ಶುಕ್ಲಾಂಬರಧರಂ ಶ್ಲೋಕ ಹೇಳಿ ಕಾಫಿ ಪ್ರಿಯರ ಕಾಲೆಳೆದ ಪೇಜಾವರ ಶ್ರೀಗಳು

Public TV
2 Min Read

ಉಡುಪಿ: ಪೇಜಾವರ ಶ್ರೀ ಧಾರ್ಮಿಕ ಪ್ರವಚನ ಮಾಡುತ್ತಾರೆ. ಅಗತ್ಯ ಬಿದ್ದಾಗ ಪ್ರಸಕ್ತ ರಾಜಕೀಯಕ್ಕೆ ಸಂಬಂಧಿಸಿದ ಹೇಳಿಕೆಗಳನ್ನು ಕೊಟ್ಟು ಕೆಲವೊಮ್ಮೆ ಚರ್ಚೆಗೆ ಗ್ರಾಸವಾಗುತ್ತಾರೆ. ಆದರೆ ಕಾಫಿ ಬಗ್ಗೆ ಶ್ರೀಗಳು ಪಾಠ ಮಾಡಿದ್ದು, ಕಾಫಿ ಎಂದರೆ ಏನು ಎಂದು ತಿಳಿಸಿಕೊಟ್ಟಿದ್ದಾರೆ.

ಹೌದು. ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಪಲಿಮಾರು ಸ್ವಾಮೀಜಿ ದೇಸಿ ಗೋವು ಸಮ್ಮೇಳನ ಆಯೋಜಿಸಲಾಗಿತ್ತು. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಶ್ರೀಗಳು ಕಾಫಿ ಪ್ರಿಯರಿಗೆ ಮಾತಿನೇಟು ಕೊಟ್ಟಿದ್ದಾರೆ. ಶುಕ್ಲಾಂಬರಧರಂ ವಿಷ್ಣುಂ ಶಶಿ ವರ್ಣಂ  ಚತುರ್ಭುಜಂ ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇತ್ ಶ್ಲೋಕವನ್ನು ಮಾತಿಗೆತ್ತಿಕೊಂಡ ಶ್ರೀಗಳು ಕಾಫಿ ಪ್ರಿಯರ ಕಾಲೆಳೆದರು. ಇದನ್ನೂ ಓದಿ:ಗೋಮಾಂಸ ತಿನ್ನುವವರು ರಾಕ್ಷಸ ಸಮಾನ: ಪೇಜಾವರ ಶ್ರೀ

ಈ ಕಾಫಿ ವಿಚಾರದಲ್ಲಿ ಶ್ರೀಗಳು ಆಡಿದ ಮಾತು ನೂರಾರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದಲ್ಲದೆ, ಕಾಫಿ ಪ್ರಿಯರನ್ನು ಚಿಂತೆಗೀಡು ಮಾಡಿತು.

ಶ್ಲೋಕವನ್ನು ವಿವರಿಸಿ, ಕಾಫಿ ವಿಷ್ಣುವಿನಂತೆ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಶುಕ್ಲಾಂ ಅಂದ್ರೆ ಹಾಲು, ಕಾಫಿ ಹುಡಿ ಸೇರಿದರೆ ಹಾಲು ಚಂದ್ರನ ಬಣ್ಣವಾಗಿ ಬದಲಾಗುತ್ತದೆ. ಕಾಫಿ ಕೊಡುವ ಎರಡು ಕೈ, ಕಾಫಿ ತೆಗೆದುಕೊಳ್ಳುವ ಎರಡು ಕೈ ಸೇರಿದರೆ ಚತುರ್ಭುಜಂ  ಆಗುತ್ತದೆ. ಕಾಫಿ ಕುಡಿದ ಬಳಿಕ ಮನಸ್ಸು, ಮುಖ ಅರಳಿಸುತ್ತೇವೆ ಎಂದರು.

ಶ್ಲೋಕದ ಕಡೆಯಲ್ಲಿ ಬರುವ ಸರ್ವ ವಿಘ್ನೋಪ ಶಾಂತಯೇ ಎಂಬಂತೆ ಮನುಷ್ಯನ ಆರೋಗ್ಯ ಶಾಂತವಾಗಿ ಇರುವುದಿಲ್ಲ. ಬದಲಾಗಿ ಕಾಫಿ ಕುಡಿದು ಅನಾರೋಗ್ಯವನ್ನು ತರಿಸಿಕೊಳ್ಳುತ್ತೇವೆ ಎಂದು ಹೇಳಿದರು. ಭಾರತದ ದೇಸಿ ದನದ ಹಾಲನ್ನು ಕುಡಿದರೆ ಆರೋಗ್ಯ, ಮನಸ್ಸು ಎರಡೂ ಚೆನ್ನಾಗಿರುತ್ತದೆ. ಮನುಷ್ಯ ವಿಕೃತಿ ಮಾಡುತ್ತಾ ಹೋದರೆ ಸಮಸ್ಯೆಗಳಾಗುತ್ತದೆ ಎಂದರು.

ಕಾಫಿ ಶಬ್ದ ಸೃಷ್ಟಿಯಾದ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಸ್ವಾಮೀಜಿ, `ಕಾ’ ಅಂದರೆ ಕಾಲಕೂಟ(ವಿಷ) `ಪಿ’ ಅಂದರೆ ಪೂಯೂಶ(ಅಮೃತ). ಅಮೃತಕ್ಕೆ ಮನುಷ್ಯರು ವಿಷವೆಂಬ ಕಾಫಿ ಪುಡಿ ಹಾಕಿ ಸೇವಿಸುತ್ತಾರೆ. ಹಸುವಿನ ಶುದ್ಧ ಹಾಲನ್ನು ನೇರವಾಗಿ ಕುಡಿಯದೆ ಆರೋಗ್ಯಕ್ಕೆ ಒಳ್ಳೆಯದಲ್ಲದ ವಿಷಕಾರಿ ಅಂಶ ಬೆರೆಸಿ ಕುಡಿಯುವ ಪ್ರವೃತ್ತಿ ಮನುಷ್ಯನಿಗೆ ಅಂಟಿಕೊಂಡಿರುವ ಚಟ ಎಂದರು.

ಹಸುವಿನ ಹಾಲು, ಅದರ ಶ್ರೇಷ್ಠತೆ ಬಗ್ಗೆ ಮಾತನಾಡುತ್ತಾ ಕಾಫಿ ಬಗ್ಗೆ ಮಾತನಾಡಲು ಶುರು ಮಾಡಿದರು. ಈ ಮೂಲಕ ಕಾಫಿ ಪ್ರಿಯರಿಗೆ ಕೆಲ ಬುದ್ಧಿ ಮಾತನ್ನು ಕೂಡ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *