಣ್ಣಿಗೆ ಗಾಯವಾಗಿದೆ. ಕೆಂಗೇರಿ ಜ್ಞಾನಭಾರತಿ ವಾರ್ಡ್ ನಿವಾಸಿ 9 ವರ್ಷದ ಸಮರ್ಥ್ ಮರಳಿನಲ್ಲಿ ಲಕ್ಷ್ಮಿ ಪಟಾಕಿ ಇಟ್ಟು ಸುಡುತ್ತಿದ್ದ. ಈ ವೇಳೆ ಪಟಾಕಿ ಸಿಡಿದು ಮರಳು ಮುಖಕ್ಕೆ ರಾಚಿ ಮುಖದ ತುಂಬಾ ಗಾಯಗಳಾಗಿವೆ. ಸದ್ಯ ಇಬ್ಬರಿಗೂ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರ ಮೂವರು, ಗುರುವಾರ 15 ಮಕ್ಕಳು ಅಡ್ಮಿಟ್ ಆಗಿದ್ದರು. ರಾತ್ರಿ ಮತ್ತಿಬ್ಬರು ಆಸ್ಪತ್ರೆ ಸೇರಿದ್ದಾರೆ. ಇನ್ನು ರಾಜ್ಯಾದ್ಯಂತ ಪಟಾಕಿ ಸಿಡಿದು 30ಕ್ಕೂ ಹೆಚ್ಚು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *