ಮಹಾರಾಷ್ಟ್ರದಲ್ಲಿ ಹೆಚ್ಚಿದ ಮಳೆ, ಮೈತುಂಬಿ ಹರಿಯುತ್ತಿರುವ ಕೃಷ್ಣೆ – ಸಂಚಾರಕ್ಕೆ ನದಿ ತೀರದ ಜನರಿಗೆ ದೋಣಿಯೇ ಆಸರೆ

Public TV
1 Min Read

ಬಾಗಲಕೋಟೆ: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ವರುಣ ರೌದ್ರಾವಾತಾರ ತೋರುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೃಷ್ಣಾ ನದಿ ಮೈತುಂಬಿ ಹರಿಯುತ್ತಿದೆ. ಆದ್ದರಿಂದ ನದಿ ತೀರದ ಗ್ರಾಮಸ್ಥರ ಸಂಚಾರಕ್ಕೆ ದೋಣಿ ಪ್ರಯಾಣ ಶುರವಾಗಿದೆ.

ರಣ ಬಿಸಿಲಿಗೆ ಬರಿದಾಗಿದ್ದ ಕೃಷ್ಣಾ ನದಿಗೆ ಈಗ ಜೀವ ಬಂದಿದೆ. ರಾಜ್ಯದಲ್ಲಿ ಹೇಳುವಷ್ಟರ ಮಟ್ಟಿಗೆ ಮಳೆ ಬಾರದಿದ್ದರೂ ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಆಗುತ್ತಿದೆ. ಆದ್ದರಿಂದ ಮುಂಬೈ ನಗರ ಜಲಾವೃತಗೊಂಡಿದ್ದು ಜನಜೀವನ ಅಸ್ಥವ್ಯಸ್ತಗೊಂಡಿದೆ. ಆದರೆ ಮಹಾರಾಷ್ಟ್ರದಲ್ಲಿ ಆಗುತ್ತಿರುವ ಮಳೆಗೆ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆ ನದಿ ತೀರದ ಗ್ರಾಮಗಳ ನಡುವೆ ಸಂಪರ್ಕಕ್ಕಾಗಿ ಜನರು ದೋಣಿಯಾನ ಮಾಡುವಂತಾಗಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮಹಿಷವಾಡಗಿ ಹಾಗೂ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ಪಟ್ಟಣಕ್ಕೆ ಹೋಗಬೇಕೆಂದರೆ ದೋಣಿಯಲ್ಲೇ ಸಾಗಬೇಕು. ದೋಣಿಯಲ್ಲಿ ಬೈಕ್ ಇಟ್ಟುಕೊಂಡು ಜನರು ಒಂದು ದಡದಿಂದ ಇನ್ನೊಂದು ದಡಕ್ಕೆ ಹೋಗುತ್ತಿದ್ದಾರೆ.

ವ್ಯಾಪಾರಸ್ಥರು, ಸಂತೆಗೆ ಹೊರಡುವವರು, ರೈತರು ಎಲ್ಲರಿಗೂ ಸಂಚಾರಕ್ಕೆ ದೋಣಿಯೇ ಆಸರೆಯಾಗಿದೆ. ಸ್ವಲ್ಪ ಆಯ ತಪ್ಪಿದರೂ ನದಿಪಾಲಾಗುವ ಸಾಧ್ಯತೆ ಇರುವುದರಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಜನ ದೋಣಿಯಲ್ಲಿ ಸಂಚರಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *