ಹೂತು ಹೋಗಿರುವ ವಸ್ತುಗಳಿಗಾಗಿ ಈಗಲೂ ಹುಡುಕಾಡುತ್ತಿದ್ದಾರೆ ಕೊಡಗಿನ ಜನತೆ!

Public TV
1 Min Read

ಮಡಿಕೇರಿ: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ನೂರಾರು ಕುಟುಂಬಗಳು ಇಂದಿಗೂ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿವೆ. ಮಹಾಮಳೆಗೆ ಕುಸಿದ ಬೆಟ್ಟದ ಮಣ್ಣಿನ ರಾಶಿಯಡಿ ಸಿಲುಕಿಕೊಂಡ ಮನೆಗಳ ಅವಶೇಷಗಳಡಿಯಲ್ಲಿ ಹೂತು ಹೋಗಿರುವ ವಸ್ತುಗಳಿಗಾಗಿ ಹುಡುಕಾಟ ನಡೆಯುತ್ತಲೇ ಇದೆ.

ಮಡಿಕೇರಿ ತಾಲೂಕಿನ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ಆಗಸ್ಟ್ 16ರ ಬೆಳಿಗ್ಗೆ 7.45 ಗಂಟೆಗೆ ಜಲಸ್ಫೋಟದೊಂದಿಗೆ ಭಾರೀ ಬೆಟ್ಟ ಕುಸಿದು ಮನೆಯೊಂದರ ಮೇಲೆ ಬಿದ್ದ ಪರಿಣಾಮ ಮನೆಯೊಳಗಿದ್ದ ವೃದ್ಧೆಯೊಬ್ಬರು ಭೂ ಸಮಾಧಿಯಾಗಿದ್ದರು. ಇದೇ ಮನೆಯೊಳಗಿದ್ದ ಗಣಪತಿ ಮತ್ತವರ ಕುಟುಂಬ ಸದಸ್ಯರು ಪವಾಡದ ರೀತಿಯಲ್ಲಿ ಜೀವ ಉಳಿಸಿಕೊಂಡಿದ್ದರು.

ಕಣ್ಣೇದುರೇ ಹೂತು ಹೋದ ಹೆತ್ತಾಕೆಯನ್ನು ಹೊರಗೆಳೆಯಲು 40 ಅಡಿ ಎತ್ತರದ ಕೆಸರಿನ ಪ್ರವಾಹ ಬಿಡಲಿಲ್ಲ. ನೀರು ಪಾಲಾದ ಸ್ಥಿತಿಯಲ್ಲಿದ್ದ 2 ಕ್ವಿಂಟಾಲ್ ಕರಿಮೆಣಸು, ಹರಿದ ಬಟ್ಟೆಗಳು, ಮುರಿದ ಮಂಚ, ಕೆಸರು ಮೆತ್ತಿಕೊಂಡ ಕೆಲವು ದಾಖಲೆಗಳು ಸಿಕ್ಕಿದ್ದವು.

ಶೋಧ ಮುಂದುವರಿಸುತ್ತಿದ್ದಂತೆಯೇ ಅಮ್ಮವ್ವ ಅವರ 1 ಚಿನ್ನದ ಉಂಗುರ, 1 ಜೊತೆ ಓಲೆ, ತಿಂಗಳ ಖರ್ಚಿಗೆಂದು ಮನೆಯಲ್ಲಿಟ್ಟದ್ದ 10 ಸಾವಿರ ರೂ. ನಗದು ಕೆಸರು ಮೆತ್ತಿದ ಸ್ಥಿತಿಯಲ್ಲಿ ಮಣ್ಣಿನಡಿಯಲ್ಲಿ ಪತ್ತೆಯಾದವು. ಮತ್ತಷ್ಟು ಹುಡುಕಿದಾಗ ಕೊಡವ ಸಂಪ್ರದಾಯದ ತೆಂಗಿನ ಎಣ್ಣೆಯ 2 ಬಟ್ಟಲು, ಮುರಿದು ತುಂಡರಿಸಲ್ಪಟ್ಟ ಸ್ಥಿತಿಯಲ್ಲಿದ್ದ ಜೋಡಿ ನಳಿಕೆಯ 1 ಜಮ್ಮಾ ಬಂದೂಕು, ಅಡುಗೆ ಸಿಲಿಂಡರ್ ಮತ್ತು ಬೆಳ್ಳಿಯ ಪೀಚೆಕತ್ತಿ ಸಿಕ್ಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *