ಭೀಕರ ಬರದ ಮಧ್ಯೆಯೂ ಹೊಲದಲ್ಲಿ ಒಂದೆರಡು ಅಡಿ ಅಗೆದರೂ ಜಿನುಗುತ್ತಿದೆ ನೀರು!

Public TV
1 Min Read

ಕೊಪ್ಪಳ: ಸತತ 3 ವರ್ಷಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಮಳೆ ಕೊರತೆ ಉಂಟಾಗಿದ್ದರಿಂದ ನೂರಾರು ಅಡಿ ಆಳ ಕೊರೆದ ಕೊಳವೆ ಬಾವಿಗಳೇ ವಿಫಲವಾಗಿವೆ. ಹಳ್ಳ-ಕೊಳ್ಳ, ಕೆರೆ-ಬಾವಿಯಲ್ಲಂತೂ ಪಕ್ಷಿಗಳು ಕುಡಿಯಲೂ ನೀರಿಲ್ಲ. ಬಿರು ಬಿಸಿಲಿಗೆ ಭೂಮಿ ಬಿರಿದು ಬಾಯ್ದೆರೆದು ನಿಂತಿದೆ. ಇಂಥ ಭೀಕರ ಸ್ಥಿತಿಯಲ್ಲೂ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಗೋಡಿನಾಳ ಗ್ರಾಮವೊಂದರ ಹೊಲದಲ್ಲಿ ಕೈಯಿಂದ ಒಂದೆರಡು ಅಡಿ ಅಗೆದರೂ ನೀರು ಜಿನುಗುತ್ತಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಇದನ್ನು ಕೆಲವರು ಪವಾಡ ಎಂದು ಅರ್ಥೈಸುತ್ತಿದ್ದರೆ, ಇನ್ನೂ ಹಲವರು ಪ್ರಕೃತಿಯ ವಿಸ್ಮಯದಲ್ಲೊಂದು ಎಂದು ವೈಜ್ಞಾನಿಕ ಕಾರಣ ನೀಡುತ್ತಿದ್ದಾರೆ. ಗೋಡಿನಾಳ ಗ್ರಾಮದ ಸರ್ವೆ ನಂಬರ್ 149ರಲ್ಲಿನ ಜಂಬಣ್ಣ ಕನಕಗಿರಿ ಮತ್ತು ಕನಕರಾಯ ಕನಕಗಿರಿ ಎಂಬವರ ಜಮೀನಿನ ತುಂಬ ಕೈಯಿಂದ ಒಂದೆರಡು ಅಡಿ ತೋಡಿದರೂ ನೀರು ಜಿನುಗಿ ಒರತೆ ಸೃಷ್ಠಿಯಾಗುತ್ತಿದೆ. ಭೀಕರ ಬರದಲ್ಲೂ ಭೂಮಿ ಅಗೆದಲ್ಲೆಲ್ಲ ನೀರು ಬರುತ್ತಿರುವ ವಿಸ್ಮಯ ನೋಡಲು ಸಾವಿರಾರು ಜನ ಜಮೀನಿನ ಕಡೆ ದಾಂಗುಡಿ ಇಟ್ಟಿದ್ದಾರೆ.

ಇತ್ತೀಚೆಗೆ ನಟ ಯಶ್ ನೇತೃತ್ವದ ಯಶೋಮಾರ್ಗ ಫೌಂಡೇಷನ್‍ನಿಂದ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯಲ್ಲಿ ಹೂಳು ತೆಗೆಯುವಾಗ ನೀರು ಜಿನುಗಿದ್ದು ವರದಿಯಾಗಿತ್ತು. ಆದರೆ ಸದ್ಯ ನೀರು ಬರುತ್ತಿರುವ ಜಮೀನು ಮೆಲ್ಭಾಗದಲ್ಲಿದೆ. ಯಾವುದೇ ಬೋರ್‍ವೆಲ್ ಪೈಪ್‍ಲೈನ್‍ಗಳೂ ಇಲ್ಲಿ ಹಾಯ್ದು ಹೋಗಿಲ್ಲ. ಇನ್ನು ಈ ಜಮೀನಿನ ಸುತ್ತಲೂ ಯಾವುದೇ ಹಳ್ಳ-ಕೊಳ್ಳ, ಕೆರೆ-ಬಾವಿಗಳಿಲ್ಲ. ಕೆರೆ-ಕುಂಟೆ ಅಥವಾ ಯಾವುದೇ ಜಲ ಮೂಲ ಇಲ್ಲ. ಆದ್ದರಿಂದ ಸಾರ್ವಜನಿಕರು ಇದನ್ನು ಪವಾಡ ಎಂದು ಅರ್ಥೈಸುತ್ತಿದ್ದಾರೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಯಶೋಮಾರ್ಗದ ಫಲ- ಬತ್ತಿ ಹೋಗಿದ್ದ ಕೆರೆಯಲ್ಲಿ ಉಕ್ಕುತ್ತಿದೆ ಜೀವ ಜಲ

Share This Article
Leave a Comment

Leave a Reply

Your email address will not be published. Required fields are marked *