ಕೋರ್ಟ್ ಧರ್ಮದ ತೀರ್ಮಾನ ಮಾಡಕೂಡದು: ಪೇಜಾವರ ಶ್ರೀ

Public TV
1 Min Read

– ರಾಮ ಮಂದಿರಕ್ಕೆ ವಿರುದ್ಧ ತೀರ್ಪು ಬಂದ್ರೆ ಮೊದಲು ನಾನೇ ವಿರೋಧಿಸುತ್ತೇನೆ

ಉಡುಪಿ: ಕೆಲದಿನಗಳ ಹಿಂದೆಯಷ್ಟೇ ಶಬರಿಮಲೆ ತೀರ್ಪು ಕುರಿತು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದಿದ್ದ ಉಡುಪಿ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಇಂದು, ಕೋರ್ಟ್ ಧರ್ಮದ ತೀರ್ಮಾನ ಮಾಡಕೂಡದು ಎಂದು ಗುಡುಗಿದ್ದಾರೆ.

ಎಂಜಿಎಂ ಮೈದಾನದಲ್ಲಿ ನಡೆದ ಧರ್ಮ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಧಾರ್ಮಿಕ ವಿಚಾರಗಳು ಕೋರ್ಟ್ ಗೆ ಯಾಕೆ? ಶಬರಿಮಲೆ ಹಿಂದೂ ಸಮಾಜದ ಕೇಂದ್ರ ಬಿಂದು. ಇಲ್ಲಿನ ಸಂಪ್ರದಾಯ ಬೇರೆ ಯಾವ ಕ್ಷೇತ್ರದಲ್ಲಿಯೂ ಇಲ್ಲ. ಧಾರ್ಮಿಕ ಶಿಸ್ತಿನ ಶಿಕ್ಷಣವನ್ನು ಅಯ್ಯಪ್ಪ ಕಲಿಸಿದ್ದಾನೆ. ನಿಯಮಬದ್ಧ ದೇವಾಲಯದ ವಿಚಾರದಲ್ಲಿ ಆಂದೋಲನ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನು ಓದಿ: ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸುಗ್ರಿವಾಜ್ಞೆ ಹೊರಡಿಸಲಿ: ಪೇಜಾವರ ಶ್ರೀ

ಕೋರ್ಟ್ ಧರ್ಮದ ತೀರ್ಮಾನ ಮಾಡಕೂಡದು. ಇಂತಹ ನಿರ್ಣಯವನ್ನು ಸಂತರು, ಭಕ್ತರು ಮಾಡಬೇಕು. ದೇವಸ್ಥಾನಗಳಿಗೆ ದಲಿತರ ಪ್ರವೇಶಕ್ಕೆ ಹಿಂದೂ ಸಮಾಜದ ಬೆಂಬಲವಿದೆ. ಆದರೆ ಕೋರ್ಟ್ ಧಾರ್ಮಿಕ ಪರಿವರ್ತನೆಯನ್ನು ಮಾಡಬಾರದು ಎಂದ ಶ್ರೀಗಳು, ಕೇರಳ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಪ್ರಜೆಗಳನ್ನು ಧಮನ ಮಾಡುತ್ತಿದೆ. ಇತ್ತ ಕೇರಳ ಸರ್ಕಾರವು ಸರ್ವಾಧಿಕಾರಿ ಧೋರಣೆ ತಾಳಿದೆ ಎಂದು ಆರೋಪಿಸಿದರು.

ಪಂದಳ ರಾಜರು, ಭಕ್ತರು, ಅರ್ಚಕರ ಅಭಿಪ್ರಾಯಕ್ಕೆ ಕೋರ್ಟ್ ಮನ್ನಣೆ ನೀಡಲಿ. ಹಿಂದೂ ಸಮಾಜ ಮಹಿಳೆಯರನ್ನು ತಿರಸ್ಕಾರ ಮಾಡಿಲ್ಲ. ನಮ್ಮ ಸಂಪ್ರದಾಯವನ್ನು ಮಹಿಳೆಯರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನು ಓದಿ: ಭಾರತದಲ್ಲಿ ರಾಮ ಮಂದಿರ ಕಟ್ಟಿಲ್ಲ ಅಂದ್ರೆ ಪಾಕಿಸ್ತಾನದಲ್ಲಿ ಕಟ್ಟಲು ಆಗುತ್ತಾ: ರೋಷನ್ ಬೇಗ್ ಪ್ರಶ್ನೆ

ರಾಮ ಮಂದಿರ ನಿರ್ಮಾಣದ ವಿರುದ್ಧವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದರೆ, ನಾನೇ ಮೊದಲು ವಿರೋಧಿಸುತ್ತೇನೆ. ಹಿಂದೂ ಸಮಾಜದವರು ದೇಶಾದ್ಯಂತ ಸಂಘಟಿತರಾಗಬೇಕು ಎಂದು ಪೇಜಾವರ ಶ್ರೀ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *