ಪೇಜಾವರ ಶ್ರೀಗಳಿಗೆ ಮುಖವಾಡ ಇರಲಿಲ್ಲ – ಬರಗೂರು ರಾಮಚಂದ್ರಪ್ಪ

Public TV
1 Min Read

ಧಾರವಾಡ: ಪೇಜಾವರ ಶ್ರೀಗಳ ನಿಧನ ನೋವಿನ ವಿಚಾರ, ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಕಂಬನಿ ಮಿಡಿದಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ವಿಚಾರಗಳಲ್ಲಿ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದವು, ಸೈದ್ಧಾಂತಿಕವಾಗಿ ಅವರು ನನ್ನ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಆದರೆ ಸಾವಿಗೆ ಯಾವುದೇ ಸಿದ್ಧಾಂತವಿಲ್ಲ. ಈ ಸಂದರ್ಭದಲ್ಲಿ ಅವರನ್ನು ನೆನೆಯಬೇಕು, ಏಕೆಂದರೆ ಅನೇಕ ಚರ್ಚೆಗಳಿಗೆ, ಚಿಂತನೆಗಳಿಗೆ ಅವರು ಮುಖಾಮುಖಿಯಾದವರು. ಇಂಥ ಅವರ ವ್ಯಕ್ತಿತ್ವ ತುಂಬಾ ಮುಖ್ಯ ಎಂದರು.

ವಿಚಾರವನ್ನು ಒಪ್ಪುವುದು ಬಿಡುವುದು ಬೇರೆ ಮಾತು. ಆದರೆ ಚರ್ಚೆ ಮಾಡುವ ಗುಣ ಬಹಳ ಮುಖ್ಯ. ಆ ಗುಣ ಅವರಲ್ಲಿ ಇತ್ತು. ಪೇಜಾವರ ಶ್ರೀಗಳಿಗೆ ಮುಖವಾಡ ಇರಲಿಲ್ಲ, ಚರ್ಚೆಗೆ ಅವರು ಎಲ್ಲ ವಿಚಾರಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಿದ್ದರು ಎಂದು ಶ್ರೀಗಳ ಕುರಿತು ವಿವರಿಸಿದರು.

ವೈಚಾರಿಕ ವಾಗ್ವಾದಕ್ಕೆ ಇಳಿಯುತ್ತಿದ್ದರು. ಅಂಥ ಚರ್ಚೆಗೆ ಕಾರಣವಾದ ಅವರು ಇಂದು ಇಲ್ಲ. ಪೇಜಾವರ ಶ್ರೀಗಳು ನಂಬಿದ ಚೌಕಟ್ಟಿನೊಳಗೆ ಇಫ್ತಾರ್ ಕೂಟ ಏರ್ಪಡಿಸಿದ್ದರು. ಅವರ ಈ ಧೈರ್ಯವನ್ನು ಇಂದು ನೆನಪಿಸಿಕೊಳ್ಳಬೇಕು. ಬೇರೆ ಧರ್ಮವನ್ನು ಗೌರವಿಸಿದ ಅವರಿಗೆ ತುಂಬು ಹೃದಯದಿಂದ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಬರಗೂರು ಈ ವೇಳೆ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *