ದಾಖಲೆಯ ಪರ್ಯಾಯ ಮುಗಿಸುತ್ತಿರೋ ಪೇಜಾವರಶ್ರೀ- ಇಂದು ಕೃಷ್ಣನಿಗೆ ಕೊನೆಯ ಪೂಜೆ

Public TV
2 Min Read

ಉಡುಪಿ: ದಾಖಲೆಯ ಪಂಚಮ ಪರ್ಯಾಯ ಮಹೋತ್ಸವದ ಸಂಭ್ರಮ ಶುರುವಾಗಿದ್ದು, ಪೇಜಾವರಶ್ರೀಗಳು ದಾಖಲೆಯ ಪರ್ಯಾಯವನ್ನು ಮುಗಿಸುತ್ತಿದ್ದಾರೆ.

ಪೇಜಾವರ ಶ್ರೀಗಳು ಜನವರಿ 18ರಂದು ಪರ್ಯಾಯ ಪೀಠಾವರೋಹಣ ಮಾಡಲಿದ್ದಾರೆ. ಎರಡು ವರ್ಷಗಳ ಕಾಲ ಕಡೆಗೋಲು ಶ್ರೀಕೃಷ್ಣನ ಪೂಜೆ ಮಾಡಿದ್ದ ಪೇಜಾವರಶ್ರೀಗಳ ಪೂಜಾಧಿಕಾರ ಮುಗಿದಿದ್ದು, ಐತಿಹಾಸಿಕ ಐದು ಪರ್ಯಾಯಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಶ್ರೀಕೃಷ್ಣನ ಪೂಜಾಧಿಕಾರ ಪೇಜಾವರ ಮಠದಿಂದ ಪಲಿಮಾರು ಮಠಕ್ಕೆ ಹಸ್ತಾಂತರವಾಗಲಿದೆ.

ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಕಡೆಗೋಲು ಶ್ರೀಕೃಷ್ಣನಿಗೆ ತನ್ನ ಅಧಿಕಾರಾವಧಿಯ ಕೊನೆಯ ಎರಡು ಪೂಜೆಗಳನ್ನು ಇಂದು ಮಾಡಲಿದ್ದಾರೆ. ನಾಳೆಯಿಂದ ಉಡುಪಿ ಕೃಷ್ಣನಿಗೆ ಪೂಜೆ ಮಾಡುವ ಅಧಿಕಾರ ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿಯ ಪಾಲಾಗಲಿದೆ.

ಜನವರಿ 17ರ ಮಧ್ಯರಾತ್ರಿ 3 ಗಂಟೆಯಿಂದ ಬೆಳಗ್ಗಿನ ಜಾವ 7 ಗಂಟೆಯವರೆಗೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಈ ಸಂದರ್ಭದಲ್ಲಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರು ವಿದ್ಯಾಧೀಶ ಸ್ವಾಮೀಜಿಯವರಿಗೆ ಪೂಜಾಧಿಕಾರ ಮತ್ತು ಕೃಷ್ಣಮಠದ ಎಲ್ಲಾ ಅಧಿಕಾರಗಳನ್ನು ಹಸ್ತಾಂತರ ಮಾಡಲಿದ್ದಾರೆ. ಹೀಗಾಗಿ ಪಲಿಮಾರು ಶ್ರೀಗಳ ಪರ್ಯಾಯಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಪಲಿಮಾರು ಪರ್ಯಾಯ ಚೆನ್ನಾಗಿ ನಡೆಯಲಿ ಎಂದು ವಿಶ್ವೇಶತೀರ್ಥ ಶ್ರೀಗಳು ಆಶೀರ್ವಾದ ಮಾಡಿದ್ದಾರೆ. ಮುಂದಿನ ಪರ್ಯಾಯ ಸ್ವಾಮೀಜಿಗೆ ಹಿರಿಯ ಯತಿಗಳು ಶುಭಕೋರಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿಶ್ವೇಶತೀರ್ಥ ಸ್ವಾಮೀಜಿ, ನನ್ನ ಪರ್ಯಾಯ ನನಗೆ ಸಂತೃಪ್ತಿ ತಂದಿಲ್ಲ. ಸಂತೋಷವಿದೆ. ಹಲವಾರು ಸಾಮಾಜಿಕ ಕಾರ್ಯಗಳನ್ನುಮಾಡಿದ್ದ ಖುಷಿಯಿದೆ. ವಿರೋಧಗಳು ಬಂತು, ಚರ್ಚೆಗಳು ಆಗಿದೆ. ಹೀಗಾದಾಗ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ಸ್ವಾಮೀಜಿ ಹೇಳಿದರು. ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿಯ ವೈಭವದ ಪುರಪ್ರವೇಶ ನಡೆದಿದೆ. ನಗರದ ಪ್ರಮುಖ ಬೀದಿಗಳಲ್ಲಿ ಸ್ವಾಮೀಜಿಯವರನ್ನು ವಿಶೇಷ ಟ್ಯಾಬ್ಲೋದ ಮೂಲಕ ಮೆರವಣಿಗೆ ಮಾಡಿ ಉಡುಪಿ ಪುರದೊಳಗೆ ಕರೆದುಕೊಂಡು ಬರಲಾಗಿದೆ. ಮುಂದಿನ ಪರ್ಯಾಯ ಚೆನ್ನಾಗಿ ನಡೆಯುತ್ತದೆ ಎಂದು ಶುಭ ಹಾರೈಸಿದರು.

ಪರ್ಯಾಯ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಹೊರೆ ಕಾಣಿಕೆಗಳು ಬಂದಿದೆ. ಧಾರ್ಮಿಕ ವಿಧಿವಿಧಾನಗಳು ರಾತ್ರಿ ಆರಂಭವಾಗಲಿದ್ದು ಜನವರಿ 18ರ ಬೆಳಗ್ಗಿನ ಜಾವ ಆರು ಗಂಟೆಗೆ ಅನ್ನದ ಸಟ್ಟುಗ ಮತ್ತು ಅಕ್ಷಯ ಪಾತ್ರೆಯನ್ನು ಪೇಜಾವರ ಸ್ವಾಮೀಜಿ ಹಸ್ತಾಂತರ ಮಾಡುತ್ತಾರೆ. ಈ ಮೂಲಕ ಎರಡು ವರ್ಷದ ಪರ್ಯಾಯ ಮುಗಿಸಲಿದ್ದಾರೆ. ಪಲಿಮಾರು ಸ್ವಾಮೀಜಿ ತಮ್ಮ ಸನ್ಯಾಸ ಜೀವನದ ಎರಡನೇ ಪರ್ಯಾಯ ಆರಂಭ ಮಾಡಲಿದ್ದಾರೆ.

ಒಂದು ಬಾರಿ ಪರ್ಯಾಯ ಪೂಜಾಧಿಕಾರ ಸಿಕ್ಕರೆ ಮತ್ತೆ ಆ ಮಠಕ್ಕೆ ಕೃಷ್ಣನ ಪೂಜಾಧಿಕಾರ ಸಿಗೋದು 14 ವರ್ಷದ ನಂತರ. ಕೃಷ್ಣಮಠಕ್ಕೆ ಸಂಬಂಧಪಟ್ಟ ಒಟ್ಟು 8 ಮಠಗಳಿದ್ದು, ಪಲಿಮಾರು ಮಠ ತನ್ನ ಪರ್ಯಾಯವನ್ನು ಜನವರಿ 18 2018 ರಿಂದ 2020ರವರೆಗೆ ನಡೆಸಲಿದೆ. ಪೇಜಾವರಶ್ರೀಗಳಿಗೆ 8ನೇ ವಯಸ್ಸಿನಲ್ಲಿ ಸನ್ಯಾಸತ್ವ ಪಡೆದುದ್ದರಿಂದ ಈವರೆಗಿನ ಎಲ್ಲಾ ಸ್ವಾಮೀಜಿಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಮತ್ಯಾರೂ ಮಾಡಲು ಅಸಾಧ್ಯವಾದ ದಾಖಲೆಯನ್ನು ತನ್ನ ಹೆಸರಿನಲ್ಲೇ ಉಳಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *